ETV Bharat / state

ಗ್ಯಾರಂಟಿ ಯೋಜನೆಗೆ 'SCSPTSP' ಅನುದಾನ ಬಳಕೆ: ಈವರೆಗೆ ಬಿಡುಗಡೆಯಾದ ಹಣ ಎಷ್ಟು?

author img

By ETV Bharat Karnataka Team

Published : Sep 12, 2023, 2:29 PM IST

Updated : Sep 12, 2023, 9:46 PM IST

ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯ ಅನುದಾನ ವ್ಯಯಿಸುತ್ತಿದೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ.

ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (SCSP TSP) ಅನುದಾನ ಬಳಕೆ ಮಾಡುತ್ತಿದೆ. ಸರ್ಕಾರದ ನಡೆಗೆ ಪ್ರತಿಪಕ್ಷ ಬಿಜೆಪಿ ಹಾಗು ದಲಿತ ನಾಯಕರು ಟೀಕಾಸಮರ ನಡೆಸಿದ್ದಾರೆ. ಸರ್ಕಾರ ಈಗಾಗಲೇ ಎಸ್​ಸಿಎಸ್​ಪಿಟಿಎಸ್​ಪಿ ಅನುದಾನದಿಂದ ಗ್ಯಾರಂಟಿ ಯೋಜನೆಗಳಿಗಾಗಿ ಹಣ ಬಿಡುಗಡೆ ಮಾಡಿದೆ. ಈವರೆಗೆ ಬಿಡುಗಡೆಯಾದ ಹಣ ಎಷ್ಟು?, ಎಷ್ಟು ಹಣ ಹಂಚಿಕೆಯಾಗಿದೆ? ನೋಡೋಣ.

ಕಾಂಗ್ರೆಸ್ ಸರ್ಕಾರ ತನ್ನ‌ ಶತದಿನಗಳ ಆಡಳಿತದಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಬಹುತೇಕ ಆದ್ಯತೆ ನೀಡಿದೆ. ಯುವನಿಧಿ ಹೊರತುಪಡಿಸಿ ಉಳಿದೆಲ್ಲ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 2023-24ರ ಸಾಲಿನಲ್ಲಿ ಈ ಯೋಜನೆಗಳಿಗೆ 30-35 ಸಾವಿರ ಕೋಟಿ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಮುಂದಿನ ವರ್ಷದಿಂದ ಸುಮಾರು 50 ಸಾವಿರ ಕೋಟಿ ರೂ.‌ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೆಲ‌ ಇಲಾಖೆಗಳಿಗೆ ಅನುದಾನ ಕಡಿತಗೊಳಿಸಿ, ಇತರ ಮೂಲಗಳಿಂದ ಸದ್ಯ ಅನುದಾನ ಹೊಂದಿಸಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ದಲಿತ ಸಮುದಾಯಕ್ಕಾಗಿ ಮೀಸಲಿಡುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (SCSP TSP) ಅನುದಾನದಡಿ ದೊಡ್ಡ ಪ್ರಮಾಣದ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ. ಎಸ್​ಸಿಎಸ್​ಪಿಟಿಎಸ್​ಪಿ ಯೋಜನೆಯ ಅನುದಾನ ಬಳಕೆ ಮಾಡುವುದಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ದಲಿತ ನಾಯಕರಲ್ಲದೇ ಕಾಂಗ್ರೆಸ್​ನ ಕೆಲ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಅನುದಾನ ದುರ್ಬಳಕೆಯಾಗಲಿದೆ ಎಂದು ಆರೋಪಿಸಿದ್ದರು. ಆದರೂ ಸಿದ್ದರಾಮಯ್ಯ ಸರ್ಕಾರ ಎಸ್​ಸಿಎಸ್​ಪಿಟಿಎಸ್​ಪಿಯಡಿ ಸುಮಾರು 11 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ.

ಯಾವ ಯೋಜನೆಗೆ ಎಷ್ಟು ಅನುದಾನ ಹಂಚಿಕೆ?: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಎಸ್​ಸಿಎಸ್​ಪಿಟಿಎಸ್​ಪಿ ಯೋಜನೆಯಿಂದ 2023-24ರಡಿ 11,144 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಈ ಪೈಕಿ ಶಕ್ತಿ ಯೋಜನೆಗಾಗಿ ಪರಿಶಿಷ್ಟ ಜಾತಿ ಉಪಯೋಜನೆ (SCSP)ಯಿಂದ 560 ಕೋಟಿ ರೂ. ಹಂಚಿಕೆ ಮಾಡಿದ್ದರೆ, ಪರಿಶಿಷ್ಟ ಪಂಗಡ ಉಪಯೋಜನೆಯಿಂದ (TSP) 252 ಕೋಟಿ ರೂ. ಹಂಚಿಕೆ ಮಾಡುವ ಮೂಲಕ ಒಟ್ಟು 812 ಕೋಟಿ ರೂ. ಹಂಚಿಕೆ ಮಾಡಿದೆ.

ಶಕ್ತಿ ಯೋಜನೆಯಡಿ ಎಸ್​ಸಿಎಸ್​ಟಿ ಸಮುದಾಯದ ಮಹಿಳಾ ಪ್ರಯಾಣಿಕರು ಯಾರು ಎಂಬ ಬಗ್ಗೆ ಅಧಿಕಾರಿಗಳೇ ಗೊಂದಲದಲ್ಲಿದ್ದು, ಹಣ ದುರುಪಯೋಗದ ಆತಂಕ ಎದುರಾಗಿದೆ. ಈ ಪೈಕಿ ಅನ್ನಭಾಗ್ಯ ಯೋಜನೆಯಡಿ ಕೊಡುವ ಸಹಾಯಧನಕ್ಕಾಗಿ ಎಸ್​ಸಿಎಸ್​ಪಿಯಿಂದ 1,955.65 ಕೋಟಿ ರೂ. ಅನುದಾ‌ನ ಹಂಚಿಕೆ ಮಾಡಲಾಗಿದೆ. ಇದಕ್ಕೆ ಟಿಎಸ್​ಪಿಯಿಂದ 823.85 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆ ಮೂಲಕ ಒಟ್ಟು 2,780 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.

ಗೃಹ ಲಕ್ಷ್ಮಿ ಯೋಜನೆಗಾಗಿ 2023-24 ಸಾಲಿನಲ್ಲಿ ಎಸ್​ಸಿಎಸ್​ಪಿಯಿಂದ 3,500 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇನ್ನು ಟಿಎಸ್​ಪಿಯಿಂದ 1,575 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಆ ಮೂಲಕ ಎಸ್​ಸಿಎಸ್​ಪಿಟಿಎಸ್​ಪಿ ಯಿಂದ ಗೃಹ ಲಕ್ಷ್ಮಿಗಾಗಿ 5,075 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ.

ಗೃಹ ಜ್ಯೋತಿ ಯೋಜನೆಗಾಗಿ ಎಸ್​ಸಿಎಸ್​ಪಿಯಿಂದ 2023-24 ಸಾಲಿನಲ್ಲಿ 1,650 ಕೋಟಿ ಅನುದಾನ ಹಂಚಿಕೆ ಮಾಡಿದೆ. ಇನ್ನು ಟಿಎಸ್​ಪಿಯಿಂದ ಗೃಹ ಜ್ಯೋತಿಗಾಗಿ 760 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆ ಮೂಲಕ ಒಟ್ಟು 2,410 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಯುವನಿಧಿ ಯೋಜನೆಗಾಗಿ ಎಸ್​ಸಿಎಸ್​ಪಿಯಿಂದ 47.50 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಟಿಎಸ್​ಪಿಯಿಂದ 20 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಒಟ್ಟು 67.50 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.

ಈವರೆಗೆ ಬಿಡುಗಡೆಯಾದ ಎಸ್​ಸಿಎಸ್​ಪಿಟಿಎಸ್​ಪಿ ಅನುದಾನ ಎಷ್ಟು?: ಗೃಹ ಲಕ್ಷ್ಮಿ ಯೋಜನೆಗೆ ಎಸ್​ಸಿಎಸ್​ಪಿಯಿಂದ ಹಂಚಿಕೆಯಾದ 3,500 ಕೋಟಿ ರೂ. ಹಣದ ಪೈಕಿ ಆಗಸ್ಟ್‌ವರೆಗೆ 381.90 ಕೋಟಿ ರೂ. ಬಿಡುಗಡೆ ಮಾಡಿದೆ. ಯೋಜನೆಗೆ ಎಸ್​ಸಿಎಸ್​ಪಿಯಡಿ 164.65 ಕೋಟಿ ವೆಚ್ಚವಾಗಿದೆ. ಟಿಎಸ್​ಪಿಯಿಂದ ಹಂಚಿಕೆಯಾದ 1,575 ಕೋಟಿ ಪೈಕಿ 159.02 ಕೋಟಿ ರೂ. ಬಿಡುಗಡೆ ಮಾಡಿದೆ. ಟಿಎಸ್​ಪಿಯಡಿ ಯೋಜನೆಗೆ 103.67 ಕೋಟಿ ವೆಚ್ಚವಾಗಿದೆ. ಎಸ್​ಸಿಎಸ್​ಪಿಟಿಎಸ್​ಪಿಯಿಂದ ಒಟ್ಟು ಈವರೆಗೆ 540.92 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಅನ್ನಭಾಗ್ಯ ಯೋಜನೆಗೆ ಎಸ್​ಸಿಎಸ್​ಪಿಯಿಂದ ಹಂಚಿಕೆಯಾದ 1955.65 ಕೋಟಿ ರೂ. ಪೈಕಿ 196.14 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎಸ್​ಸಿಎಸ್​ಪಿಯಡಿ ಯೋಜನೆಗೆ ಆದ ವೆಚ್ಚ 68.97 ಕೋಟಿ ರೂ. ಇತ್ತ ಟಿಎಸ್​ಪಿಯಿಂದ ಹಂಚಿಕೆಯಾದ 823.85 ಕೋಟಿ ರೂ. ಪೈಕಿ 88.43 ಕೋಟಿ ಬಿಡುಗಡೆ ಮಾಡಿದೆ.‌ ಯೋಜನೆಗೆ ಟಿಎಸ್​ಪಿಯಡಿ ಆಗಿರುವ ವೆಚ್ಚ 27.84 ಕೋಟಿ ರೂ.‌ ಅನ್ನಭಾಗ್ಯ ಯೋಜನೆಯಡಿ ಎಸ್​ಸಿಎಸ್​ಪಿಟಿಎಸ್​ಪಿಯಿಂದ 284.57 ಕೋಟಿ ರೂ. ಬಿಡುಗಡೆ ಮಾಡಿದೆ.

ಗೃಹಜ್ಯೋತಿ ಯೋಜನೆಗೆ ಎಸ್​ಸಿಎಸ್​ಪಿಯಿಂದ ಹಂಚಿಕೆಯಾದ 1,650 ಕೋಟಿ ರೂ. ಪೈಕಿ 119 ಕೋಟಿ ರೂ. ಬಿಡುಗಡೆ ‌ಮಾಡಿದೆ. ಎಸ್​ಸಿಎಸ್​ಪಿಯಡಿ ಯೋಜನೆಗೆ ಆದ ವೆಚ್ಚ 119 ಕೋಟಿ ರೂ. ಇನ್ನು ಟಿಎಸ್​ಪಿಯಿಂದ ಯೋಜನೆಗೆ ಹಂಚಿಕೆಯಾದ 760 ಕೋಟಿ ರೂ‌. ಪೈಕಿ 55 ಕೋಟಿ ರೂ.‌ ಬಿಡುಗಡೆ ಮಾಡಿದೆ‌. ಟಿಎಸ್​ಪಿಯಡಿ ಯೋಜನೆಗೆ 55 ಕೋಟಿ ರೂ. ವೆಚ್ಚ ಆಗಿದೆ.‌ ಆ ಮೂಲಕ ಎಸ್​ಸಿಎಸ್​ಪಿಟಿಎಸ್​ಪಿಯಿಂದ ಗೃಹ ಜ್ಯೋತಿಗೆ ಆಗಸ್ಟ್ ವರೆಗೆ ಒಟ್ಟು 174 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕೆಡಿಪಿ ಪ್ರಗತಿ ಪರಿಶೀಲನಾ ಅಂಕಿಅಂಶದಿಂದ ತಿಳಿದು ಬಂದಿದೆ. ಇನ್ನು ಶಕ್ತಿ ಯೋಜನೆ ಹಾಗೂ ಯುವ ನಿಧಿ ಯೋಜನೆಗೆ ಯುವನಿಧಿ ಯೋಜನೆಯಡಿ ಹಂಚಿಕೆಯಾದ ಅನುದಾನ ಪೈಕಿ ಹಣ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ 'ಶತಕ'ದಾಟ: ಗ್ಯಾರಂಟಿಗಳ ಜಾರಿಗೆ ಪಂಚ ಸವಾಲು

Last Updated :Sep 12, 2023, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.