ETV Bharat / state

ಪರಿಷತ್ ಕಲಾಪ: ರಾಜ್ಯದ ಮಳೆಹಾನಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಂದ ನಿಲುವಳಿ ಸೂಚನೆ ಮಂಡನೆ

author img

By

Published : Sep 13, 2022, 10:27 PM IST

ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿರುವ ಮಳೆಹಾನಿಯ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್​ ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ನಾಳೆಗೆ ರೂಲಿಂಗ್ ಮಾಡಲಾಗಿದೆ.

standing-notice-submitted-by-congress-in-assembly-was-ruled
ಪರಿಷತ್ ಕಲಾಪ: ರಾಜ್ಯದ ಮಳೆಹಾನಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಂದ ನಿಲುವಳಿ ಸೂಚನೆ ಸಲ್ಲಿಕೆ

ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ನೆರೆ, ಮಳೆ ಹಾನಿ ಕುರಿತು ಚರ್ಚೆ ನಡೆಸಲು ನಿಯಮ 59ರಡಿ ಚರ್ಚೆಗೆ ಕಾಂಗ್ರೆಸ್ ಅವಕಾಶ ಕೋರಿದೆ. ಈ ನಿಲುವಳಿ ಸೂಚನೆಯನ್ನು ಸಭಾಪತಿ ರಘುನಾಥರಾವ್ ಮಲ್ಕಾಪುರೆ ನಿಯಮ 68ರಡಿ ಪರಿವರ್ತನೆ ಮಾಡಿ ನಾಳೆಗೆ ಅವಕಾಶ ಕಲ್ಪಿಸುವುದಾಗಿ ರೂಲಿಂಗ್ ನೀಡಿದರು.

ವಿಧಾನಪರಿಷತ್​​ನ ಎರಡನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ನಿಯಮ 59ರಡಿ ಮಳೆ ಹಾನಿ ಚರ್ಚೆಗೆ ಅವಕಾಶ ನೀಡುವಂತೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ಕೋರಿದರು. ಈ ವೇಳೆ, ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಯಾವುದೇ ನಿಲುವಳಿ ಸೂಚನೆ ಇದ್ದರೂ ಪ್ರಶ್ನೋತ್ತರ ಕಲಾಪದ ನಂತರ ಕೈಗೆತ್ತಿಕೊಳ್ಳಬೇಕು ಎಂದು ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ಉಲ್ಲೇಖಿಸಿ ಮನವಿ ಮಾಡಿದರು. ನಂತರ ಸಭಾಪತಿಗಳು ಪ್ರಶ್ನೋತ್ತರ ಕಲಾಪದ ನಂತರ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು.

ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಮುಗಿಯುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ರಾಜ್ಯದಲ್ಲಿ ಅಪಾರ ಪ್ರಮಾಣದ ಮಳೆಹಾನಿಯಾಗಿದೆ. ಬೆಂಗಳೂರಿನಲ್ಲಿ ಕಳೆದ 51 ವರ್ಷದಲ್ಲಿ ಆಗದಷ್ಟು ದಾಖಲೆಯ ಮಳೆಯಾಗಿದೆ. ಜನ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ನಿಯಮ 59 ರ ಅಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ನಿಲುವಳಿ ಸೂಚನೆ ಮಂಡಿಸಿದರು.

ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿದ ನಂತರ ಮಾತನಾಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರ ಉತ್ತರ ನೀಡಲು ಸಿದ್ದವಿದೆ. ಯಾವ ನಿಯಮದ ಅಡಿ ಅವಕಾಶ ಕಲ್ಪಿಸಬೇಕು ಎನ್ನುವುದನ್ನು ಪೀಠವೇ ನಿರ್ಧರಿಸಲಿ ಎಂದರು.

ನಂತರ ಮಾತನಾಡಿದ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ನಿಯಮ 59 ರಡಿ ಚರ್ಚೆಗೆ ಅವಕಾಶ ನೀಡಿದ ಉದಾಹರಣೆಗಳು ಈ ಸದನದಲ್ಲಿಲ್ಲ.ವಿಷಯದ ಗಾಂಭೀರ್ಯತೆ ಅರ್ಥೈಸಿಕೊಂಡು ಈ ಪ್ರಸ್ತಾವವನ್ನು ನಿಯಮ 68ಕ್ಕೆ ಪರಿವರ್ತನೆ ಮಾಡಿ ರೂಲಿಂಗ್ ನೀಡಿದರು.

ಮೊರಾರ್ಜಿ ವಸತಿ ಶಾಲೆ ಕಿರುಕುಳ ಪ್ರಕರಣದ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ : ಚಿಂಚೋಳಿ ತಾಲೂಕು ಕೊಂಚಾವರಂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಹಲ್ಲೆ ಕಿರುಕುಳ ಪ್ರಕರಣ ಸಂಬಂಧ ವಸತಿ ಶಾಲೆ ಪ್ರಾಂಶುಪಾಲ ಹಾಗೂ ಕಂಪ್ಯೂಟರ್ ಆಪರೇಟರ್ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಸಭಾ ನಾಯಕ ಕೋಟಾ ಪೂಜಾರಿ ತಿಳಿಸಿದರು. ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಬಿಜಿ ಪಾಟೀಲ್ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದ ವೇಳೆ ಉತ್ತರಿಸಿದ ಸಭಾ ನಾಯಕರು ಕ್ರಮದ ಭರವಸೆ ನೀಡಿದರು.

ಇದನ್ನೂ ಓದಿ : ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದಲೇ ದೊಡ್ಡ ಮಟ್ಟದ ಮಳೆ ಅನಾಹುತ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.