ETV Bharat / state

ಇ-ಶ್ರಮ ಕಾರ್ಡ್ ಯೋಜನೆ ಎಂದರೇನು? ಪ್ರಯೋಜನಗಳ ಬಗ್ಗೆ ಗೊತ್ತಿದೆಯೇ? ನೋಂದಣಿ ಹೇಗೆ? ಸಂಪೂರ್ಣ ಮಾಹಿತಿ

author img

By ETV Bharat Karnataka Team

Published : Oct 15, 2023, 9:37 PM IST

Updated : Oct 15, 2023, 10:33 PM IST

ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತೆ ಒದಗಿಸುವ ಇ-ಶ್ರಮ ಕಾರ್ಡ್ ಯೋಜನೆ ನೋಂದಣಿ ಆರಂಭವಾಗಿದೆ.

ಇ-ಶ್ರಮ ಕಾರ್ಡ್ ಯೋಜನೆ
ಇ-ಶ್ರಮ ಕಾರ್ಡ್ ಯೋಜನೆ

ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಶ್ರಮ ಯೋಜನೆ ಜಾರಿಗೆ ತಂದಿದೆ. ಇ-ಶ್ರಮ ಕಾರ್ಡ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ತಲುಪಿಸಿ, ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲೂ ಇ-ಶ್ರಮ ಕಾರ್ಡ್ ನೀಡಲಾಗುತ್ತಿದ್ದು, ಯೋಜನೆಯ ವಸ್ತುಸ್ಥಿತಿಯ ಕುರಿತು ಸಮಗ್ರ ವರದಿ ಇಲ್ಲಿದೆ.

ಇ-ಶ್ರಮ ಕಾರ್ಡ್ ಎಂಬುದು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟೀಯ ದತ್ತಾಂಶವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿ ಮೂಲ ಉದ್ದೇಶ ಹೊಂದಿದೆ. ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದೆ.

ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ವಿಶಿಷ್ಟ 12-ಅಂಕಿಯ ಗುರುತಿನ ಸಂಖ್ಯೆಯಾಗಿದೆ. ಇ-ಶ್ರಮ ಕಾರ್ಡ್ ಹೆಸರು, ವಯಸ್ಸು, ಲಿಂಗ, ಉದ್ಯೋಗ ಮತ್ತು ಕೆಲಸಗಾರನ ಕುರಿತು ಇತರ ಸಂಬಂಧಿತ ಮಾಹಿತಿಯಂತಹ ವಿವರಗಳನ್ನು ಒಳಗೊಂಡಿದೆ. ಇ-ಶ್ರಮ ಕಾರ್ಡ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು ಅದು ಭಾರತದಲ್ಲಿನ ಅಸಂಘಟಿತ ಕಾರ್ಮಿಕರ ಸಮಗ್ರ ಡೇಟಾಬೇಸನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ದಪಡಿಸಲು, ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ ಇ-ಶ್ರಮ ಪೋರ್ಟಲ್ ಅನ್ನು (www.eshram.gov.in) ಅಭಿವೃದ್ಧಿಪಡಿಸಿದೆ. ಇದು ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಮಿಕರ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯದ ವಿಧ, ಕುಟುಂಬದ ವಿವರ, ಬ್ಯಾಂಕ್ ಖಾತೆ ವಿವರ ಇತ್ಯಾದಿ ವಿವರ ಒಳಗೊಂಡಿರುತ್ತದೆ.

ಪ್ರಸ್ತುತ ಅಸಂಘಟಿತ ಕಾರ್ಮಿಕರ ಕೇಂದ್ರಕೃತ ದತ್ತಾಂಶ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ, ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೋಪಾಯ ಕಲ್ಪಿಸುವುದು ಕಷ್ಟ ಸಾಧ್ಯವಾಗಿದೆ. ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ಸಮಗ್ರ ದತ್ತಾಂಶ ಅವರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಸಹಾಯಕವಾಗಿದೆ.

ಇ-ಶ್ರಮ ಪೋರ್ಟಲ್‌ನಲ್ಲಿ ಕಾರ್ಮಿಕ ವರ್ಗಗಳಲ್ಲಿ ಅತ್ಯಂತ ದುರ್ಬಲ ವರ್ಗದವರಾದ ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಸಮಗ್ರ ದತ್ತಾಂಶವನ್ನು ಸಿದ್ದಪಡಿಸಲಾಗುತ್ತಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿರುವ ಸುಮಾರು 379 ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು “ಇತರೆ ವರ್ಗ”ಗಳಡಿ ನೋಂದಣಿಯಾಗಬಹುದು.

ನೋಂದಣಿ ಹೇಗೆ?: ಇ-ಶ್ರಮ ಪೋರ್ಟಲ್ www.eshram.gov.in ನಲ್ಲಿ ಸ್ವಯಂ ನೋಂದಣಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC)ಗಳಿಗೆ ಬೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಇ-ಶ್ರಮ ಪೋರ್ಟಲ್‍ನಲ್ಲಿ ನೋಂದಣಿ ಉಚಿತವಾಗಿದೆ. ಯಶಸ್ವಿ ನೋಂದಣಿಯ ನಂತರ ಫಲಾನುಭವಿಗಳು ಸ್ಥಳದಲ್ಲಿಯೆ ಗುರುತಿನ ಚೀಟಿಯನ್ನು (UAN) ಪಡೆಯಬಹುದು. ಇದು ದೇಶದಾದ್ಯಂತ ಹಾಗೂ ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ. 16 ರಿಂದ 59 ವಯೋಮಾನದವರು. ಆದಾಯ ತೆರಿಗೆ ಪಾವತಿಸದವರು, ಭವಿಷ್ಯನಿಧಿ ಹಾಗೂ ಇಎಸ್​ಐ ಫಲಾನುಭವಿಯಾಗಿರದವರು ಇದಕ್ಕೆ ಅರ್ಹರಾಗಿರುತ್ತಾರೆ.

ಇ-ಶ್ರಮ ಕಾರ್ಡ್‌ನ ಪ್ರಯೋಜನಗಳೇನು? : ಈ ಮೂಲಕ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಲ್ಪಿಸಲಾಗುತ್ತದೆ. ಇ-ಶ್ರಮ ಕಾರ್ಡ್‌ನೊಂದಿಗೆ, ಅಸಂಘಟಿತ ವಲಯದ ಕಾರ್ಮಿಕರು ಆರೋಗ್ಯ ಮತ್ತು ಜೀವ ವಿಮೆ, ವೃದ್ಧಾಪ್ಯ ಪಿಂಚಣಿ, ಅಂಗವೈಕಲ್ಯ ಪಿಂಚಣಿ, ಮಾತೃತ್ವ ಪ್ರಯೋಜನ ಮುಂತಾದ ಸರ್ಕಾರದಿಂದ ಪ್ರಾರಂಭಿಸಲಾದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡಲಾಗುತ್ತದೆ. ಇ-ಶ್ರಮ ಕಾರ್ಡ್ ಪೋರ್ಟಬಲ್ ಆಗಿದೆ. ಅಂದರೆ ಕಾರ್ಮಿಕರು ದೇಶಾದ್ಯಂತ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಪಡೆಯಬಹುದು. ಇ-ಶ್ರಮ ಕಾರ್ಡ್ ಅಸಂಘಟಿತ ಕಾರ್ಮಿಕರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ವಿವಿಧ ಹಣಕಾಸು ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಆರ್ಥಿಕ ಸೇರ್ಪಡೆಗೆ ಅನುಕೂಲ ಮಾಡಿ ಕೊಡಲಾಗುತ್ತದೆ.

ಇ-ಶ್ರಮ ಕಾರ್ಡ್ ಡೇಟಾಬೇಸ್​ನ್ನು ಕೌಶಲ್ಯಗಳನ್ನು ನಕ್ಷೆ ಮಾಡಲು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಗುರುತಿಸಲು ಬಳಸಬಹುದು. ಇ-ಶ್ರಮ ಕಾರ್ಡ್ ವೇದಿಕೆ ವಿವಿಧ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಮೇಲ್ವಿಚಾರಣೆಯೊಂದಿಗೆ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪುವಂತೆ ಮಾಡುತ್ತದೆ. ಇ-ಶ್ರಮ ಕಾರ್ಡ್ ವೇದಿಕೆ ಅಸಂಘಟಿತ ವಲಯದ ಕಾರ್ಮಿಕರ ಶೋಷಣೆಯನ್ನು ಕಡಿಮೆ ಮಾಡಲು ಪಾರದರ್ಶಕ ಮತ್ತು ಜವಾಬ್ದಾರಿಯುತ ನೋಂದಣಿ ಮತ್ತು ಸೇವೆ ವಿತರಣೆಯ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಮಾಸಿಕ ರೂ. 1000 ಮತ್ತು ಇದರ ಹೊರತಾಗಿ 2 ಲಕ್ಷ ರೂ.ಗಳ ಅಪಘಾತ ವಿಮೆಯನ್ನು ಸಹ ನೀಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ಅಥವಾ ಕೋವಿಡ್-19ರ ಸಾಂಕ್ರಾಮಿಕ ಪಿಡುಗಿನಂತಹ ಪರಿಸ್ಥಿತಿಯಲ್ಲಿ, ಅರ್ಹ ಕಾರ್ಮಿಕರಿಗೆ ನೆರವು ನೀಡಲು ಈ ದತ್ತಾಂಶವನ್ನು ಬಳಸಿಕೊಳ್ಳಬಹುದಾಗಿದೆ.

ರಾಜ್ಯದಲ್ಲಾಗಿರುವ ನೋಂದಣಿ ಎಷ್ಟು?: ರಾಜ್ಯದಲ್ಲೂ ಈ ಯೋಜನೆ ಜಾರಿಯಲ್ಲಿದೆ. ರಾಜ್ಯದ ಅಸಂಘಟಿತ ಕಾರ್ಮಿಕರು ಇ-ಶ್ರಮ ಕಾರ್ಡ್​ಗಾಗಿ ನೋಂದಣಿ ಮಾಡುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇದರ ಉಸ್ತುವಾರಿ ವಹಿಸಿಕೊಂಡಿದೆ. ರಾಜ್ಯದಲ್ಲಿ ಆಗಸ್ಟ್ 24, 2021ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆಗೆ ಒಟ್ಟು 77,46,235 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಅತಿ ಹೆಚ್ಚು ರಾಜ್ಯದ ಕೃಷಿ ವಲಯದಲ್ಲಿನ 42,28,518 ವಿವಿಧ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಬಳಿಕ 9,03,398 ಕಟ್ಟಡ ನಿರ್ಮಾಣ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಜವಳಿ ವಲಯದ ಅಸಂಘಟಿತ ಕಾರ್ಮಿಕರು 7,15,291 ಇ-ಕಾರ್ಡ್ ಪಡೆದುಕೊಂಡಿದ್ದಾರೆ. ಅಟೋಮೊಬೈಲ್ ಮತ್ತು ಸಾರಿಗೆ ವಲಯದ 3,51,584 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.

3,35,600 ಇತರೆ ವಲಯದ ಅಸಂಘಟಿತ ಕಾರ್ಮಿಕರು ಇ-ಕಾರ್ಡ್ ಗೆ ನೋಂದಣಿ ಮಾಡಿಕೊಂಡಿದ್ದರೆ, 2,00,673 ಮನೆ ಗೆಲಸದ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಚರ್ಮೋದ್ಯಮದ ವಲಯದಲ್ಲಿನ 1,34,551 ಕಾರ್ಮಿಕರು, ಉತ್ಪಾದನಾ ವಲಯದಲ್ಲಿನ 1,13,018 ಕಾರ್ಮಿಕರು, ಆರೋಗ್ಯ ಕ್ಷೇತ್ರದಲ್ಲಿನ 1,05,648 ಕಾರ್ಮಿಕರು ಇ-ಕಾರ್ಡ್ ಗೆ ನೋಂದಾಯಿಸಿಕೊಂಡಿದ್ದಾರೆ. ಟೊಬ್ಯಾಕೊ ಕೈಗಾರಿಕೆ ವಲಯದಲ್ಲಿನ 99,209 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಮುಖವಾಗಿ ರಾಜ್ಯದ ಸೇವಾ ಕೇಂದ್ರಗಳಲ್ಲಿ 13,274, ಸ್ವಯಂ ನೋಂದಣಿ ಮೂಲಕ 27,07,077, ಸಾಮಾನ್ಯ ಸೇವಾ ಕೇಂದ್ರ (CSC)ಗಳಲ್ಲಿ 50,24,790 ಕಾರ್ಮಿಕರು ಇ-ಕಾರ್ಡ್ ಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.

13ನೇ ಸ್ಥಾನದಲ್ಲಿ ರಾಜ್ಯ: ಅತಿ ಹೆಚ್ಚು ಇ-ಶ್ರಮ ಕಾರ್ಡ್ ನೋಂದಣಿಯಲ್ಲಿ ರಾಜ್ಯ 13ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ತಮಿಳುನಾಡು ಇದ್ದರೆ, ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಅತಿ ಹೆಚ್ಚು ನೋಂದಣಿಯಲ್ಲಿ ದೇಶದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಬಿಹಾರ ಎರಡನೇ ಸ್ಥಾನ, ಪಶ್ಚಿಮ ಬಂಗಾಳ ಮೂರನೇ ಸ್ಥಾನ, ಮಧ್ಯಪ್ರದೇಶ ನಾಲ್ಕನೇ ಸ್ಥಾನ ಹಾಗೂ ಮಹಾರಾಷ್ಟ್ರಾ ಐದನೇ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಆಗಸ್ಟ್ 24, 2021ರಿಂದ ನೋಂದಣಿ ಆರಂಭವಾಗಿದ್ದು, ಮಾರ್ಚ್ 31, 2022 ವರೆಗೆ ಒಟ್ಟು 60,28,900 ಅಸಂಘಟಿತ ಕಾರ್ಮಿಕರು ಇ-ಶ್ರಮ ಕಾರ್ಡ್ ಗೆ ನೋಂದಾಯಿಸಿಕೊಂಡಿದ್ದರು. ಅಂದರೆ ಆರಂಭದಲ್ಲಿ ಅತಿ ಹೆಚ್ಚು ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದರು. ಆದರೆ , ಬಳಿಕದ ವರ್ಷಗಳಲ್ಲಿ ನೋಂದಣಿ ಮಾಡುವವರ ಪ್ರಮಾಣ ಇಳಿಕೆಯಾಯಿತು. 2022-2023 ಆರ್ಥಿಕ ವರ್ಷದಲ್ಲಿ 15,05,801 ಕಾರ್ಮಿಕರು ಇ-ಶ್ರಮ ಕಾರ್ಡ್ ಗೆ ನೋಂದಾವಣೆ ಮಾಡಿಕೊಂಡಿದ್ದರು. ಅದೇ 2023-2024 ಸಾಲಿನಲ್ಲಿ ಅಕ್ಟೋಬರ್ 14ರ ವೆರೆಗೆ 2,11,534 ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ಸೂಕ್ತ ತನಿಖೆಗೆ ಬಿ.ಎಸ್.ಯಡಿಯೂರಪ್ಪ ಆಗ್ರಹ

Last Updated :Oct 15, 2023, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.