ETV Bharat / state

'ಕೆಪಿಎಸ್​ಸಿ ಮುಂದೆ ಪ್ರತಿಭಟನಾನಿರತ ವಿದ್ಯಾರ್ಥಿ ಮುಖಂಡನ ಬಂಧನ ನಿರ್ದಯಿ ಕ್ರಮ'

author img

By ETV Bharat Karnataka Team

Published : Jan 14, 2024, 12:42 PM IST

ಕರ್ನಾಟಕ ಲೋಕಸೇವಾ ಆಯೋಗದ ವಿಳಂಬ ಧೋರಣೆಯ ವಿರುದ್ಧ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಯ ಬಂಧನಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್​ ವಿರೋಧ ವ್ಯಕ್ತಪಡಿಸಿದ್ದಾರೆ.

Former minister Suresh Kumar
ಮಾಜಿ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿಳಂಬ ಪ್ರವೃತ್ತಿಯನ್ನು ಖಂಡಿಸಿ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಮುಖಂಡನನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದು ಅತ್ಯಂತ ನಿರ್ದಯಿ ಕ್ರಮ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಯೋಗದ ಕಾರ್ಯ ವೈಖರಿಯಿಂದ ಸಹಸ್ರಾರು ಉದ್ಯೋಗಾಕಾಂಕ್ಷಿ ಯುವಕ-ಯುವತಿಯರು ಬೇಸತ್ತಿದ್ದಾರೆ. ಆಯೋಗದ ಒಟ್ಟು ನಡವಳಿಕೆಯಿಂದ ತಮಗೆ ಭವಿಷ್ಯವೇ ಇಲ್ಲವೇನೋ ಎಂಬ ಹತಾಶ ಭಾವನೆ ತಲುಪುತ್ತಿದ್ದಾರೆ. ಇದೀಗ ಆಯೋಗದ ಮತ್ತೋರ್ವ ಕಾರ್ಯದರ್ಶಿ ಮತ್ತು ಆಯೋಗದ ಸದಸ್ಯರ ನಡುವೆ ಯಥಾ ಪ್ರಕಾರ ಸಂಘರ್ಷ ಪ್ರಾರಂಭವಾಗಿದೆ. ಈ ಕುರಿತು ನಾನು ನಿರಂತರವಾಗಿ ಸರ್ಕಾರಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇನೆ. ಇವರಿಬ್ಬರ ನಡುವಿನ ಜಗಳದಲ್ಲಿ ಉದ್ಯೋಗಾಕಾಂಕ್ಷಿಗಳು ಬಡವಾಗುತ್ತಿದ್ದಾರೆ.

ಯಾರಿಗೂ ತೊಂದರೆ ಕೊಡದೆ ಏಕಾಂಗಿಯಾಗಿ ಉದ್ಯೋಗಾಕಾಂಕ್ಷಿಗಳ ಪರ ಪ್ರತಿಭಟನೆ ನಡೆಸುತ್ತಿದ್ದಾಗ ವಿದ್ಯಾರ್ಥಿ ಮುಖಂಡನನ್ನು ಧರಧರನೆ ಎಳೆದುಕೊಂಡು ಹೋದ ದೃಶ್ಯ ಅತ್ಯಂತ ಅಸಮರ್ಥನೀಯ. ಅದರಲ್ಲೂ ಅವರ ವಿರುದ್ಧ ಜಾಮೀನುರಹಿತ ಸೆಕ್ಷನ್​ಗಳಡಿ ಎಫ್.ಐ.ಆರ್​ ದಾಖಲಿಸಿರುವ ಪೊಲೀಸರ ಕ್ರಮ ಖಂಡನೀಯ.

ಕರ್ನಾಟಕ ಸೇವಾ ಆಯೋಗ ಕೇವಲ ತಕರಾರು ಮಾಡುವ ಜಾಯಮಾನ ತೊರೆದು, ಒಂದು ಕಾಲಮಿತಿಯಲ್ಲಿ ಕೆಲಸ ಮಾಡಿ ಯಶಸ್ವಿ ಅಭ್ಯರ್ಥಿಗಳ ಪಟ್ಟಿಗಳನ್ನು ಬಿಡುಗಡೆ ಮಾಡುವ ಕಾರ್ಯ ಮಾಡುತ್ತಿದ್ದರೆ ಈ ಯುವಕರು ಪ್ರತಿಭಟನೆ ಮಾಡುವ ಅವಶ್ಯಕತೆಯೇ ಇರಲಿಲ್ಲ. ಆದರೆ ಈ ಯುವಕರ ಕೂಗು ಆಯೋಗದ ಕಚೇರಿಯಿಂದ ಅನತಿ ದೂರದಲ್ಲೇ ಇರುವ ವಿಧಾನಸೌಧಕ್ಕೆ ಮುಟ್ಟದಿರುವುದು ಛೇದಕರ.

ಇನ್ನಷ್ಟು ಪ್ರತಿಭಟನೆಗಳು ಆಗದಂತೆ ತಡೆಯಲು ಈ ಯುವ ಆಕಾಂಕ್ಷಿಗಳು ಸಿನಿಕರಾಗದಂತೆ ಎಚ್ಚರ ವಹಿಸಲು ಸೂಕ್ತ ಕ್ರಮಗಳ ಅಗತ್ಯವಿದೆ. ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಆಯೋಗದ ಅಧ್ಯಕ್ಷರಿಗೆ ಮತ್ತು ಸದಸ್ಯರುಗಳಿಗೆ ಅಗತ್ಯ ತಿಳುವಳಿಕೆ ನೀಡಬೇಕೆಂದು, ಆಯೋಗವು ತನ್ನ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕೆಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.