ETV Bharat / state

ಸಂಪತ್ ರಾಜ್ ಆರೋಗ್ಯ ತಪಾಸಣೆ ನಡೆಸಲು ರೆಡಿಯಾದ ಐವರು ವೈದ್ಯರ ತಂಡ

author img

By

Published : Oct 25, 2020, 12:28 PM IST

ಐವರು ವೈದ್ಯರ ತಂಡ ಮಾಜಿ ಮೇಯರ್​ ಸಂಪತ್ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಯಾವ ವೈದ್ಯ ಸಂಪತ್​​ ಆರೋಗ್ಯ ತಪಾಸಣೆ ಮಾಡಿದ್ದು, ಹಾಗೆಯೇ ಪತ್ರ ರವಾನೆ ಮಾಡಿದ್ದು ಯಾರು ಎಂಬುದನ್ನು ತಿಳಿಯುವುದರ ಜೊತೆಗೆ ಸಂಪತ್​ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಲು ಈ ವೈದ್ಯರ ತಂಡ ಮುಂದಾಗಿದೆ.

Sampath Raj
ಮಾಜಿ ಮೇಯರ್ ಸಂಪತ್ ರಾಜ್

ಬೆಂಗಳೂರು: ಡಿ ಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ವಿಚಾರದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಮತ್ತೆ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಿದೆ. ಹೌದು, ಸಂಪತ್ ರಾಜ್ ಆರೋಗ್ಯದ ಕುರಿತು ಪರಿಶೀಲನೆ ನಡೆಸಲು ಐವರು ವೈದ್ಯರ ತಂಡ ರೆಡಿಯಾಗಿದ್ದು, ಸಂಪತ್ ಕೊಟ್ಟಿರುವ ಕಾರಣದ ಬಗ್ಗೆ ಈ ತಂಡ ಪರಿಶೀಲನೆ ನಡೆಸಲಿದೆ.

ಡಿ ಜೆ ಹಳ್ಳಿ ಗಲಭೆ ಪ್ರಕರಣದಡಿ ಪ್ರಾಥಮಿಕವಾಗಿ ಸಿಸಿಬಿ ಅಧಿಕಾರಿಗಳು ಸಂಪತ್​ ರಾಜ್​ ಅವರನ್ನು ವಿಚಾರಣೆಗೆ ಒಳಪಡಿಸಿದ್ರು. ಎರಡನೇ ಬಾರಿ ವಿಚಾರಣೆಗೆ ಕರೆದಾಗ ಸಂಪತ್ ರಾಜ್ ಕೋವಿಡ್​​ ಸಂಬಂಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ, ಜೊತೆಗೆ ಬೆನ್ನು ನೋವು ಸಹ ಇದೆ ಎಂದು ವೈದ್ಯರ ಮೂಲಕ‌ ಸಿಸಿಬಿ ಅಧಿಕಾರಿಗಳಿಗೆ ಪತ್ರ ರವಾನಿಸಿದ್ರು. ಈ ಹಿನ್ನೆಲೆ ಇತ್ತೀಚೆಗೆ ಸಂಪತ್ ರಾಜ್ ಆರೋಗ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿಸಿಬಿ, ಆರೋಗ್ಯ ಇಲಾಖೆಗೆ ಪತ್ರ ಬರೆದು ಸಂಪತ್ ಆರೋಗ್ಯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದರು.

ಸಿಸಿಬಿ ಮನವಿಗೆ ಸ್ಪಂದಿಸಿರುವ ಆರೋಗ್ಯ ಇಲಾಖೆ ಐವರು ವೈದ್ಯರ ತಂಡವನ್ನು ನೇಮಕ ಮಾಡಿದೆ. ಈ ವೈದ್ಯರ ತಂಡದಿಂದ ಸಂಪತ್ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಯಾವ ವೈದ್ಯ ಸಂಪತ್​​ ಆರೋಗ್ಯ ತಪಾಸಣೆ ಮಾಡಿದ್ದು, ಹಾಗೆಯೇ ಪತ್ರ ರವಾನೆ ಮಾಡಿದ್ದು ಯಾರು ಎಂಬುದನ್ನು ತಿಳಿಯುವುದರ ಜೊತೆಗೆ ಸಂಪತ್​ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಲು ಈ ತಂಡ ಸಜ್ಜಾಗಿದೆ ಎಂದು ತಿಳಿದುಬಂದಿದೆ.

ನಿಜಕ್ಕೂ ಸಂಪತ್ ರಾಜ್​​ಗೆ ಕೊರೊನಾ ಇದೆಯಾ? ಬೆನ್ನು ನೋವು ಸಮಸ್ಯೆ ಇದೆಯಾ? ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಸಿಸಿಬಿಗೆ ಮಾಹಿತಿ ನೀಡಲಿದ್ದಾರೆ. ಒಂದು ವೇಳೆ ಸುಳ್ಳು ನೆಪವೊಡ್ಡಿ ಪರಾರಿಯಾಗಲು ಪ್ರಯತ್ನಪಟ್ಟಿದ್ದು ನಿಜಾವಾದರೆ ಮಾಜಿ ಮೇಯರ್​​ಗೆ ಸಂಕಷ್ಟ ತಪ್ಪಿದ್ದಲ್ಲ ಎಂದು 'ಈಟಿವಿ ಭಾರತ'ಗೆ ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.