ETV Bharat / state

ಸಿದ್ದಾಪುರ ಮಹೇಶ್ ಹತ್ಯೆ ಪ್ರಕರಣ: ಕೋರ್ಟ್​ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ

author img

By

Published : Aug 18, 2023, 8:04 PM IST

Siddapura Mahesh Murder case: ರೌಡಿಶೀಟರ್​ ಸಿದ್ದಾಪುರ ಮಹೇಶ್​ ಭೀಕರ ಹತ್ಯೆ ಹಿಂದಿದ್ದರು ಎನ್ನಲಾಗುತ್ತಿರುವ ಇಬ್ಬರು ರೌಡಿಶೀಟರ್​ಗಳು ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಕೋರ್ಟ್​ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ
ಕೋರ್ಟ್​ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ

ಕೋರ್ಟ್​ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ

ಬೆಂಗಳೂರು : ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ಸಿದ್ದಾಪುರ ಮಹೇಶನನ್ನು ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹತ್ಯೆಯ ಹಿಂದಿದ್ದರು ಎನ್ನಲಾಗುತ್ತಿರುವ ಇಬ್ಬರು ಕುಖ್ಯಾತ ರೌಡಿಶೀಟರ್‌ಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್ ಮಹೇಶನನ್ನು ಕ್ಷಣಮಾತ್ರದಲ್ಲಿ ಅಟ್ಟಾಡಿಸಿ ಕೊಲೆ‌ ಮಾಡಲಾಗಿತ್ತು. ಭೀಕರ ಕೊಲೆ ಬೆಂಗಳೂರು ಭೂಗತ ಜಗತ್ತಿನ ರಿವೆಂಜ್ ರೌಡಿಸಂ ಅನ್ನು ಅನಾವರಣಗೊಳಿಸಿತ್ತು. ಈಗ ಕೊಲೆಯ ಮಾಸ್ಟರ್ ಮೈಂಡ್​ಗಳು ಎನ್ನಲಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನ್​ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ವ್ಯವಸ್ಥಿತವಾಗಿ ಸಂಚು ರೂಪಿಸಿ ಸಿದ್ದಾಪುರ ಮಹೇಶನನ್ನು ಆಗಸ್ಟ್ 4ರಂದು ಕೊಲೆ‌ ಮಾಡಲಾಗಿತ್ತು. ಈ ಕೊಲೆ ರಾಜಧಾನಿಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದಲ್ಲಿ ಪೊಲೀಸರು 13ಕ್ಕಿಂತ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದರೂ ಪ್ರಮುಖ ಆರೋಪಿಗಳಾದ ನಾಗ ಹಾಗೂ ಮೋಹನ ಸಿಕ್ಕಿರಲಿಲ್ಲ.

ಒಂದೆಡೆ ಪರಪ್ಪನ ಅಗ್ರಹಾರ ಪೊಲೀಸರು, ಇನ್ನೊಂದೆಡೆ ಸಿಸಿಬಿ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿತ್ತು. ಈ ಮಧ್ಯೆ ಇಬ್ಬರು ರೌಡಿಶೀಟರ್​ಗಳು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿ ಪೊಲೀಸರು ಹಾಗೂ ಸಿಸಿಬಿಯನ್ನು ಅಣಕಿಸುವಂತೆ ಮಾಡಿದ್ದಾರೆ. ಸದ್ಯ ನಾಗ ಹಾಗೂ ಮೋಹನ ಇಬ್ಬರನ್ನೂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇತ್ತ ಶರಣಾದ ಸಂಗತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಕೇಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹಳೇ ವೈಷಮ್ಯಕ್ಕೆ ಹತ್ಯೆ: 2019ರ ಕೋವಿಡ್ ಲಾಕ್​ಡೌನ್ ಸಂದರ್ಭದಲ್ಲಿ ಹಾಸನದ ಫಾರ್ಮ್ ಹೌಸ್​ನಲ್ಲಿ ರೌಡಿಶೀಟರ್ ಲಿಂಗನನ್ನು ವಿಲ್ಸನ್ ಗಾರ್ಡನ್ ನಾಗನ ಬಣ ಹತ್ಯೆ ಮಾಡಿತ್ತು. ಮೋಹನ್, ನಂಜಪ್ಪ, ಕಣ್ಣನ್, ಕುಮಾರ್, ಪ್ರದೀಪ ಗ್ರೇಸ್ ವಾಲ್ಟರ್, ಸುನೀಲ್ ಸೇರಿದಂತೆ 16 ಜನರ‌ ತಂಡ ಲಿಂಗನನ್ನ ಕೊಲೆಗೈದಿತ್ತು. ಹತ್ಯೆಗೆ ಪ್ರತೀಕಾರವಾಗಿ ಆತನ ಬಣದಲ್ಲಿದ್ದ ಸಿದ್ದಾಪುರ ಮಹೇಶ, ವಿಲ್ಸನ್ ಗಾರ್ಡನ್ ನಾಗನ ಅತ್ಯಾಪ್ತನಾಗಿದ್ದ ಮದನ್‌ನನ್ನು ಮರ್ಡರ್​ ಮಾಡಿದ್ದ. ಇದು ನಾಗನ ಸಿಟ್ಟಿಗೆ ಕಾರಣವಾಗಿತ್ತು.

ಅದೇ ಕಾರಣಕ್ಕೆ ತಡರಾತ್ರಿ ಮಹೇಶ ಜೈಲಿನಿಂದ ಹೊರಬರುತ್ತಿದ್ದಂತೆ ನಾಗನ ತಂಡದ ಸದಸ್ಯರು ಆತನನ್ನು ಹತ್ಯೆ ಮಾಡಿದ್ದರು. ಬಳಿಕ ಮಾರಕಾಸ್ತ್ರಗಳನ್ನ ಎಲೆಕ್ಟ್ರಾನಿಕ್ ರಸ್ತೆಯ ಕೋನಪ್ಪನ ಅಗ್ರಹಾರದ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಘಟನಾ ಸ್ಥಳಕ್ಕೆ ಅಂದು ಸಿಸಿಬಿ ಜಂಟಿ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಪ್ಪನ ಅಗ್ರಹಾರ ಠಾಣಾ ಪೊಲೀಸರಿಂದ ಮಾಹಿತಿ‌ ಪಡೆದಿದ್ದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪ್ರತಿಕ್ರಿಯೆ : ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ಸಿದ್ದಾಪುರ ಮಹೇಶನ ಹತ್ಯೆ ಪ್ರಕರಣದ ಕುರಿತು‌ ಮಾತನಾಡಿದ್ದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, "ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಆಗ್ನೇಯ ವಿಭಾಗದ ಡಿಸಿಪಿಯವರು ಮೂರ್ನಾಲ್ಕು ತಂಡಗಳನ್ನ ರಚಿಸಿದ್ದಾರೆ‌. ಹತ್ಯೆಯಾದ ಮಹೇಶ್ ಸಿದ್ದಾಪುರ (ಬೆಂಗಳೂರು ದಕ್ಷಿಣ ವಿಭಾಗ) ವ್ಯಾಪ್ತಿಯ ರೌಡಿಶೀಟರ್. ಆತನ ಮೇಲೆ 2 ಕೊಲೆ ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳಿದ್ದವು. ದಕ್ಷಿಣ ವಿಭಾಗದ ಪೊಲೀಸರು ಹಾಗೂ ಸಿಸಿಬಿ ಸಿಬ್ಬಂದಿ ತಂಡ ಸಹ ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಹಕರಿಸುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನ ಪತ್ತೆ ಹಚ್ಚಲಾಗುವುದು" ಎಂದಿದ್ದರು.

ಇದನ್ನೂ ಓದಿ: ಬೆಂಗಳೂರು: ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ರೌಡಿಶೀಟರ್ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.