ETV Bharat / state

ಜಿಕೆವಿಕೆ ಕೃಷಿಮೇಳ: ರೈತ ಸ್ನೇಹಿ ಪರ್ಯಾಯ ಮೂರು ತಳಿಗಳ ಪರಿಚಯ

author img

By ETV Bharat Karnataka Team

Published : Nov 17, 2023, 7:49 PM IST

Updated : Nov 17, 2023, 8:00 PM IST

KrishiMela in GKVK: ಈ ಮೂರೂ ತಳಿಗಳನ್ನು ಕಡಿಮೆ ನೀರಿನಲ್ಲಿ ಬೆಳೆಸಿ, ಅತ್ಯಧಿಕ ಇಳುವರಿ ಪಡೆಯುವುದರ ಜೊತೆಗೆ ಉತ್ತಮ ಮಾರುಕಟ್ಟೆ ಧಾರಣೆ ಪಡೆಯಬಹುದು.

Three new breeds introduced in gkvk krishimela
ರೈತ ಸ್ನೇಹಿ ಪರ್ಯಾಯ ಮೂರು ತಳಿಗಳ ಪರಿಚಯ

ಜಿಕೆವಿಕೆ ಆವರಣದಲ್ಲಿ ಕೃಷಿಮೇಳ ಉದ್ಘಾಟನಾ ಸಮಾರಂಭ

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇಂದು ಕೃಷಿಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ವಿಶೇಷ ಎಂದರೆ ಈ ಬಾರಿಯ ಕೃಷಿ ಮೇಳದಲ್ಲಿ ಬರ ಎದುರಿಸುತ್ತಿರುವ ರೈತರಿಗಾಗಿ, ರೈತ ಸ್ನೇಹಿ ಹಾಗೂ ಪರ್ಯಾಯ ತಳಿಗಳನ್ನು ಪರಿಚಯಿಸಲಾಗಿದೆ. ಈ ಮೂರೂ ತಳಿಗಳಲ್ಲಿ ಕಡಿಮೆ ನೀರು ಬಳಸಿ ಅತ್ಯಧಿಕ ಇಳುವರಿ ಜೊತೆಗೆ ಉತ್ತಮ ಮಾರುಕಟ್ಟೆ ಧಾರಣೆಯನ್ನು ಪಡೆಯಬಹುದಾಗಿದೆ.

ಯಾವ ಮಣ್ಣಿನಲ್ಲಿಯಾದರೂ ಸುಲಭವಾಗಿ ಬೆಳೆಯಬಹುದಾದ ಬೆಳೆ ಇದಾಗಿದ್ದು, ಮೊದಲನೆಯದ್ದು ಅತ್ಯಂತ ರುಚಿಕರವಾದ ಬದನೆಕಾಯಿ. ಒಂದು ಹೆಕ್ಟೇರ್​ಗೆ ಸುಮಾರು 80 ಗ್ರಾಂ ಬೀಜ ಸಾಕಾಗಲಿದೆ. ಇಳುವರಿ ಬಂದಾಗ ಬದನೆಕಾಯಿ ಸುಮಾರು 1- 1.5 ಕೆ.ಜಿ ತೂಕವಿರಲಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಕೆ.ಜಿಗೆ 40 ರೂ. ದರವಿದೆ. ಈ ಹೊಸ ತಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಬೇಡಿಕೆ ಇದೆ. ಕಾಯಿ ಭಾರವಿರುವ ಹಿನ್ನೆಲೆಯಲ್ಲಿ ಆಸರೆಯ ಅಗತ್ಯವಿದೆ.

Big Size Brinjal
ದೊಡ್ಡ ಗಾತ್ರದ ಬದನೆಕಾಯಿ

ಎರಡನೇಯದು ಅಲಂಕಾರಕ್ಕೆ ಬಳಸುವ ಸೂರ್ಯಕಾಂತಿ. 10 ದಿನಗಳ ಕಾಲ ಹೂವನ್ನು ಸಂರಕ್ಷಣೆ ಮಾಡಬಹುದಾಗಿದೆ. ಇದಕ್ಕೆ ಅಲ್ಪ ಪ್ರಮಾಣ ನೀರು ಸಾಕಾಗಲಿದೆ. ಮೂರನೇಯದು ಚೆರ್ರಿ ಟೊಮೆಟೊ. ಇದು ವಿದೇಶದ ತಳಿಯಾಗಿದೆ. ನಾಟಿ ಮಾಡಿದ 160-180 ದಿನದಲ್ಲಿ ಕಟಾವಿಗೆ ಬರಲಿದೆ. ಒಂದು ಹೆಕ್ಟೇರ್‌ಗೆ 40 ರಿಂದ 10 ಟನ್ ಇಳುವರಿ ಸಿಗಲಿದೆ. ಇವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿದ್ದು, ಹಸಿರು ಮನೆಯೊಳಗೆ ಬೆಳೆಸಿದರೆ ಉತ್ತಮ ಇಳುವರಿ ಸಹ ಸಿಗಲಿದೆ. ಬರ ಪರಿಸ್ಥಿತಿಯಲ್ಲಿ ಕಡಿಮೆ ನೀರು ಬಳಸಿಕೊಂಡು ಉತ್ತಮ ಬೆಳೆಯನ್ನು ಈ ಮೂರು ತಳಿಗಳಿಂದ ಪಡೆಯಬಹುದಾಗಿದೆ ಎಂದು ಜಿಕೆವಿಕೆ ಕೃಷಿ ವಿಜ್ಞಾನಿ ಡಾ.ಕೆ.ಎನ್. ಶ್ರೀನಿವಾಸಪ್ಪ ಹೇಳಿದ್ದಾರೆ.

Sunflower
ಸೂರ್ಯಕಾಂತಿ

ಆಕರ್ಷಣೆ ಕೇಂದ್ರವಾದ ಸರ್ಕಾರದ ಮಾಹಿತಿ ಪ್ರದರ್ಶನ ಮಳಿಗೆ: ಇಲ್ಲಿ ನಿರ್ಮಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಪ್ರದರ್ಶನದ ಮಳಿಗೆ ಹೆಚ್ಚು ಆಕರ್ಷಕವಾಗಿದೆ. ಕೃಷಿಮೇಳದ ಮಳಿಗೆಗಳ ಪ್ರದೇಶದಲ್ಲಿ ಮೊದಲ ಸಾಲಿನಲ್ಲಿರುವ ಮಾಹಿತಿ ಪ್ರದರ್ಶನ ಮಳಿಗೆಯ ವಿನ್ಯಾಸಯು ವಿಶೇಷವಾಗಿದ್ದು, ಛಾಯಾಚಿತ್ರಗಳನ್ನು ತೆಗೆಸಿಕೊಳ್ಳಲು ಅವಕಾಶದ ಜೊತೆಗೆ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನೂ ಇಲ್ಲಿ ಪಡೆಯಬಹುದಾಗಿದೆ.

Cherry tomato
ಚೆರ್ರಿ ಟೊಮೆಟೋ ತಳಿ ಪರಿಚಯ

ಮಾಹಿತಿ ಪ್ರದರ್ಶನ ಮಳಿಗೆಯಲ್ಲಿ ಅಳವಡಿಸಿರುವ ಫಲಕಗಳಲ್ಲಿ ಸರ್ಕಾರದ ಜನಪ್ರಿಯ ಹಾಗೂ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಮಾಹಿತಿಯ ಜೊತೆಗೆ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನೂ ಸಹ ಪ್ರದರ್ಶಿಸಲಾಗಿದೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಕಾರ್ಯಕ್ರಮಗಳಾದ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ 'ಶಕ್ತಿ' ಯೋಜನೆ, ಮನೆಯ ಯಜಮಾನಿಯರಿಗೆ ಆರ್ಥಿಕ ನೆರವು ಕಲ್ಪಿಸುವ, ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ 'ಗೃಹಲಕ್ಷ್ಮಿ' ಯೋಜನೆ, ಮನೆ - ಮನ ಬೆಳಗುವ ಭಾಗ್ಯದ ಬೆಳಕು 'ಗೃಹಜ್ಯೋತಿ' ಯೋಜನೆ, ಪ್ರತಿ ಫಲಾನುಭವಿಗೆ 10 ಕೆಜಿ ಉಚಿತ ಆಹಾರಧಾನ್ಯ ನೀಡುವ 'ಅನ್ನಭಾಗ್ಯ' ಯೋಜನೆ ಹಾಗೂ ಯುವಕರ ಶ್ರೇಯೋಭಿವೃದ್ಧಿಗಾಗಿ 'ಯುವನಿಧಿ' ಯೋಜನೆಗಳ ಮಾಹಿತಿಯಲ್ಲಿ ಇಲ್ಲಿ ಪ್ರದರ್ಶಿಸಲಾಗಿದೆ.

D K Shivakumar
ಮಳಿಗೆಗಳನ್ನು ವೀಕ್ಷಿಸಿದ ಡಿಸಿಎಂ ಡಿ ಕೆ ಶಿವಕುಮಾರ್​

ರಾಜ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಾದ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ 'ಜನತಾದರ್ಶನ', ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ, ಇಂದಿರಾ ಕ್ಯಾಂಟೀನ್ ಮರು ಪ್ರಾರಂಭ, ಕ್ಷೀರಾಭಾಗ್ಯಕ್ಕೆ ಹತ್ತರ ಸಂಭ್ರಮ, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ, ಬ್ರ್ಯಾಂಡ್ ಬೆಂಗಳೂರು, ಸಾಮಾಜಿಕ ಮಾಧ್ಯಮ ನಿರ್ವಹಣಾ ಕೋಶ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ಪ್ರದರ್ಶನ ಮಾಡಲಾಗಿದೆ.

ಅಷ್ಷೇ ಅಲ್ಲದೆ, ಮಾಹಿತಿ ಪ್ರದರ್ಶನ ಮಳಿಗೆಯಲ್ಲಿ ಭಾರತ ರತ್ನ ಪಡೆದ ಕನ್ನಡಿಗರು, ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ ಪುರಸ್ಕೃತರು, ಭಾರತವನ್ನು ಚಂದ್ರನ ಅಂಗಳಕ್ಕೆ ತಲುಪಿಸಿದ ಇಸ್ರೋ ವಿಜ್ಞಾನಿಗಳಿಗೆ ಸರ್ಕಾರ ಅಭಿನಂದಿಸಿ ಸಲ್ಲಿಸಿರುವ ಗೌರವ, ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನದ ವಿಶ್ವ ದಾಖಲೆ, ಕರ್ನಾಟಕ 50ರ ಸಂಭ್ರಮ ವಿಷಯಗಳ ಮಾಹಿತಿಗಳು ಸಹ ಪ್ರದರ್ಶಿಸಲಾಗಿದೆ.

DCM DK Sivakumar inaugurated the information display stall
ಮಾಹಿತಿ ಪ್ರದರ್ಶನದ ಮಳಿಗೆ ಉದ್ಘಾಟಿಸಿದ ಡಿಸಿಎಂ ಡಿ ಕೆ ಶಿವಕುಮಾರ್​

ಈ ಮಾಹಿತಿ ಪ್ರದರ್ಶನ ಮಳಿಗೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ರೈತರೊಂದಿಗೆ ಸಿಎಂ ಮಾತುಕತೆ: ಜಿಕೆವಿಕೆ ಆವರಣದಲ್ಲಿ ಕೃಷಿಮೇಳ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳೆ ಪ್ರಾತ್ಯಕ್ಷಿಕೆ ತಾಕುಗಳು ಹಾಗೂ ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರು. ಇದೇ ವೇಳೆ, ರೈತರೊಂದಿಗೆ ಮಾತುಕತೆ ನಡೆಸಿದರು. ಕೃಷಿ ವಿವಿ ಕುಲಪತಿ ಎಸ್ .ವಿ. ಸುರೇಶ್ ಹಾಗೂ ಕೃಷಿ ವಿಜ್ಞಾನಿಗಳು ರಾಗಿ, ಸೂರ್ಯಕಾಂತಿ, ಸಾಮೆ ಮತ್ತಿತರ ಹೊಸ ತಳಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರ ನೀಡಿದರು. ಈ ವೇಳೆ ಕೃಷಿ ಸಚಿವ ಚಲುವರಾಯ ಸ್ವಾಮಿ ಮತ್ತಿತರರು ಹಾಜರಿದ್ದರು. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ದಕ್ಷಿಣಕನ್ನಡ, ಮಂಗಳೂರು, ಮಂಡ್ಯ, ಮೈಸೂರು, ಕೋಲಾರ ಸೇರಿದಂತೆ ಬಹುತೇಕ ಜಿಲ್ಲೆಗಳಿಂದ ರೈತರು ಕೃಷಿ ಮೇಳಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ನಾಲ್ಕು ದಿನಗಳ ಕೃಷಿ ಮೇಳ ಉದ್ಘಾಟಿಸಿದ ಸಿಎಂ: ಈ ಬಾರಿಯ ಆಕರ್ಷಣೆಗಳೇನು?

Last Updated : Nov 17, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.