ETV Bharat / state

ಜು.8 ರಂದು ರಾಜ್ಯದ ಎಲ್ಲಕೋರ್ಟ್​ಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ : ನ್ಯಾಯಮೂರ್ತಿ ಜಿ.ನರೇಂದ್ರ

author img

By

Published : Jul 6, 2023, 10:34 PM IST

ರಾಜಿ ಸಂಧಾನದ ಮೂಲ ಇತ್ಯರ್ಥಗೊಳಿಸಬಹುದಾದ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ನಡೆಯಲಿರುವ ಸಾರ್ವಜನಿಕರು ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ನ್ಯಾಯಮೂರ್ತಿ ಜಿ.ನರೇಂದ್ರ ಮಾಹಿತಿ ನೀಡಿದ್ದಾರೆ.

Justice G. Narendra spoke at the press conference.
ಸುದ್ದಿಗೋಷ್ಠಿಯಲ್ಲಿ ನ್ಯಾಯಮೂರ್ತಿ ಜಿ.ನರೇಂದ್ರ ಮಾತನಾಡಿದರು.

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ಶನಿವಾರ (ಜು.8) ಹೈಕೋರ್ಟ್ ಸೇರಿ ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ಕಾರ‍್ಯನಿರ್ವಾಹಕ ಅಧ್ಯಕ್ಷರು, ಹಿರಿಯ ನ್ಯಾಯಮೂರ್ತಿ ಜಿ. ನರೇಂದರ್ ತಿಳಿಸಿದ್ದಾರೆ.

ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದಾದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಾರ್ವಜನಿಕರು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ವಿವರಿಸಿದರು.

ಅಲ್ಲದೇ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಪ್ರಕರಣ, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮ್‌ಗಳು, ವೈವಾಹಿಕ/ಕೌಟುಂಬಿಕ ಪ್ರಕರಣ (ವಿಚ್ಛೇದನ ಹೊರತುಪಡಿಸಿ), ಚೆಕ್ ಅಮಾನ್ಯ ಪ್ರಕರಣಗಳು ಸೇರಿ ರಾಜಿಯಾಗಬಲ್ಲ ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನು ಅದಾಲತ್‌ನಲ್ಲಿ ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಟ್ರಾಫಿಕ್ ಉಲ್ಲಂಘನೆ ದಂಡದಲ್ಲಿ ಶೇ 50 ರಿಯಾಯಿತಿ: ಸಂಚಾರ ಉಲ್ಲಂಘನೆ ಆರೋಪಗಳಿಗೆ ಈ ಹಿಂದೆ ನೀಡಿದ್ದ ಶೇ.50 ರಿಯಾಯಿತಿಯನ್ನು ಇದೀಗ ಮತ್ತೆ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಇದರು ಉಪಯೋಗ ಮಾಡಿಕೊಳ್ಳಬೇಕು ಎಂದು ಅವರು ಇದೇ ವೇಳೆ ತಿಳಿಸಿದರು.
ಪೊಲೀಸ್ ಇಲಾಖೆಯ ಅಂಕಿ - ಅಂಶದ ಪ್ರಕಾರ ರಾಜ್ಯಾದ್ಯಂತ 2 ಕೋಟಿಗೂ ಅಧಿಕ ಟ್ರಾಫಿಕ್ ಚಲನ್ ಪ್ರಕರಣಗಳಲ್ಲಿ ಸಾವಿರ ಕೋಟಿಗೂ ಅಧಿಕ ದಂಡದ ಮೊತ್ತ ವಸೂಲಿಗೆ ಬಾಕಿ ಇದೆ.

ಈ ನಿಟ್ಟಿನಲ್ಲಿ ಜೂ.14 ರಂದು ಸರ್ಕಾರದೊಂದಿಗೆ ಸಭೆ ನಡೆಸಿ ಟ್ರಾಫಿಕ್ ಚಲನ್ ಪ್ರಕರಣಗಳ ದಂಡದಲ್ಲಿ ಶೇ.50 ವಿನಾಯಿತಿ ನೀಡುವಂತೆ ಕೋರಲಾಗಿತ್ತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸರ್ಕಾರ, 2023ರ ಫೆ11ಕ್ಕೂ ಹಿಂದಿನ ಟ್ರಾಫಿಕ್ ಚಲನ್ ಪ್ರಕರಣಗಳಲ್ಲಿ ಶೇ.50 ದಂಡದ ಮೊತ್ತ ವಿನಾಯಿತಿ ನೀಡಿ ಜು.5 ರಂದು ಆದೇಶ ಹೊರಡಿಸಿರುವುದಾಗಿ ಹೇಳಿದರು. ನ್ಯಾಯಮೂರ್ತಿ ಕೆ.ಸೋಮಶೇಖರ್ ಈ ವೇಳೆ ಹಾಜರಿದ್ದರು.

ಸ್ನೇಹಿತನ ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ ವ್ಯಕ್ತಿ ವಿರುದ್ದ ಪ್ರಕರಣ ರದ್ದು: ಹೈಕೋರ್ಟ್- ಬೆಂಗಳೂರು:- ತನ್ನ ಸ್ನೇಹಿತ ಪತ್ನಿಯ ಚಾರಿತ್ರವಧೆ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಹೋಬಳಿಯ ಕಾಳೇನಹಳ್ಳಿಯ ತಿಮ್ಮರಾಜು ಎಂಬುವರು ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣದಲ್ಲಿ ಆತ್ಮ ಹತ್ಯೆಗೆ ಪ್ರೇರಣೆ ನೀಡಿರುವ(ಐಪಿಸಿ ೩೦೬) ಯಾವುದೇ ಅಂಶಗಳು ಗೋಚರಿಸುತ್ತಿಲ್ಲ. ಜತೆಗೆ, ಅರ್ಜಿದಾರರು ಆರೋಪಿ ಮತ್ತು ಕುಟುಂಬದ ಸದಸ್ಯರಲ್ಲ. ಹೀಗಿರುವಾಗ ಅವರನ್ನು ಆರೋಪಿ ಎಂದು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.

ಅಲ್ಲದೇ ಐಪಿಸಿ ಸೆಕ್ಷನ್ 498 ಎ ಪ್ರಕಾರ ಮಹಿಳೆಗೆ ಗಂಡ ಮತ್ತು ಆತನ ಕುಟುಂಬಸ್ಥರಿಂದ ಹಿಂಸೆ ನೀಡುವುದಾಗಿದೆ. ಆದರೆ, ಅರ್ಜಿದಾರರು ಪ್ರಕರಣದ ಮೊದಲನೇ ಆರೋಪಿಯ(ಮೃತರ ಪತಿ) ಕುಟುಂಬದ ಸದಸ್ಯರಲ್ಲ, ಜತೆಗೆ, ಆರೋಪಿಯ ಸ್ನೇಹಿತ ಮಾತ್ರ ಆಗಿದ್ದಾರೆ. ಅಲ್ಲದೇ ಆರೋಪಿತರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳನ್ನು ಆರೋಪ ಪಟ್ಟಿಯಲ್ಲಿ ತೋರಿಸಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಅಲ್ಲದೇ ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಆತ್ಮಹತ್ಯೆಗೆ ಪ್ರಚೋದನೆ ನೀಡುವ ಆರೋಪದಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದು ಸದಾ ಪ್ರಚೋದನೆ ನೀಡುತ್ತಿರಬೇಕು. ಅಲ್ಲದೆ, ಮೃತರನ್ನು ಆತ್ಮ ಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಳ್ಳುವಂತಹ ಪ್ರಕ್ರಿಯೆ ಇರಬೇಕು. ಆದರೆ, ಈ ಪ್ರಕರಣದಲ್ಲಿ ಈ ರೀತಿಯ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಅಭಿಪ್ರಾಯ ಪಟ್ಟು ಪ್ರಕರಣ ರದ್ದು ಪಡಿಸಿ ಆದೇಶಿಸಿದೆ.

ಇದನ್ನೂಓದಿ: ಧಾರವಾಡ ಭೇಟಿಗೆ ಅವಕಾಶ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.