ETV Bharat / state

ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗದ ಮೀಸಲಾತಿ ವರದಿ ಸಲ್ಲಿಕೆ: ಶಿಫಾರಸುಗಳೇನು?

author img

By

Published : Mar 15, 2023, 2:10 PM IST

Updated : Mar 15, 2023, 4:18 PM IST

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ.

Backward Classes Commission Chairman K. Jayaprakash Hegde
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ

ಬೆಂಗಳೂರು : ಮಧ್ಯಂತರ ವರದಿ ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೇಲೆ ಸರ್ಕಾರದಿಂದ ಒತ್ತಡ ಇರಲಿಲ್ಲ. ಆದರೆ ಮಧ್ಯಂತರ ವರದಿ ಅವಶ್ಯಕತೆ ಇತ್ತು. ಹಾಗಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದೇವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ತಿಳಿಸಿದರು. ಆದರೆ ಅಂತಿಮ ವರದಿಗೆ ಕಾಲಮಿತಿ ಹಾಕಿಕೊಳ್ಳಲು ಸಾಧ್ಯವಿಲ್ಲ, ಅಗತ್ಯ ಸಮಯ ಪಡೆದೇ ವರದಿ ನೀಡುತ್ತೇವೆ ಎಂದರು.

ಜಾತಿ ಆಧಾರಿತ ಮೀಸಲಾತಿ: ವಸಂತನಗರದಲ್ಲಿರುವ ದೇವರಾಜು ಅರಸು ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನವೆಂಬರ್ 26, 2020 ರಲ್ಲಿ ಆಯೋಗ ರಚನೆಯಾಯಿತು. ಒಂದು ವರ್ಷ ನಮಗೆ ಕೋವಿಡ್ ಸಮಸ್ಯೆಯಿಂದ ಕೆಲಸ ಮಾಡಲು ಅಡೆತಡೆ ಬಂತು, ನಂತರ ಸಿಕ್ಕಿದ ಒಂದು ವರ್ಷದಲ್ಲಿ ಅನೇಕ ಕೆಲಸ ಮಾಡಿದ್ದೇವೆ. ಅದರಲ್ಲಿ ಪ್ರಮುಖವಾಗಿ ಅನಾಥ ಮಕ್ಕಳಿಗೆ ಮೀಸಲಾತಿ ಸಿಗಬೇಕು ಎಂದು ಪ್ರಯತ್ನಿಸಿದ್ದೇವೆ. ಹುಟ್ಟುವಾಗಲೇ ಅನಾಥರಾದರೆ ಅವರಿಗೆ ಯಾವ ಜಾತಿ ಎಂದು ಗೊತ್ತಿರಲ್ಲ. ಹಾಗಾಗಿ ಅವರಿಗೆ ಪ್ರವರ್ಗ 1 ರಲ್ಲಿ ಮೀಸಲಾತಿ ಕೊಡಬೇಕು. ಅದೇ ರೀತಿ ಹುಟ್ಟಿ ಕೆಲ ವರ್ಷಗಳಲ್ಲಿ ತಂದೆ ತಾಯಿ ಕಳೆದುಕೊಳ್ಳುವವರಿಗೆ ಜಾತಿ ಗೊತ್ತಿರಲಿದೆ, ಆ ಜಾತಿ ಆಧಾರಿತ ಮೀಸಲಾತಿ ಕೊಡುವ ಶಿಫಾರಸು ಮಾಡಿದ್ದೇವೆ ಎಂದರು.

ಹಿಂದುಳಿದ ವರ್ಗದ ಪ್ರಥಮ ವರದಿಯಲ್ಲಿ 17 ಜಾತಿಯ ಬಗ್ಗೆ ವರದಿ ಕೊಡಲಾಗಿದ್ದು, ದ್ವಿತೀಯ ವರದಿ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಅದರಲ್ಲಿ 16 ಜಾತಿ ವರದಿ ಕೊಡಲಾಗಿದೆ. ನಮ್ಮ ವಿಚಾರಣೆ ವೇಳೆ 133 ಮನವಿ ಸಲ್ಲಿಕೆ ಯಾಗಿದ್ದು ಅವರುಗಳ ಬಹಿರಂಗ ವಿಚಾರಣೆ ನಡೆಸಿ ಜಿಲ್ಲೆಗಳಿಗೆ ತೆರಳಿ ಸಾಮಾಜಿಕ, ಶೈಕ್ಷಣಿಕ ಗುಣಮಟ್ಟ ಅಧ್ಯಯನ ಮಾಡಿದ್ದೇವೆ ಎಂದು ತಿಳಿಸಿದರು.

ಪಂಚಮಸಾಲಿ ವಿಚಾರದಲ್ಲಿಯೂ ರಾಜ್ಯದಲ್ಲಿ ಓಡಾಡಿ, ಅವರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ್ದೇವೆ. ಸರ್ಕಾರಿ ಉದ್ಯೋಗದಲ್ಲಿ ಎಷ್ಟು ಜನ ಇದ್ದಾರೆ. ಇತರ ಜಾತಿಯಲ್ಲಿ ಸರ್ಕಾರಿ ಉದ್ಯೋಗಿಗಳು ಎಷ್ಟು ಇವೆ ಎಂದು ಅಧ್ಯಯನ ಮಾಡಿದ್ದೇವೆ. ಅದನ್ನು ಸಾಫ್ಟ್‌ವೇರ್ ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ. ಒಕ್ಕಲಿಗರ ಮೀಸಲಾತಿ ಮನವಿ ಇದೆ. ಆದರೆ ಅವರು ವಾದ ಮಂಡಿಸಲು ಸಮಯ ಕೇಳಿದ್ದಾರೆ. ಹಾಗಾಗಿ ಇನ್ನೂ ನಡೆದಿಲ್ಲ ಎಂದರು.

ಉದ್ಯೋಗ ನೀಡಿಕೆಯಲ್ಲಿ ತಂದೆ ತಾಯಿ ಆದಾಯವನ್ನೇ ಪರಿಗಣಿಸಬೇಕು: ಅಲೆಮಾರಿ ಸಮುದಾಯದವರ ಜಾತಿ ಜೊತೆ ಅಲೆಮಾರಿ ಎಂದು ಸೇರಿಸಲು ಮನವಿ ಮಾಡಿದ್ದಾರೆ. ಅದನ್ನೂ ಸರ್ಕಾರಕ್ಕೆ ತಿಳಿಸಿದ್ದೇವೆ. ಇದರ ಜೊತೆ ಮುಖ್ಯವಾಗಿ ಎಲ್ಲರಿಗೂ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ತೀರ್ಮಾನ ಮಾಡಿದ್ದೇವೆ. ಅದು ಗೆಜೆಟ್ ನೋಟಿಫಿಕೇಷನ್ ಆಗಲಿದೆ. ಉದ್ಯೋಗ ನೀಡಿಕೆಯಲ್ಲಿ ಆದಾಯ ಪ್ರಮಾಣ ಪತ್ರದಲ್ಲಿ ತಂದೆ ತಾಯಿ ಆದಾಯ ಪರಿಗಣಿಸಬೇಕು ಎಂದಿದೆ. ಆದರೆ ನಮ್ಮ ರಾಜ್ಯದಲ್ಲಿ ಗಂಡನ ಆದಾಯ ಪ್ರಮಾಣ ಪತ್ರ ಕೇಳಿದ ಉದಾಹರಣೆ ಇದೆ. ಆ ಕೇಸ್ ವಿಚಾರದಲ್ಲಿ ಕೋರ್ಟ್ ನಲ್ಲಿ ತಂದೆ ತಾಯಿ ಆದಾಯ ಪರಿಗಣಿಸಬೇಕು ಎಂದು ಆದೇಶ ನೀಡಿದೆ. ಇದನ್ನೂ ಸರ್ಕಾರಕ್ಕೆ ತಿಳಿಸಿದ್ದು, ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲು ಮನವಿ ಮಾಡಲಾಗಿದೆ. ಹಾಗಾಗಿ ಇನ್ನೂ ಮುಂದೆ ಉದ್ಯೋಗ ನೀಡಿಕೆಯಲ್ಲಿ ತಂದೆ ತಾಯಿ ಆದಾಯವನ್ನೇ ಪರಿಗಣಿಸಬೇಕು ಎಂದು ತಿಳಿಸಿದರು.

ವೀರಶೈವ ಲಿಂಗಾಯತದಲ್ಲಿ 3 ಬಿಯಲ್ಲಿ ಎ ಮತ್ತು ಬಿ ಎನ್ನುವ ವರ್ಗ ಇದೆ. ಎ ನಲ್ಲಿ ವೀರಶೈವ ಲಿಂಗಾಯತ ಒಂದು ಜಾತಿ. ಬಿ ಅಡಿ 23 ಜಾತಿ ಇತ್ತು. ನಂತರ 19 ಉಪ ಜಾತಿ ಸೇರಿಸಿ ಅದರಲ್ಲಿ ಪಂಚಮಸಾಲಿ ಬಿಟ್ಟು ಉಳಿದವನ್ನು ವಾಪಸ್ ಪಡೆಯಲಾಗಿದೆ. ಈಗ ವೀರಶೈವ ಲಿಂಗಾಯತ ಎ ನಲ್ಲಿ ಉಪಜಾತಿಗಳು ಯಾವು ಇರಲಿಲ್ಲ. ಅದಕ್ಕೂ ಒಂದು ವರದಿ ಕೊಟ್ಟಿದ್ದೇವೆ ಎಂದರು.

ಹಳೆಯದ್ದರ ಜೊತೆ ಲಿಂಗಾಯತ ಕುಡು ಒಕ್ಕಲಿಗ, ಆದಿಬಣಜಿಗ, ನೊಳಂಬ, ಮಲ್ಲವ/ಮಲ್ಲೇಗೌಡ, ಲಿಂಗಾಯತ ರೆಡ್ಡಿ, ಗೌಡ ಲಿಂಗಾಯತ, ಶಿವಸಿಂಪಿ, ಬಣಗಾರ, ಶಿವಾಚಾರ, ನಗರ್ತ, 24 ಮನೆ ತೆಲುಗುಶೆಟ್ಟಿ, ಆರೇರ, ಕನ್ನಡ ವೈಶ್ಯ, ಗಾಣಿಗ ಸಮುದಾಯದ ಉಪ ಜಾತಿಗಳು ಹಾಗು ವಿವಿಧ ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ವರದಿ ಸಲ್ಲಿಸಿ ಸರ್ಕಾರಕ್ಕೆ ಸಲ್ಲಿಸಲು ಸ್ವತೀಯ ವರದಿ ಸಿದ್ದಪಡಿಸಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ಆ ವರದಿ ಸಲ್ಲಿಕೆ ಮಾಡಲಾಗುತ್ತದೆ‌. ಈಗ ಹೊಸದಾಗಿ 22 ಜಾತಿ ಸೇರಿಸಿದ್ದರಿಂದ 45 ಜಾತಿ ಆಗಲಿದೆ.ಇದರಿಂದ ಉಪ ಜಾತಿಯವರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಪಡೆಯಲು ಸಹಾಯಕ ಆಗಲಿದೆ ಎಂದರು.

ನಮ್ಮ ಆಯೋಗ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ನೀಡಿದ್ದು ಅದನ್ನು ಮುಚ್ಚಿದ ಲಕೋಟೆಯಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಕೊಟ್ಟಿದೆ. ಹಾಗಾಗಿ ಅದರ ಬಗ್ಗೆ ಮಾಹಿತಿ ನೀಡಲ್ಲ, ಆದರೆ ಅಂತಿಮ ವರದಿ ನೀಡುವಾಗ ಎಲ್ಲ ವಿವರ ನೀಡಲಾಗುತ್ತದೆ. ಯಾರು ಧ್ವನಿ ಇಲ್ಲದವರು ಇದ್ದಾರೋ ಅವರನ್ನು ಗುರುತಿಸುವ ಕೆಲಸ ಆಯೋಗ ಮಾಡಿದೆ ಎಂದರು.

ಅಂತಿಮ ವರದಿ ನೀಡಲು ಕಾಲಮಿತಿ ಹಾಕಿಕೊಂಡಿಲ್ಲ: ಕಾಲಮಿತಿ ಹಾಕಿಕೊಂಡರೆ ವರದಿ ನೀಡಲು ಸಾಧ್ಯವಿಲ್ಲ. ಅಂಕಿ ಅಂಶ ಪಡೆದು ನಂತರವೇ ಕೆಲಸ ಮಾಡಬೇಕು ಹಾಗಾಗಿ ನಾವು ತರಾತುರಿ ಮಾಡಲ್ಲ. ಒಂದು ವೇಳೆ ಹಾಗಾದಲ್ಲಿ ಕೋರ್ಟ್ ಮೆಟ್ಟಿಲೇರಿದರೆ ಅನಗತ್ಯ ವಿಳಂಬವಾಗಲಿದೆ. ಹಾಗಾಗಿ ನಾವು ಅಗತ್ಯ ಸಮಯ ಪಡೆದೇ ವರದಿ ನೀಡಲಾಗುತ್ತದೆ. ಅಂತಿಮ ವರದಿ ನೀಡಲು ನಾವು ಕಾಲಮಿತಿ ಹಾಕಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲೆಮಾರಿ ವರ್ಗದಲ್ಲಿ ಈವರೆಗೆ 46 ಜಾತಿ ಇದೆ. ಇನ್ನು ಮೂರು ನಾಲ್ಕು ಜಾತಿ ಅಲೆಮಾರಿ ಸ್ಥಾನ ಕೇಳಿದ್ದು, ಆ ಬಗ್ಗೆಯೂ ವರದಿ ನೀಡಿದ್ದೇವೆ. ಕಾಂತರಾಜು ವರದಿಯಲ್ಲಿ ಮೆಂಬರ್ ಸೆಕ್ರೆಟರಿ ಸಹಿ ಮಾಡಿಲ್ಲ. ಅದರಿಂದ ಅದನ್ನು ಸರ್ಕಾರ ಸ್ವೀಕಾರ ಮಾಡಿಲ್ಲ. ಹೀಗಾಗಿ ನಾವು ಸರ್ಕಾರಕ್ಕೆ ಈ ಕುರಿತು ಪತ್ರ ಬರೆದಿದ್ದೇವೆ. ಆ ವಿಚಾರದಲ್ಲಿ ಆಯೋಗದಿಂದ ಏನು ನಿರೀಕ್ಷೆ ಮಾಡಲಾಗುತ್ತಿದೆ. ಅದೇ ವರದಿಯನ್ನು ನಾವು ಕೊಡಬೇಕಾ, ಹೊಸದಾಗಿ ಮಾಡಬೇಕು ಎಂದು ಕೇಳಿದ್ದೇವೆ.

ಆ ವಿಷಯ ಈಗ ಕೋರ್ಟ್‌ನಲ್ಲಿದೆ. ಈಗಿರುವ ಮೆಂಬರ್ ಸೆಕ್ರೆಟರಿ ಸಹಿ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಆಗ ಅವರು ಇರಲಿಲ್ಲ. ಹಾಗಾಗಿ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿಸಲಾಗಿದೆ. ಆದರೆ ಹಿಂದಿನ ಯಾವೆಲ್ಲಾ ವರದಿಗಳು ಸ್ವೀಕಾರವಾಗಿಲ್ಲವೋ ಆ ಎಲ್ಲ ವರದಿಗಳ ಫಾಲೋಅಪ್ ಮಾಡುತ್ತಿದ್ದೇವೆ. ನಮ್ಮ ಆಯೋಗದ ಅವಧಿ ನವೆಂಬರ್ ವರೆಗೂ ಇದೆ. ಹೊಸ ಸರ್ಕಾರ ಬಂದಾಗ ನಾವು ಅವರ ಭೇಟಿ ಮಾಡಲಿದ್ದೇವೆ, ಅವರು ಸಮ್ಮತಿಸಿದರೆ ನಾವು ನವೆಂಬರ್ ವರದಿಗೂ ಇರಲಿದ್ದೇವೆ, ಎಲ್ಲವೂ ಮುಂದಿನ ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಹೇಳಿದರು.

ಪರಿಷ್ಕೃತ ಹಿಂದುಳಿದ ವರ್ಗಗಳ ಪ್ರವರ್ಗಗಳ ಮೀಸಲಾತಿ ಪಟ್ಟಿಯನ್ನು ಮುದ್ರಿಸಿ ಆಯೋಗದಿಂದಲೇ ರಾಜ್ಯದ ಎಲ್ಲ ಗ್ರಾಪಂಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಕೆಲವು ಜಾತಿಗಳ ಹೆಸರು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿಯೂ ಸಹ ಸೇರ್ಪಡೆಗೊಂಡಿದೆ. ಇದರಿಂದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳಿಗೆ ಗೊಂದಲವುಂಟಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿರುತ್ತದೆ.

ಇಂತಹ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಿ ಹಾಗೂ ಕೆಲವು ಜಾತಿಗಳ ಹೆಸರುಗಳಲ್ಲಿನ ಅಗತ್ಯ ಕಾಗುಣಿತ ತಿದ್ದುಪಡಿ ಮಾಡಿ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಮುದ್ರಿಸಿ ವಿತರಿಸಲು ಉದ್ದೇಶಿಸಲಾಗಿದೆ.ರಾಜ್ಯ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಈಗಾಗಲೇ ಸೇರ್ಪಡೆಗೊಂಡಿರುವ ಜಾತಿಗಳು, ಕರ್ನಾಟಕ ರಾಜ್ಯ ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವ ಜಾತಿಗಳನ್ನು ಸಹ ಸೇರ್ಪಡೆಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಕೇಂದ್ರ ಮಿಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಕಾಗುಣಿತ, ಒತ್ತಕ್ಷರಗಳನ್ನು ತಿದ್ದುಪಡಿ ಮಾಡುವಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹಿಂದುಳಿದ ವರ್ಗಗಳ ವಿವಿಧ ಜಾತಿ ಮತ್ತು ಉಪಜಾತಿಗಳಿಗೆ ಸೇರಿದ ಸರಕಾರಿ ನೌಕರರು ಹಾಗೂ ವಿದ್ಯಾರ್ಥಿಗಳ ಮಾಹಿತಿ ಒದಗಿಸುವಂತೆ 8 ತಿಂಗಳ ಹಿಂದೆಯೇ ಕೇಳಿಕೊಳ್ಳಲಾಗಿದ್ದು, ಇದುವರೆಗೆ ಶೇ. 50ರಷ್ಟು ಮಾಹಿತಿ ಮಾತ್ರ ಬಂದಿದೆ. ಇನ್ನೂಳಿದ ಮಾಹಿತಿ ಬಂದಲ್ಲಿ ಯಾವ ಜಾತಿ ಯಾವ ಪ್ರಮಾಣದಲ್ಲಿ ಸರಕಾರಿ ಸೌಲಭ್ಯ ಪಡೆದುಕೊಂಡಿದ್ದಾರೆ ಮತ್ತು ಶಿಕ್ಷಣ ಪಡೆದಿದ್ದಾರೆ ಎಂಬುದು ಗೊತ್ತಾಗಲಿದೆ ಎಂದರು. ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಹೆಚ್.ಎಸ್.ಕಲ್ಯಾಣಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ.ಸುವರ್ಣ, ಅರುಣಕುಮಾರ್,ಶಾರದಾ ನಾಯ್ಕ ಇದ್ದರು.

ಇದನ್ನೂ ಓದಿ: LIVE: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮಾಧ್ಯಮಗೋಷ್ಟಿ

Last Updated :Mar 15, 2023, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.