ETV Bharat / state

ಬಿಜೆಪಿ ಹೈಕಮಾಂಡ್​ನಿಂದ ಆಫರ್​ಗಳ ಸುರಿಮಳೆ : ಕೇಂದ್ರ ಸಚಿವ ಸ್ಥಾನ, ಗವರ್ನರ್ ಹುದ್ದೆ ಬೇಡವೆಂದ ಜಗದೀಶ್ ಶೆಟ್ಟರ್

author img

By

Published : Apr 16, 2023, 7:05 AM IST

Updated : Apr 16, 2023, 7:19 AM IST

ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ವಿಧಾನಸಭೆ ಟಿಕೆಟ್​ ನೀಡುವಂತೆ ಪಟ್ಟುಹಿಡಿದಿರುವ ಜಗದೀಶ್ ಶೆಟ್ಟರ್​ ಅವರ ಮನವೊಲಿಸಲು ನಿನ್ನೆ ರಾತ್ರಿ ಅವರ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಧರ್ಮೇಂದ್ರ ಪ್ರಧಾನ್​ ಭೇಟಿ ನೀಡಿ ಮಾತುಕತೆ ನಡೆಸಿದರು.

jagadish shettar
ಜಗದೀಶ್ ಶೆಟ್ಟರ್

ಜಗದೀಶ್​ ಶೆಟ್ಟರ್​ ಭೇಟಿ ಮಾಡಿದ ಬಿಜೆಪಿ ನಾಯಕರು

ಬೆಂಗಳೂರು/ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡದೇ ಇರಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಆಫರ್​ಗಳ ಸುರಿಮಳೆಯನ್ನೇ ಹರಿಸಿದೆ. ಕೇಂದ್ರ ಸಚಿವ ಸ್ಥಾನದಿಂದ ಹಿಡಿದು ರಾಜ್ಯಪಾಲರನ್ನಾಗಿ ನೇಮಕ ಮಾಡುವ ತನಕ ಉತ್ತಮ ಹುದ್ದೆಗಳ ಆಫರ್​ಗಳನ್ನು ನೀಡಿದ್ದು, ಇವೆಲ್ಲವನ್ನು ಶೆಟ್ಟರ್ ಅವರು ತಿರಸ್ಕಾರ ಮಾಡಿದ್ದಾರೆ.

ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಬಿಜೆಪಿಯ ಟಿಕೆಟ್ ಹೊರತುಪಡಿಸಿ ಬೇರಾವ ಹುದ್ದೆಯ ಆಸೆ ತಮಗಿಲ್ಲವೆಂದು ಹೈಕಮಾಂಡ್ ಸೂಚನೆಯಂತೆ ಮನವೊಲಿಸಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಚುನಾವಣೆ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆ ಟಿಕೆಟ್​ಗಾಗಿ ಪಟ್ಟುಹಿಡಿದಿರುವ ಶೆಟ್ಟರ್​ ಅವರ ಮನವೊಲಿಸಲು ಶನಿವಾರ ರಾತ್ರಿ ಅವರ ನಿವಾಸದಲ್ಲಿ ಸಂಧಾನ ಮಾತುಕತೆ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಬಿಜೆಪಿ ಹೈಕಮಾಂಡ್ ನೀಡಿದ ಆಫರ್​ಗಳ ಪಟ್ಟಿಯನ್ನು ಶೆಟ್ಟರ್ ಅವರ ಮುಂದೆ ಇಟ್ಟರು. ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡದೇ ಇರಲು ಹಾಗೂ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಲು ಹೈಕಮಾಂಡ್ ಒತ್ತಡ ಇರುವುದನ್ನು ಸಹ ಶೆಟ್ಟರ್ ಅವರ ಗಮನಕ್ಕೆ ತರಲಾಯಿತು.

ಬಿಜೆಪಿ ಹೈಕಮಾಂಡ್ ಜಗದೀಶ್​ ಶೆಟ್ಟರ್​ಗೆ ನೀಡಿದ ಆಫರ್​ಗಳ ಪಟ್ಟಿ ಹೀಗಿದೆ :

  1. ಶೆಟ್ಟರ್ ಕುಟುಂಬದ ಯಾವುದೇ ಸದಸ್ಯರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್
  2. ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿ ಕೇಂದ್ರ ಸಚಿವ ಸ್ಥಾನ ನೀಡುವುದು
  3. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್
  4. ದೇಶದ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ
  5. ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಅವರು ಸೂಚಿಸುವ ವ್ಯಕ್ತಿಗೆ ವಿಧಾನಸಭೆ ಚುನಾವಣೆ ಟಿಕೆಟ್

ಈ ಎಲ್ಲಾ ಆಫರ್​ಗಳನ್ನು ಜಗದೀಶ್ ಶೆಟ್ಟರ್ ಅವರು ಸಾರಾಸಗಟಾಗಿ ತಿರಸ್ಕಾರ ಮಾಡಿದ್ದಾರೆ. ತಮಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹೊರತುಪಡಿಸಿ ಬೇರೆ ಯಾವ ಆಸೆ ಇಲ್ಲ ಎಂದು ಮನವೊಲಿಕೆಗೆ ಆಗಮಿಸಿದ್ದ ಮುಖಂಡರುಗಳಿಗೆ ಸ್ಪಷ್ಟಪಡಿಸಿದ್ದಾರೆ. ಶಾಸಕರಾಗಿ ಆಯ್ಕೆಯಾಗುವುದೊಂದೇ ತಮ್ಮ ಪರಮ ರಾಜಕೀಯ ಗುರಿಯಾಗಿದೆ. ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಅಪೂರ್ಣಗೊಂಡಿರುವ ಕೆಲವು ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ತಾವು ಶಾಸಕರಾಗಿ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಲಿ, ಮುಖ್ಯಮಂತ್ರಿ ಹುದ್ದೆಗಾಗಲಿ ತಾವು ಪಟ್ಟು ಹಿಡಿಯುವುದಿಲ್ಲ ಎಂದು ಶೆಟ್ಟರ್ ಮಾತುಕತೆ ವೇಳೆ ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡ ಬಳಿಕ ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳಲು ಸಿದ್ಧವೆಂದು ತಿಳಿಸಿದ್ದಾರೆ.

ಹೋಟೆಲ್​ನಲ್ಲಿ ಮಾತುಕತೆಗೆ ಶೆಟ್ಟರ್ ನಿರಾಕರಣೆ: ಜಗದೀಶ್ ಶೆಟ್ಟರ್ ಜೊತೆ ಸಂಧಾನದ ಮಾತುಕತೆ ನಡೆಸಲು ಹುಬ್ಬಳ್ಳಿಯಲ್ಲಿನ ಖಾಸಗಿ ಹೋಟೆಲ್​ವೊಂದಕ್ಕೆ ಬರುವಂತೆ ತಿಳಿಸಲಾಯಿತು. ಇದಕ್ಕೆ ಒಪ್ಪದ ಜಗದೀಶ್ ಶೆಟ್ಟರ್ ಅವರು ಹೋಟೆಲ್​ಗೆ ಬರಲು ಸಾಧ್ಯವಿಲ್ಲ. ತಮ್ಮ ಮನೆಗೆ ಬಂದು ಮಾತಾಡಿ ಎಂದು ತಿಳಿಸಿದರೆನ್ನಲಾಗಿದೆ. ನಂತರ ಅನಿವಾರ್ಯವಾಗಿ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್​ ಜೋಶಿ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಶೆಟ್ಟರ್ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಮಾತುಕತೆ ವಿಫಲವಾದ ಬಳಿಕ ಶೆಟ್ಟರ್ ನಿರ್ಧಾರದ ಬಗ್ಗೆ ಬಂದಂತಹ ನಾಯಕರು ಅಸಮಾಧಾನ ವ್ಯಕ್ತಪಡಿಸಿ ಅಲ್ಲಿಂದ ತೆರಳಿದರು.

ಇದನ್ನೂ ಓದಿ : ಮನವೊಲಿಕೆ ಕಥೆ ಮುಗಿದು ಹೋಗಿದೆ: ಇವತ್ತೇ ಅಂತಿಮ ತೀರ್ಮಾನ - ಶೆಟ್ಟರ್​

ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶೆಟ್ಟರ್​, ಬಿಜೆಪಿ ಪಕ್ಷಕ್ಕೆ ಮತ್ತು ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಘೋಷಣೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಿರಸಿಯಲ್ಲಿ ಭೇಟಿ ಮಾಡಿ, ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಂತರ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ತಮ್ಮ ದೃಢ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Last Updated : Apr 16, 2023, 7:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.