ETV Bharat / state

ರಾಜಧಾನಿಯಲ್ಲಿ ಮತದಾರರನ್ನು ಬೆದರಿಸಿ ರೌಡಿಸಂ ನಡೆಸಿದ್ದು ಕಂಡು ಬಂದರೆ ಕಟ್ಟು ನಿಟ್ಟಿನ ಕ್ರಮ: ಜಿಲ್ಲಾ ಚುನಾವಣಾಧಿಕಾರಿ

author img

By

Published : May 2, 2023, 6:44 PM IST

ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಈಗಾಗಲೇ ಎಲ್ಲ ತಯಾರಿ ನಡೆಸಿದ್ದೇವೆ ಎಂದು ತುಷಾರ್ ಗಿರಿನಾಥ್ ಹೇಳಿದರು.

Returning officer Tushar Girinath
ಚುನಾವಣಾಧಿಕಾರಿ ತುಷಾರ್ ಗಿರಿನಾಥ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತದಾರರನ್ನು ಬೆದರಿಸಿ ರೌಡಿಸಂ ಹಾಗೂ ಇನ್ನಿತರ ಅಕ್ರಮ ಚಟುಚಟಿಕೆ ನಡೆಸಿದ್ದು ಕಂಡು ಬಂದರೆ. ಅಂಥವರ ಹೆಡೆಮುರಿ ಕಟ್ಟಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ‌.

ನಗರದಲ್ಲಿ ಇಂದು ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ತುಷಾರ್ ಗಿರಿನಾಥ್, ಈಗಾಗಲೇ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಪೊಲೀಸರು ರೌಡಿಗಳ ಚಟುವಟಿಕೆಗಳನ್ನು ನಿಯಂತ್ರಣ ಮಾಡಲಾಗಿದೆ. ಜೊತೆಗೆ, ಅತಿ ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ ಇಡಲಾಗಿದೆ. ಒಂದು ವೇಳೆ ಮತದಾರರ ಮೇಲೆ ಪ್ರಭಾವ ಅಥವಾ ಬೆದರಿಕೆ ಹಾಕಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

250 ರೌಡಿ ಶೀಟರ್​ಗಳು, ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವವರ ಮೇಲೆ ನಿಗಾ ಇಡಲಾಗಿದೆ. ಆಮಿಷಕ್ಕೆ ಒಳಗಾಗಿ ಮತ ನೀಡುವುದು ಮತ ನೀಡದಿರುವುದಕ್ಕಿಂತ ದೊಡ್ದ ಘಾತಕ ಕೆಲಸವಾಗಿದೆ. 200 ಕ್ಕೂ ಹೆಚ್ಚು ಫ್ಲೈಯಿಂಗ್ ಸ್ಕ್ವಾಡ್ಸ್ ಕೂಡ ಹಲವು ವಿಚಾರಗಳ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಿವೆ. ಮತಗಟ್ಟೆಗಳ ಭದ್ರತೆ ಮತ್ತು ಚುನಾವಣಾ ಅಕ್ರಮ ತಡೆಯಲು ಪ್ಯಾರಾ ಮಿಲಿಟರಿ, ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಿದೆ. ಸಿವಿಜಿಲ್ ಆ್ಯಪ್ ಮೂಲಕ ದೂರುಗಳನ್ನು ನಾಗರಿಕರು ನೀಡುತ್ತಿದ್ದಾರೆ. ಮಾದ್ಯಮಗಳು ಕೂಡ ಈ ಎಲ್ಲ ವ್ಯವಸ್ಥೆಯ ಪರಿಚಯವನ್ನು ಇನ್ನಷ್ಟು ಮಾಡಬೇಕು ಎಂದು ತುಷಾರ್ ಗಿರಿನಾಥ್ ಹೇಳಿದರು.

ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀವು ವಾಸಿಸುವ ಸ್ಥಳದಲ್ಲಿ ಏನಾದರೂ ಅಕ್ರಮ ಅಥವಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ. ಮತ್ತು ಸಿವಿಜಿಲ್‌ ತಂತ್ರಾಂಶದಲ್ಲಿ ಭಾವಚಿತ್ರ ಹಾಗೂ ವಿಡಿಯೋ ಮೂಲಕ ದೂರು ದಾಖಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ. 28 ವಿಧಾನಸಭಾ ಕ್ಷೇತ್ರಗಳಲ್ಲಿ ಫ್ಲೈಯಿಂಗ್, ಮೊಬೈಲ್, ಮೈಕ್ರೋ ಅಬ್ಸವರ್ಸ್​​​ರನ್ನು ಹೆಚ್ಚಿಸಲಾಗುವುದು. ಈವರೆಗೆ ನಗರದಲ್ಲೇ 82 ಕೋಟಿ ಯಷ್ಟು ಹಣ, ಹೆಂಡ, ಚಿನ್ನ, ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಬೆಂಗಳೂರು ನಗರದಲ್ಲಿ ಶೇ.52ರಷ್ಟು ಮಾತ್ರ ಮತದಾನವಾಗುತ್ತಿದ್ದು, ಅದನ್ನು ಶೇ.75ಕ್ಕೆ ಹೆಚ್ಚಿಸಲು ಭಾರತ ಚುನಾವಣಾ ಆಯೋಗ, ಬಿಬಿಎಂಪಿ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಯುವ ಮತದಾರರು ತಮ್ಮ ವಿವೇಚನೆ ಹಾಗೂ ಮಾನದಂಡದ ಪ್ರಕಾರ ಸರಿಯಾದ ಅಭ್ಯರ್ಥಿಗೆ ಮತದಾನ ಮಾಡಬೇಕು. ಒಂದು ಮತವನ್ನು ಕೂಡಾ ನಾವು ಕಡೆಗಣಿಸುವಂತಿಲ್ಲ. ಆದ್ದರಿಂದ ಎಲ್ಲರೂ ತಮ್ಮ- ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಬೇಕು ಎಂದು ತುಷಾರ್ ಗಿರಿನಾಥ್ ಕರೆ ಕೊಟ್ಟರು.

ಹೊಟೇಲ್ ಟೆಕ್ಸ್ಟೈಲ್ ಅಸೋಸಿಯೇಷನ್ ಸೇರಿದಂತೆ ಹಲವು ಉದ್ಯಮಿಗಳಿಗೆ ಸ್ವತಃ ಕಾರ್ಮಿಕರಿಗೆ ರಜೆ ಕೊಡಲು ಕೇಳಿಕೊಂಡಿದ್ದೇನೆ. ಸಕ್ಷಮ ಆ್ಯಪ್ ಮೂಲಕ ಮಾತಗಟ್ಟೆಗಳ ಮಾಹಿತಿ ಸಂಪೂರ್ಣವಾಗಿ ನಾಗರಿಕರಿಗೆ ದೊರೆಯಲಿದೆ. ಜಯನಗರ, ಮಲ್ಲೇಶ್ವರಂ ನಲ್ಲಿ ಅತಿ ಹೆಚ್ಚು ಹಿರಿಯ ಮತದಾರರಿದ್ದು, ಅವರಿಗೆ ಮನೆ ಮನೆಗೆ ಹೋಗಿ ಅಂಚೆ ಮತದಾನದ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ನಗರದಲ್ಲಿ 1.32 ಕೋಟಿ ಜನಸಂಖ್ಯೆ ಇದ್ದು, 97.15 ಲಕ್ಷ ಮತದಾದರರಿದ್ದಾರೆ. ಒಟ್ಟು 1.43 ಲಕ್ಷ ಯುವ ಮತದಾರರು ಇದ್ದಾರೆ. ಈ ಬಾರಿ 8 ಲಕ್ಷ ಜನರನ್ನು ಸೇರಿಸಲಾಗಿದೆ, 6 ಲಕ್ಷ ಜನರನ್ನು ಮತ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಮತದಾದರರ ಪಟ್ಟಿ ಜನಸಂಖ್ಯೆಗೆ ಹೋಲಿಸಿದರೆ ಶೆ 63 ರಷ್ಟು ಇದೆ. 304 ವಿಶೇಷ 5 ಮಹಿಳೆಯರಿಗಾಗಿ, 1 ಕೇವಲ ವಿಶೇಷಚೇತನರಿಗಾಗಿ ಮತಕಟ್ಟೆ ಇರಲಿದೆ. ಮಾನಸಿಕ ಅಸ್ವಸ್ಥ ಎಂದು ಕೋರ್ಟ್ ಹೇಳಿರುವುದನ್ನು ಹೊರತುಪಡಿಸಿ ಎಲ್ಲರಿಗೂ ಮತದಾನದ ಮಾಡುವ ಹಕ್ಕಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

15 ಜನವರಿಯಿಂದ 10 ಏಪ್ರಿಲ್ ಹೊಸ ಮತದಾರರ ನೋಂದಣಿ ಮಾಡಿಕೊಳ್ಳಲಾಗಿದ್ದು, ಮೊದಲ ಬಾರಿಗೆ ನೋಂದಣಿಯಾದ ಮತದಾರರಿಂದ ಮತಪಟ್ಟಿಯಲ್ಲಿ ಸೇರಿಸುವುದು ಮೊದಲ ಆದ್ಯತೆ ಆಗಿದೆ. ಅವರಿಗೆ ಎಪಿಕ್ ನಂಬರ್ ತಲುಪಿಸುವ ಕೆಲಸ ಮೆಸೇಜ್ ಇಮೇಲ್ ಮೂಲಕ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕನಿಷ್ಟ ಪಕ್ಷ ಚುನಾವಣಾ ದಿನಾಂಕದ 5 ದಿನದ ಮೊದಲು ವಿವರಗಳನ್ನು ನೀಡುವುದು ಸವಾಲಿನ ಕೆಲಸವಾಗಿದ್ದು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಚಿಲುಮೆ ಸಂಸ್ಥೆಯ ಕುರಿತ ಪತ್ರಕರ್ತರ ಪ್ರಶ್ನೆಗೆ ಟೆಂಡರ್ ವ್ಯವಸ್ಥೆಯ ಪ್ರಕ್ರಿಯೆ ಪಾರದರ್ಶಕವಾಗಿದೆ. ಆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅವರಿಗೆ ಯಾವುದೇ ಟೆಂಡರ್ ಕೊಡಲಾಗಿಲ್ಲ. ಸಂಸ್ಥೆಯ ವಿರುದ್ಧ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಸಿದರು.

ಹಲವರ ಪ್ರಶ್ನೆಗಳಿಗೆ ಉತ್ತರಿಸಿ ಬಿಬಿಎಂಪಿ ಆಡಳಿತ ವ್ಯವಸ್ಥೆಯು ಹಲವು ವರ್ಷಗಳಿಂದಲೂ ಸವಾಲುಗಳನ್ನು ಎದುರಿಸಿಕೊಂಡೇ ಬಂದಿದೆ. ಬೇರೆ ಬೇರೆ ಸವಾಲುಗಳು ಇದ್ದೇ ಇವೆ. ಎಲ್ಲ ಸವಾಲುಗಳನ್ನು ಎದುರಿಸಲು ಆಡಳಿತ ಯಂತ್ರವು ಸಮರ್ಥವಾಗಿದೆ. ನಗರದಲ್ಲಿ ಕರ್ತವ್ಯ ನಿಭಾಯಿಸುವುದು ಕ್ಲಿಷ್ಟಕರವಾಗಿದ್ದು, ಆದರೆ, ಅದಕ್ಕೆಲ್ಲಾ ಹೆದರುವುದಿಲ್ಲ. ಅನುಭವಿ ಅಧಿಕಾರಿ, ಸಿಬ್ಬಂದಿಯ ನೆರವಿನೊಂದಿಗೆ ಸನ್ನಿವೇಶ, ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು.

ರಸ್ತೆ ಗುಂಡಿಗಳ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ರಸ್ತೆಗಳಲ್ಲಿ ಸಣ್ಣ ಗುಂಡಿ ಬೀಳುತ್ತಿದ್ದಂತೆಯೇ ಅದನ್ನು ಮುಚ್ಚಬೇಕು. ಇಲ್ಲವಾದಲ್ಲಿ ಗುಂಡಿ ಬದಲು ಹಳ್ಳ ಮುಚ್ಚಬೇಕಾಗುತ್ತದೆ. ರಸ್ತೆ ಗುಂಡಿ ಸಮಸ್ಯೆ ಪ್ರತಿ ವರ್ಷವೂ ಇರುತ್ತದೆ. ಜನರು ಗುಂಡಿ ಮುಕ್ತ ರಸ್ತೆಗಳನ್ನು ಅಪೇಕ್ಷಿಸುತ್ತಾರೆ. ಅವರ ಅಪೇಕ್ಷೆ ಈಡೇರಿಸಲು ಸಕಲ ಪ್ರಯತ್ನ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಪ್ರಮುಖರಿದ್ದರು.

ಇದನ್ನೂ ಓದಿ : ಹೆಲಿಪ್ಯಾಡ್​ನಲ್ಲಿ ಸಿಲುಕಿಕೊಂಡ ಮೋದಿ ಭದ್ರತಾ ಸೇನಾ ಹೆಲಿಕಾಪ್ಟರ್​: ಚಾಪರ್​ ಮೇಲಕ್ಕೆತ್ತಲು ಭರದ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.