ಬೆಂಗಳೂರು: ಮಾರಕ ಕೊರೊನಾ ವೈರಸ್ ಅದೆಷ್ಟೋ ಜನರ ಬದುಕನ್ನು ಅತಂತ್ರವಾಗಿಸಿದೆ. ವೈರಸ್ ಭೀತಿಯಲ್ಲಿ ಸರ್ಕಾರ 60 ದಿನಗಳಿಂದ ಲಾಕ್ಡೌನ್ ಘೋಷಿಸಿದೆ. ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಬೇಸಿಗೆ ಸಮಯದಲ್ಲಿ ರಸ್ತೆ ಬದಿ ಮಾರಾಟ ಮಾಡುವ ಮಜ್ಜಿಗೆ, ನಿಂಬೆ ಹಣ್ಣಿನ ಷರಬತ್ತು ಅಂಬಲಿಗೆ ತುಂಬಾ ಬೇಡಿಕೆ ಇರಲಿದೆ. ಅಷ್ಟೇ ಅಲ್ಲದೆ, ರಾಗಿ ಅಂಬಲಿಗೂ ಹೆಚ್ಚು ಬೇಡಿಕೆ. ಲಾಕ್ಡೌನ್ ಆಗಿರುವ ಕಾರಣ ಈ ವ್ಯಾಪಾರಿಗಳ ಕಷ್ಟ ಕೇಳೋರಿಲ್ಲದಂತಾಗಿದೆ. ಈ ಕುರಿತು ರಸ್ತೆ ಬದಿ ಮಜ್ಜಿಗೆ, ರಾಗಿ ಅಂಬಲಿ ಮಾರಾಟದ ವ್ಯಾಪಾರಿಗಳು ಈಟಿವಿ ಭಾರತ ಜೊತೆ ತಮ್ಮ ನೋವು ತೋಡಿಕೊಂಡಿದ್ದಾರೆ.
ನಿತ್ಯ ₹ 600-700 ವ್ಯಾಪಾರ ಮಾಡುತ್ತಿದ್ದೆ. ಈಗ ನೂರಿನ್ನೂರು ವ್ಯಾಪಾರ ಕೂಡ ಆಗುತ್ತಿಲ್ಲ. ವ್ಯಾಪಾರ ಮಾಡುವುದು ಬೇಡ ಎಂದರೆ ಜೀವನ ನಿರ್ವಹಿಸಲು ಕಷ್ಟ ಆಗಲಿದೆ. ವ್ಯಾಪಾರ ಇಲ್ಲದೇ, ನಿತ್ಯ ವ್ಯಾಪಾರ ಆಗದೇ ಅಂಬಲಿಯನ್ನು ಹಸುಗಳಿಗೆ ಹಾಕುತ್ತಿದ್ದೇನೆ. ಸರ್ಕಾರ ನಮ್ಮಂತಹ ವ್ಯಾಪಾರಿಗಳಿಗೂ ನೆರವು ನೀಡಿದರೆ ತುಂಬಾ ಸಹಾಯ ಆಗಲಿದೆ ಎಂದು ರಾಗಿ ಅಂಬಲಿ ವ್ಯಾಪಾರಿ ಶೇಖರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.