ಬೆಂಗಳೂರು: ನವೋದ್ಯಮಗಳಿಗೆ ಅಗತ್ಯವಾಗಿರುವ ಸಾಲಸೌಲಭ್ಯವನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಪ್ರತ್ಯೇಕವಾದಂತಹ ಬ್ಯಾಂಕ್ ಶಾಖೆಯನ್ನು ಎಸ್ಬಿಐ ಆರಂಭಿಸುತ್ತಿದೆ. ಈ ಸಂಬಂಧ ಬ್ಯಾಂಕ್ನ ಅಧಿಕಾರಿಗಳು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) ಜತೆ ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಿದರು.
ನಗರದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಡಿಇಎಂ ಪರವಾಗಿ ಅದರ ಸಿಇಒ ಸಂಜೀವ್ ಗುಪ್ತ ಮತ್ತು ಎಸ್ಬಿಐ ಪ್ರಧಾನ ವ್ಯವಸ್ಥಾಪಕ ಎಸ್.ರಾಧಾಕೃಷ್ಣನ್ ಅಂಕಿತ ಹಾಕಿ, ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
![ಎಸ್ಬಿಐ ಜತೆ ಕೆ-ಡಿಇಎಂ ಒಡಂಬಡಿಕೆ](https://etvbharatimages.akamaized.net/etvbharat/prod-images/kn-bng-03-ashwathnarayan-av-ka10057_08072022180031_0807f_1657283431_736.jpg)
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಅಶ್ವತ್ಥ ನಾರಾಯಣ್ ಬೆಂಗಳೂರಿನ ಕೋರಮಂಗಲದಲ್ಲಿ ಎಸ್ ಬಿ ಐ ನವೋದ್ಯಮಿಗಳ ಸಲುವಾಗಿ ಪ್ರತ್ಯೇಕ ಶಾಖೆ ತೆರೆಯುತ್ತಿದೆ. ಇದನ್ನು ಆಗಸ್ಟ್ ತಿಂಗಳಲ್ಲಿ ಆರಂಭಿಸಲಿದೆ, ಕೇಂದ್ರ ಸರ್ಕಾರವು ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಸೌಲಭ್ಯವನ್ನು ಖಾತ್ರಿಪಡಿಸಲು ರೂಪಿಸಿರುವ ಸಿಜಿಟಿಎಸ್ಎಂಇ ಯೋಜನೆಯಡಿ ಒಂದು ಸಂಸ್ಥೆಗೆ ತಲಾ 2 ಕೋಟಿ ರೂ.ವರೆಗೂ ಸಾಲ ಸಿಗುತ್ತಿದೆ. ಇದನ್ನು ಬಳಸಿಕೊಂಡು, ರಾಜ್ಯದಲ್ಲಿ ನವೋದ್ಯಮಗಳಿಗೆ ಈ ನೆರವು ಒದಗಿಸಲು ತೀರ್ಮಾನಿಸಲಾಗಿದೆ ಎಂದರು.
![ಎಸ್ಬಿಐ ಜತೆ ಕೆ-ಡಿಇಎಂ ಒಡಂಬಡಿಕೆ](https://etvbharatimages.akamaized.net/etvbharat/prod-images/kn-bng-03-ashwathnarayan-av-ka10057_08072022180031_0807f_1657283431_601.jpg)
ರಾಜ್ಯದಲ್ಲಿ ಒಟ್ಟು 13 ಸಾವಿರ ನವೋದ್ಯಮಗಳಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳಿಗೆ ಹಣಕಾಸು ನಿಧಿಯ ಕೊರತೆ ಉಂಟಾಗುತ್ತದೆ. ಇದನ್ನು ಪರಿಹರಿಸಿ, ಸುಗಮ ಸಾಲ ಸಿಗುವಂತೆ ಮಾಡಲು ಈ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಎಸ್ಬಿಐ ಮುಂದಿನ ಆರು ತಿಂಗಳಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಕ್ಲಸ್ಟರ್ ಗಳಲ್ಲಿ ಕೆಡಿಇಎಂ ಜತೆಗೂಡಿ ಇಂಥದೇ ಶಾಖೆಗಳನ್ನು ತೆರೆಯಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಆ ರೀತಿಯ ನಿವೇಶನ, ಮನೆಗಳನ್ನು ಹಂಚಿಕೆ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿದ ಸರ್ಕಾರ: ಕಾರಣ?