ETV Bharat / state

ರಿಯಾಯಿತಿಯಲ್ಲಿ ಸಂಚಾರಿ ದಂಡ ಪಾವತಿಗೆ ಇಂದು ಅಂತಿಮ ದಿನ: ಭರ್ಜರಿ ದಂಡ ಸಂಗ್ರಹಣೆ ನಿರೀಕ್ಷೆ

author img

By

Published : Feb 11, 2023, 3:52 PM IST

Updated : Feb 11, 2023, 5:34 PM IST

ಶೇ 50 ರಿಯಾಯಿತಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ದಂಡವನ್ನು ಪಾವತಿಸಲು ವಾಹನ ಸವಾರರಿಗೆ ಸರ್ಕಾರ ಒಂಬತ್ತು ದಿನಗಳ ಅವಕಾಶ ನೀಡಿತ್ತು.

Today last day for subsidized traffic fine payment
ರಿಯಾಯತಿಯಲ್ಲಿ ಸಂಚಾರಿ ದಂಡ ಪಾವತಿಗೆ ಇಂದು ಅಂತಿಮ ದಿನ

ದಂಡ ಪಾವತಿಸಲು ಜನ ಮುಗಿಬಿದ್ದಿರುವುದು

ಬೆಂಗಳೂರು: ವಾಹನಗಳ ಮಾಲೀಕರು ಸಂಚಾರಿ ದಂಡ ಪಾವತಿಸಲು ನೀಡಲಾಗಿರುವ ಶೇ 50 ರಿಯಾಯಿತಿ ಅವಕಾಶಕ್ಕೆ ಕೊನೆಯ ದಿನವಾದ ಇಂದು ಸಹ ಭರ್ಜರಿ ದಂಡ ಸಂಗ್ರಹಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿ 2 ರಿಂದ ಆರಂಭವಾಗಿದ್ದ ಶೇ 50 ರಿಯಾಯಿತಿ ಅವಕಾಶದಿಂದಾಗಿ ವರ್ಷಗಳಿಂದ ಬಾಕಿ ಉಳಿದಿದ್ದ ಹಲವು ಪ್ರಕರಣಗಳ ಕೋಟ್ಯಂತರ ರೂಪಾಯಿ ದಂಡ ಸಂಗ್ರಹಣೆಯಾಗಿದೆ. ಅಂತಿಮ ದಿನವಾದ ಇಂದೂ ಸಹ ಬೆಂಗಳೂರು ಒನ್, ಸಂಚಾರಿ ನಿರ್ವಹಣಾ ಕೇಂದ್ರದಲ್ಲಿ ವಾಹನಗಳ ಮಾಲೀಕರು ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿಸುತ್ತಿದ್ದಾರೆ.

ರಿಯಾಯತಿ ಘೋಷಿಸಿದ ಆರಂಭದ ದಿನದಿಂದ ನಿನ್ನೆಯವರೆಗೂ (ರಾತ್ರಿ 8ಗಂಟೆಯವರೆಗಿನ ಮಾಹಿತಿ) 31.11 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದ 85.83 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಅಂತಿಮ ದಿನವಾದ ಇಂದು ದಂಡ ಪಾವತಿಗೆ ಜನರು ಮುಗಿಬಿದ್ದಿದ್ದು, ದಂಡ ಸಂಗ್ರಹ ನೂರು ಕೋಟಿ ರೂಪಾಯಿ ಆಸುಪಾಸಿಗೆ ತಲುಪುವ ನಿರೀಕ್ಷೆಯಿದೆ. ವಾರದ ಹಿಂದೆ ಸರ್ಕಾರ ಇದುವೆರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಬಿದ್ದಿದ್ದರೂ, ಆ ದಂಡವನ್ನು ಪಾತಿ ಮಾಡದೇ ಬಾಕಿ ಇಟ್ಟುಕೊಂಡಿದ್ದ ವಾಹನ ಸವಾರರಿಗೆ ಈ 50 ಶೇ ರಿಯಾಯಿತಿಯ ಆಫರ್​ ಅನ್ನು ಘೋಷಣೆ ಮಾಡಿತ್ತು.

ರಾಜ್ಯದಲ್ಲಿ ಸುಮಾರು 1300 ಕೋಟಿ ರೂಗಳಿಗೂ ಅಧಿಕ ದಂಡ ಪಾವತಿಗೆ ಬಾಕಿ ಇರುವ ಕುರಿತು ಕಳವಳ ವ್ಯಕ್ತಪಡಿಸಿದ್ದ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿತ್ತು. ಇದಕ್ಕೂ ಮುಂಚೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಚರ್ಚಿಸಲಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಶೇ 50 ರಿಯಾಯಿತಿ ನೀಡುವ ಕುರಿತು ನಿರ್ಧರಿಸಿ ಸಾರಿಗೆ ಇಲಾಖೆ ರಿಯಾಯಿತಿ ಆಫರ್​ನ ಆದೇಶ ಹೊರಡಿಸಿತ್ತು.

ರಿಯಾಯಿತಿಯಲ್ಲಿ ದಂಡ ಪಾವತಿಸಲು ವಾಹನ ಸವಾರರಿಗೆ ಒಂಬತ್ತು ದಿನಗಳು, ಇಂದಿನವೆರೆಗೆ ಅಂದರೆ ಫೆ.11ರ ವರೆಗೆ ಅವಕಾಶಗಳನ್ನು ನೀಡಲಾಗಿತ್ತು. ಆ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ವಾಹನ ಸವಾರರಿಗೆ ಇಂದು ಕೊನೆಯ ದಿನಾಂಕ. ಬೆಂಗಳೂರು ನಗರ ಸಂಚಾರ ಪೊಲೀಸ್​ ವಿಭಾಗ ಒಂದರಲ್ಲೆ ಹಲವು ವರ್ಷಗಳಿಂದ ಸುಮಾರು 2 ಕೋಟಿ ಪ್ರಕರಣಗಳ ಬಾಕಿ ಇದ್ದು, ಈ ರಿಯಾಯಿತಿ ದಂಡ ಪಾವತಿಗೆ ಅವಕಾಶ ಘೋಷಣೆಯಾದ ಮೊದಲ ದಿನವೇ ಬೆಂಗಳೂರು ನಗರದಲ್ಲಿ ಐದು ಕೋಟಿಗೂ ಹೆಚ್ಚು ದಂಡ ಪಾವತಿಯಾಗಿತ್ತು. ಹೀಗೆ ಪ್ರತಿ ದಿನವೂ ಕೋಟಿ ಕೋಟಿ ರೂಗಳ ದಂಡ ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಬೆಂಗಳೂರು ಮಾತ್ರವಲ್ಲದೆ ಈ ಆಫರ್​ ಇಡೀ ರಾಜ್ಯಕ್ಕೆ ಘೋಷಣೆಯಾದ ಕಾರಣ ರಾಜ್ಯದೆಲ್ಲೆಡೆ ಭಾರೀ ಮೊತ್ತದಲ್ಲಿ ದಂಡ ಪಾವತಿಯಾಗಿದೆ.

ಶೇ 50 ರಿಯಾಯಿತಿಯಲ್ಲಿ ದಂಡ ಪಾವತಿಸುವ ಆಫರ್​ ಅನ್ನು ಒಂಬತ್ತು ದಿನಗಳಿಂದ ಒಂದು ತಿಂಗಳ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಪ್​ ನಾಯಕರು ಮನವಿಯನ್ನೂ ಸಲ್ಲಿಸಿದ್ದರು.

ಇದನ್ನೂ ಓದಿ: ಸವಾರರಿಗೆ ಸರ್ಕಾರದ ಆಫರ್: ಗಾಡಿ ಮೇಲೆ ಟ್ರಾಫಿಕ್ ಫೈನ್ ಇದೆಯಾ? ದಂಡ ಕಟ್ಟಿ ಶೇ.50 ರಿಯಾಯಿತಿ ಪಡೆಯಿರಿ

Last Updated : Feb 11, 2023, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.