ಬೆಂಗಳೂರು : ರಾಜ್ಯದ ಎಂಟು ಜ್ಞಾನಪೀಠ ಪುರಸ್ಕೃತರು ಓದಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕಳೆದ ಬಜೆಟ್ನಲ್ಲಿ ಸರ್ಕಾರ ಕಾರ್ಯಕ್ರಮ ಘೋಷಿಸಿತ್ತು. ಅದರಂತೆ ಇದೀಗ ಸಮಿತಿಯ ನೇತೃತ್ವದಲ್ಲಿ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿ 6 ತಿಂಗಳ ಕಾಲಮಿತಿಯಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಲಾಗಿದೆ.
ಏನೆಲ್ಲ ಸೌಲಭ್ಯ ಲಭ್ಯ? : ಸರ್ಕಾರಿ ಶಾಲೆಗಳಲ್ಲಿ ಆದ್ಯತೆಯ ಮೇರೆಗೆ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ, ಸ್ಮಾರ್ಟ್ ತರಗತಿ, ಪೀಠೋಪಕರಣಗಳು, ಕುಡಿಯುವ ನೀರು, ಕ್ರೀಡಾ ಸಾಮಗ್ರಿಗಳು, ಶಾಲಾ ಗೋಡೆಗಳಿಗೆ ಬಣ್ಣ ಬಳಿಸುವ ಸೌಲಭ್ಯಗಳನ್ನು ಒದಗಿಸಬೇಕು.
ಅನುದಾನದಲ್ಲಿ ಅತ್ಯಂತ ಪಾರದರ್ಶಕತೆಯಿಂದ ಶಾಲೆಗೆ ಸೂಕ್ತ ಮೂಲಸೌಲಭ್ಯವನ್ನು ಒದಗಿಸಲು ಅಗತ್ಯ ಕ್ರಮವಹಿಸಿ ಹಾಗೂ ಜಾನಪೀಠ ಪುರಸ್ಕೃತರ ಗೌರವವನ್ನು ಹೆಚ್ಚಿಸುವಂತಹ ಕಾರ್ಯವನ್ನು ಹಮ್ಮಿಕೊಳ್ಳಬೇಕು ಅಂತಾ ಸೂಚಿಸಲಾಗಿದೆ.
ಸದ್ಯ ಯೋಜನೆಯ ಅನುಷ್ಠಾನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ 11 ಶಾಲೆಗಳಿಗೆ ಒಟ್ಟು ರೂ.1688.34 ಲಕ್ಷಗಳ ಅನುದಾನ ಒದಗಿಸಲಾಗಿದೆ. ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಆಯಾ ಜಿಲ್ಲೆಯಲ್ಲಿ ಜಾರಿಯಲ್ಲಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಅಡಿ ಲಭ್ಯವಿರುವ ಅನುದಾನವನ್ನು ಒಗ್ಗೂಡಿಸುವ ಮೂಲಕ ಲಭ್ಯವಾಗುವ ಅನುದಾನದಿಂದ ಭರಿಸುವಂತೆ ತಿಳಿಸಲಾಗಿದೆ.
ಕ್ರಿಯಾ ಸಮಿತಿ ರಚನೆ : ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಗಳಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನುಷ್ಠಾನ ಸಮಿತಿ ರಚಿಸುವಂತೆ ಹೇಳಲಾಗಿದೆ. ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ 4 ಸದಸ್ಯರನ್ನು ನೇಮಿಸುವಂತೆ ತಿಳಿಸಲಾಗಿದೆ.