ಬೆಂಗಳೂರು: ದೇಶದ ಜನತೆ ಈಗಾಗಲೇ ಕೊರೊನಾ ಬಿಕ್ಕಟ್ಟಿನಿಂದ ತತ್ತರಿಸಿದ್ದಾರೆ. ಈ ಬೆನ್ನಲ್ಲೇ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಎನಿಸಿದೆ. ಅದರಲ್ಲೂ ತಾಳೆ ಎಣ್ಣೆ ಮತ್ತು ದೈನಂದಿನ ಬಳಕೆಯ ಅಡುಗೆ ಎಣ್ಣೆ ಬೆಲೆ ಕೂಡ ಶೇ. 35ರಿಂದ 45ರಷ್ಟು ಏರಿಕೆಯಾಗಿದ್ದು ಗ್ರಾಹಕರ ಜೇಬು ಸುಡುವಂತಾಗಿದೆ.
ಬಜೆಟ್ನಲ್ಲಿ ತಾಳೆ ಎಣ್ಣೆಗೆ ಕೃಷಿ ಸೆಸ್ ವಿಧಿಸಿರುವ ಮೂಲಕ ಹೋಟೆಲ್ ಉದ್ಯಮಿಗಳು ಮತ್ತು ಸಣ್ಣಪುಟ್ಟ ಬೀದಿಬದಿ ವ್ಯಾಪಾರ ನಡೆಸ್ತಿದ್ದವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವ ಹೋಟೆಲ್ ಉದ್ಯಮದ ಮೇಲೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾಲ್ಕೈದು ತಿಂಗಳಿಂದಲೂ ತಾಳೆ ಎಣ್ಣೆ ದರದಲ್ಲಿ ಹೆಚ್ಚಳ ಕಾಣುತ್ತಿತ್ತು. ಇದೀಗ ಈ ಎಣ್ಣೆ ಮೇಲೆ ಸೆಸ್ ವಿಧಿಸಿದ್ದರಿಂದಾಗಿ ದರ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಎಲ್ಲಾ ಬಗೆಯ ಉಪಹಾರದ ದರವೂ ಏರಿಕೆಯಾಗಿದೆ.
ಲಾಕ್ಡೌನ್ ಸಡಿಲಿಕೆ ನಂತರ ಹೋಟೆಲ್ ಉದ್ಯಮ ತುಸು ಚೇತರಿಕೆಯತ್ತ ಸಾಗುತ್ತಿತ್ತು. ಈಗ ಹೋಟೆಲ್ ಸಾಮಗ್ರಿಗಳ ದರ ಹೆಚ್ಚಳದಿಂದ ಊಟದಲ್ಲೂ ಬೆಲೆ ಏರಿಸುತ್ತಿರುವ ಕಾರಣ ಗ್ರಾಹಕರು ಹೋಟೆಲ್ಗಳತ್ತ ಮುಖ ಮಾಡುತ್ತಿಲ್ಲ. ಇದರಿಂದ ವ್ಯಾಪಾರ ಕುಸಿತ ಕಂಡಿದೆ. ಬಜೆಟ್ನಲ್ಲಿ ತಾಳೆ ಎಣ್ಣೆ ಮೇಲೆ ಕೃಷಿ ಹಾಗೂ ಮೂಲ ಸೌಕರ್ಯದ ಸೆಸ್ ವಿಧಿಸಿದ ಪರಿಣಾಮ ಸಹಜವಾಗಿಯೇ ದರ ಹೆಚ್ಚಳ ಕಂಡಿದೆ.
ಬೆಳಗಾವಿ, ಹುಬ್ಬಳ್ಳಿ, ಮಂಗಳೂರಿನಲ್ಲಿ ಲಾಕ್ಡೌನ್ಗೂ ಮುನ್ನ ಪ್ರತಿ ಲೀಟರ್ಗೆ 100 ರೂ.ಗೂ ಕಡಿಮೆಯಿದ್ದ ಅಡುಗೆ ಎಣ್ಣೆಯ ಬೆಲೆ ಈಗ ₹135 - ₹150 ಆಗಿದೆ. ಈ ಹಿಂದೆ ವಿದೇಶಗಳಿಂದ ಪಾಮ್ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಬೆಲೆಯೂ ನಿಯಂತ್ರಣದಲ್ಲಿತ್ತು. ಆದರೆ ಕೊರೊನಾದಿಂದ ಪಾಮ್ ಆಯಿಲ್ ಆಮದಿಗೆ ತಾತ್ಕಾಲಿಕ ಅಡ್ಡಿಯಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಕೊರತೆ ಉಂಟಾಗಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ನಗರ ಪ್ರದೇಶದ ರೀಟೆಲ್ ಮಳಿಗೆಗಳಲ್ಲಿ ತಾಳೆ ಎಣ್ಣೆಯ ದರ ಒಂದಿದ್ರೆ, ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ತಾಳೆ ಎಣ್ಣೆಯ ಮೇಲಿನ ಸೆಸ್ ತೆಗೆಯುವಂತೆ ವ್ಯಾಪಾರಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.