ETV Bharat / state

ಸಬ್ ರಿಜಿಸ್ಟರ್ ಕಚೇರಿ ಮೂಲಸೌಕರ್ಯ ಕೊರತೆ ನೀಗಿಸಿ, ಇಲ್ಲವಾದರೆ ಕ್ರಮ: ಸಚಿವ ಅಶೋಕ್

author img

By

Published : Sep 6, 2022, 9:14 AM IST

ರಾಜ್ಯದ 36 ರಿಜಿಸ್ಟರ್ ಕಚೇರಿಗಳಲ್ಲಿ ಶೌಚಾಲಯದ ಕೊರತೆ, 28 ಕಚೇರಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಕೊರತೆ, 202 ಕಚೇರಿಗಳಲ್ಲಿ ಲಿಫ್ಟ್ ಕೊರತೆ, 135 ಕಚೇರಿಗಳಲ್ಲಿ ರ‍್ಯಾಂಪ್​ಗಳ ಕೊರತೆ ಇವೆ.

Minister R Ashok
ಸಚಿವ ಆರ್​ ಅಶೋಕ್​

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯಾಪ್ತಿಯ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಮೂರು ತಿಂಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

3 ತಿಂಗಳ ಒಳಗಾಗಿ ಎಲ್ಲ ವ್ಯವಸ್ಥೆ ಸರಿಗೊಳಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಹಲವು ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ ಮತ್ತು ಉಪನೋಂದಣಿ ಕಛೇರಿಗೆ ಆಗಮಿಸುವ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ ಮತ್ತು ಉಪನೋಂದಣಿ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.

ಏನೆಲ್ಲಾ ಕೊರತೆಗಳು ಪತ್ತೆ?: ಶೌಚಾಲಯ ಕೊರತೆಗಳಿರುವ ರಿಜಿಸ್ಟರ್ ಕಚೇರಿಗಳ ಸಂಖ್ಯೆ 36 ಪತ್ತೆಯಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕೊರತೆ ಇರುವ ಕಚೇರಿಗಳ ಸಂಖ್ಯೆ 28 ಇದೆ. ಲಿಫ್ಟ್ ಕೊರತೆ ಇರುವ ಕಚೇರಿಗಳ ಸಂಖ್ಯೆ 202 ಇವೆ. ಇನ್ನು 135 ಕಚೇರಿಗಳಲ್ಲಿ ರ‍್ಯಾಂಪ್​ಗಳ ಕೊರತೆ ಇವೆ.

2 ಕಚೇರಿಗಳಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆಸನದ ಕೊರತೆ ಇರುವುದು ಕಂಡು ಬಂದಿದೆ. 58 ಕಚೇರಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶದ ಕೊರತೆ ಇದೆ. ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ತಮ್ಮ ಅಧೀನದಲ್ಲಿರುವ ಉಪ ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಈ ಮೂಲಭೂತ ಸೌಲಭ್ಯಗಳ ಕೊರತೆ ಇರುವ ಕಛೇರಿಗಳಲ್ಲಿ ಕೂಡಲೇ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಇಲಾಖೆ ಆಯುಕ್ತರ ಸೂಚಿಸಿದ್ದಾರೆ.

ಈ ಮೂಲಭೂತ ಸೌಕರ್ಯ ಒದಗಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳದ ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ: ಸಚಿವ ಆರ್ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.