ETV Bharat / state

ಸಂಪುಟ ವಿಸ್ತರಣೆಯತ್ತ ಹೈಕಮಾಂಡ್ ಚಿತ್ತ: ಆಕಾಂಕ್ಷಿತರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ

author img

By

Published : Dec 25, 2022, 11:18 AM IST

Updated : Dec 25, 2022, 2:16 PM IST

ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಸಹಿತ ದೆಹಲಿಗೆ ಬರುವಂತೆ ಸಿಎಂ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಕೆ.ಎಸ್.ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ.

BJP National President JP Nadda CM Basavaraja Bommai
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನ ಹೊಂದಿರುವವರು ಬಂಡಾಯದ ಚಟುವಟಿಕೆಗಳಲ್ಲಿ ತೊಡಗುವ ಮುನ್ಸೂಚನೆ ಅರಿತ ಹೈಕಮಾಂಡ್, ಸಚಿವ ಸಂಪುಟ ವಿಸ್ತರಣೆಯತ್ತ ಗಮನ ಹರಿಸಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಳೆ (ಸೋಮವಾರ) ಸಚಿವ ಸ್ಥಾನದ ಆಕಾಂಕ್ಷಿತರ ಪಟ್ಟಿಯೊಂದಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದೆ.

ಜೆ.ಪಿ.ನಡ್ಡಾ ಜೊತೆ ಸಮಾಲೋಚನೆ: ಸೋಮವಾರ ದೆಹಲಿಗೆ ತೆರಳುತ್ತಿರುವ ಸಂಗತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದಾರೆ. ಆದರೆ ಯಾವ ವಿಷಯದ ಮೇಲೆ ದೆಹಲಿಗೆ ಭೇಟಿ ನೀಡಲಾಗುತ್ತಿದೆ ಎಂಬ ಸಂಗತಿಯನ್ನು ಗೌಪ್ಯವಾಗಿಟ್ಟಿದ್ದಾರೆ. ಈಟಿವಿ ಭಾರತಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ವಿಷಯವಾಗಿಯೇ ನಡ್ಡಾ ಬಳಿ ಸಮಾಲೋಚನೆ ನಡೆಸಲು ಬೆಳಗಾವಿ ಅಧಿವೇಶನದ ನಡುವೆಯೂ ದೆಹಲಿಗೆ ತೆರಳುತ್ತಿದ್ದಾರೆ.

ಈಶ್ವರಪ್ಪ, ಜಾರಕಿಹೊಳಿ ಅತೃಪ್ತಿ: ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಹಿರಿಯ ನಾಯಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಪಕ್ಷದ ಹೈಕಮಾಂಡ್ ಮತ್ತು ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮುನ್ಸೂಚನೆ ನೀಡಿದ್ದರು.

CM  with  KS Eshwarappa, Ramesh Jarakiholi
ಕೆ ಎಸ್ ಈಶ್ವರಪ್ಪ, ರಮೇಶ ಜಾರಕಿಹೊಳಿ ಜತೆಗೆ ಸಿಎಂ

ಈ ಬಗ್ಗೆ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ ಇಬ್ಬರೂ ನಾಯಕರ ಜತೆ ಚರ್ಚಿಸಿ ಹೈಕಮಾಂಡ್ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ಬರುವ ಆಶ್ವಾಸನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಭರವಸೆ ಮೇರೆಗೆ ಬೆಳಗಾವಿ ಅಧಿವೇಶನದ ಕಾರ್ಯಕಲಾಪಗಳಿಂದ ದೂರ ಉಳಿದು ಮೌನ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸಚಿವ ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿಯವರು ತಮ್ಮ ಅಸಮಾಧಾನ ಮರೆತು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ಹೈಕಮಾಂಡ್ ತೀರ್ಮಾನ: ಸಚಿವ ಸಂಪುಟ ವಿಸ್ತರಣೆ ಮಾಡಬೇಕಾ? ಕೆಲವು ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡು ಸಂಪುಟ ಪುನರ್ ರಚನೆ ಮಾಡಬೇಕಾ? ಎನ್ನುವ ಬಗ್ಗೆ ಮಾಹಿತಿ ಜೊತೆಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಹೆಸರಿನ ಪಟ್ಟಿಯನ್ನು ಸಿಎಂ ಸಿದ್ಧಪಡಿಸಿಕೊಂಡಿದ್ದು ದೆಹಲಿ ಭೇಟಿ ವೇಳೆ ಜೆ.ಪಿ.ನಡ್ಡಾ ಅವರ ಜತೆ ಸಮಾಲೋಚಿಸಿ ಹೈಕಮಾಂಡ್ ತೀರ್ಮಾನದಂತೆ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

ಚುನಾವಣೆ ಲಾಭದ ಲೆಕ್ಕಾಚಾರ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ನಡೆಸುವುದು ಉತ್ತಮವೇ ಅಥವಾ ಕೆಲವು ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಟ್ಟು ಹೊಸಬರಿಗೆ ಸಚಿವರಾಗುವ ಅವಕಾಶ ನೀಡಿ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಸಾಧ್ಯತೆಗಳ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆಯತೊಡಗಿದೆ.

ಕಳಂಕದ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪೊಲೀಸ್ ತನಿಖೆ ಎದುರಿಸಿ ಕ್ಲೀನ್ ಚಿಟ್ ದೊರೆತ ಮಾಜಿ ಸಚಿವ ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿಯವರನ್ನಷ್ಟೇ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡರೆ ಪರಿಣಾಮಗಳೇನಾಗಬಹುದು ಎನ್ನುವುದರ ಬಗ್ಗೆಯೂ ಪಕ್ಷದ ವೇದಿಕೆಯಲ್ಲಿ ಸಮಾಲೋಚನೆಗಳು ನಡೆಯುತ್ತಿವೆ.

ಇದನ್ನೂಓದಿ: ಪಂಚಮಸಾಲಿಗಳಿಗೆ 2ಎ ಮೀಸಲಾತಿ ಜಾರಿಯಿಂದ ಉದ್ಯೋಗ, ಶಿಕ್ಷಣದಲ್ಲಿ ಸಿಗಲಿದೆ 'ಡಬಲ್ ಬಂಪರ್' ಲಾಭ..!

Last Updated : Dec 25, 2022, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.