ETV Bharat / state

ಕಾವೇರಿ ವಿವಾದ: ನೀರಿನ ವಿಚಾರದಲ್ಲಿ ರಾಜಕೀಯ ಇಲ್ಲ- ಸಚಿವ ಜಿ ಪರಮೇಶ್ವರ್

author img

By ETV Bharat Karnataka Team

Published : Sep 21, 2023, 7:38 PM IST

ಡೆಡ್ ಸ್ಟೋರೇಜ್ ಹೊರತುಪಡಿಸಿ ಉಳಿಯುವ 10 ಟಿಎಂಸಿ ನೀರಿನಲ್ಲಿ ನಾವು ನೀರು ಬಿಡುವುದು ಹೇಗೆ? ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.

Minister Dr G Parameshwar
ಸಚಿವ ಡಾ ಜಿ ಪರಮೇಶ್ವರ್

ಬೆಂಗಳೂರು: ಇವತ್ತು ಕಾವೇರಿ ನೀರಿನ ವಿಚಾರದಲ್ಲಿ ತೀರ್ಪು ಬಂದಿದೆ. ನೀರೇ ಇಲ್ಲದೇ ಇರುವ ಸಂದರ್ಭದಲ್ಲಿ ನಮ್ಮ ಅಹವಾಲು ಸರಿಯಾದ ರೀತಿ ಕೇಳಿದ್ದರೂ ನ್ಯಾಯಾಲಯವು ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಹೇಳಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡೆಡ್ ಸ್ಟೋರೇಜ್ ಹೊರತುಪಡಿಸಿ ಉಳಿಯುವ 10 ಟಿಎಂಸಿ ನೀರಿನಲ್ಲಿ ನಾವು ನೀರು ಬಿಡುವುದು ಹೇಗೆ? ಎಂದು ಪ್ರಶ್ನಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೊಟ್ಟ ಸಲಹೆ ಏನಿದೆ? ಐದು ಸಾವಿರ ಕ್ಯೂಸೆಕ್ ನೀರು ಬಿಡುವ ವಿಚಾರ ಅದಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಕೂಡ ವಕೀಲರು ಕೊಟ್ಟಿದ್ದಾರೆ. ನೀರು ಎಷ್ಟಿದೆ, ಏನು ಅನ್ನೋದನ್ನೂ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಎಲ್ಲಾ ಕಡೆ ಪ್ರತಿಭಟನೆ ಆಗುತ್ತಿದೆ. ಪ್ರತಿಭಟನೆ ಉಗ್ರ ರೂಪ ಪಡೆಯಬಾರದು ಅಷ್ಟೇ. ಮುಖ್ಯಮಂತ್ರಿ ಅವರು ನಗರಕ್ಕೆ ಬಂದ ಬಳಿಕ ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದರು.

ಕಾವೇರಿ ಭಾವನಾತ್ಮಕ ವಿಚಾರ ಹೋರಾಟ ನಮ್ಮ ಜನರ ಹಕ್ಕು. ಹಾಗಂತ ಅಹಿತಕರ ವಾತಾವರಣ ನಿರ್ಮಿಸಬೇಡಿ. ಕಾನೂನು ಮುಖ್ಯ ಅನ್ನೋದನ್ನು ಮರೆಯಬೇಡಿ. ಸಂಕಷ್ಟ ಸೂತ್ರ ರಚನೆ ಬೇಕೇಬೇಕು‌. ಅದು ಇಲ್ಲವೆಂದರೆ ಈ ಸಮಸ್ಯೆ ಹಾಗೆ ಆಗುತ್ತದೆ ಎಂದು ಹೇಳಿದರು.

ಹೊಂದಾಣಿಕೆಗೋಸ್ಕರ ರಾಜ್ಯ ಬಲಿ ಕೊಡುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಬಲಿ ಕೊಡುವುದಾದರೆ ನೀರು ಬಿಡುತ್ತಿರಲಿಲ್ಲ. ನಾವು ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ರಾಜಕೀಯ ಕಾರಣಕ್ಕಾಗಿ ಅವರು ಹಾಗೆ ಮಾತನಾಡುತ್ತಿದ್ದಾರೆ. ನಾವು ಮೈತ್ರಿಕೂಟ ವಿಚಾರದಲ್ಲಿ ರಾಜ್ಯ ರಾಜಕೀಯ ಬೆರೆಸುವುದಿಲ್ಲ. ನಮಗೆ ಅದರ ಅವಶ್ಯಕತೆ ಇಲ್ಲ. ಸೋನಿಯಾ ಗಾಂಧಿ ಅವರು ಮೈತ್ರಿಕೂಟಕ್ಕೆ ಏನು ಹೇಳಲು ಸಾಧ್ಯ‌. ಈ ವಿಚಾರದಲ್ಲಿ ರಾಜಕೀಯ ಸಲ್ಲದು. ರಾಜಕೀಯ ಮಾಡುವುದಷ್ಟೇ ಎಲ್ಲದಕ್ಕೂ ಉತ್ತರವಲ್ಲ ಎಂದು ಬಿಜೆಪಿ ಟೀಕೆಗೆ ಪರಮೇಶ್ವರ್ ತಿರುಗೇಟು ಕೊಟ್ಟರು.

ಮಂಡ್ಯದಲ್ಲೂ ಕಾವೇರಿದ ಕಿಚ್ಚು: ರೈತರು ಪ್ರತಿಭಟನೆ- ಮಂಡ್ಯದಲ್ಲಿ ಕಾವೇರಿ ಹೋರಾಟ ಹೆಚ್ಚಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರೋ ರೈತರು, ನೀರು ಬಿಟ್ಟಿದ್ದೇ ಆದಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇಂದು ರೈತರು ಮಂಡ್ಯದ ಸಂಜಯ ವೃತ್ತದಲ್ಲಿ ಮೈಸೂರು ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

Raitha Sangh and Kasturi Karnataka Peoples Forum protest
ಮದ್ದೂರಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ

ಇನ್ನು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಮುಂದುವರೆಸಿದ್ದು, ಇದೇ 23 ರಂದು ಮಂಡ್ಯ ಬಂದ್ ಗೆ ಕರೆ ಕೊಟ್ಟಿದೆ. ಪಾಂಡವಪುರದಲ್ಲಿ ರೈತ ಸಂಘದ ಕಾರ್ಯಕರ್ತರು ಐದು ದೀಪದ ಸರ್ಕಲ್ ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದ್ರೆ, ಭೂಮಿತಾಯಿ ಹೋರಾಟ ಸಮಿತಿ ಕೆಆರ್​​​​​ಎಸ್​​ಗೆ ಮುತ್ತಿಗೆ ಹಾಕಲು ಯತ್ನಿಸಿತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಸುಪ್ರೀಂ ತೀರ್ಪಿನ ನಂತರ ರೈತರು ಹೋರಾಟ ತೀವ್ರಗೊಳಿಸಿದ್ದು, ಮುಂದಿನ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.

ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ಹೇಳಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಈ ಹಿನ್ನೆಲೆ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮದ್ದೂರು ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿದರು.

ಇದನ್ನೂಓದಿ: ಕರ್ನಾಟಕ ಬಂದ್ ಮಾಡುವ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳುತ್ತೇವೆ: ವಾಟಾಳ್​ ನಾಗರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.