ETV Bharat / state

ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಲವ್ ಜಿಹಾದ್, ಪಾಕಿಸ್ತಾನ ಜಿಂದಾಬಾದ್ ಫ್ರೀ: ಆರ್.ಅಶೋಕ್

author img

By

Published : Jul 13, 2023, 2:09 PM IST

ಮಾಜಿ ಸಚಿವ ಆರ್​. ಅಶೋಕ್ ಅವರು​ ಲವ್​ ಜಿಹಾದ್​ ವಿಚಾರವಾಗಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ್ ವಾಗ್ದಾಳಿ
ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಲವ್ ಜಿಹಾದ್​, ಪಾಕಿಸ್ತಾನ ಜಿಂದಾಬಾದ್ ಎನ್ನುವುದಕ್ಕೆ ರಹದಾರಿ ಸಿಕ್ಕಂತಾಗಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಟೀಕಿಸಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್‌ನವರು ಇದಕ್ಕೆಲ್ಲ ಒಂದು ರೀತಿ ಅನುಮತಿ ಕೊಟ್ಟಿದ್ದಾರೆ, ಹೀಗಾಗಿ ಇನ್ಮೇಲೆ ಇವೆಲ್ಲವೂ ಫ್ರೀ ಎಂದರು. ದೇಶ ವಿರೋಧಿ ಚಟುವಟಿಕೆ‌ ಮಾಡುವ ಪಿಎಫ್ಐ ಕೇಸ್​ಗಳನ್ನು ವಾಪಸ್ ಪಡೆದರು. ಮುಂದೆನೂ ಅದೇ ರೀತಿ ಆಗುತ್ತೆ. ಟಿಪ್ಪು ಸಿದ್ದಾಂತ ಇಟ್ಟುಕೊಂಡು ಬಂದವರು ಕಾಂಗ್ರೆಸ್​ನವರು. ಹಿಂದು ಮಠಗಳಿಗೆ ಹಣ ಕೊಟ್ಟಿಲ್ಲ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ಹಿಂದು ವಿರೋಧಿ ಸರ್ಕಾರವಿದು ಎಂದು ಆರೋಪಿಸಿದರು.

ಸರ್ಕಾರ ಬಂದು ಎರಡೇ ತಿಂಗಳಲ್ಲಿ ವರ್ಗಾವಣೆ ದಂಧೆಯ ಕರಾಳ ರೂಪದ ಮಾತಾಡುವ ಸ್ಥಿತಿ ಬಂದಿದೆ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದ ದರ ಪಟ್ಟಿ ನನಗೆ ತೋರಿಸಿದ್ದರು. ರೇಟ್ ಕಾರ್ಡ್ ಕೃಷಿ ಇಲಾಖೆಯದ್ದು ಎಂದು ಹೇಳಿದ್ದರು. ಲಕ್ಷದಿಂದ ಕೋಟಿಯವರಿಗೂ ದರ ತೋರಿಸಿದ್ದಾರೆ. ನಲವತ್ತು, ಐವತ್ತು ಕೋಟಿ ದರ ಹಾಕಿ ತೋರಿಸಿದ್ದಾರೆ. ಸದನದಲ್ಲಿ ಇದನ್ನು ಓದಿದರೆ ಗಲಾಟೆ ಆಗಲಿದೆ ಎಂದು ಸ್ಪೀಕರ್​ಗೆ, ಸಿಎಂಗೆ ಕಳಿಸಿದ್ದಾರೆ ಎಂದರು.

ಈ ಹಿಂದೆ ರಮೇಶ್ ಕುಮಾರ್ ಮಾತನಾಡುತ್ತಾ, ಮೂರು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದಿದ್ದರು. ಕರ್ನಾಟಕ ಎಟಿಎಂ ಆಗಿದೆ, ಅದಕ್ಕಾಗಿ ದೇಶದ ವಿಪಕ್ಷಗಳ ಸಭೆ (ಮಹಾಘಟಬಂಧನ್) ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ಲೂಟಿ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು. ಬಸವರಾಜ್ ರಾಯರೆಡ್ಡಿ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲ ಗ್ಯಾರಂಟಿ ಮೋಸ, ಮೋಸ. 50%, 75% ಡಿಸ್ಕೌಂಟ್ ಆಗಿದೆ. ಎಲ್ಲದರಲ್ಲೂ ಷರತ್ತು ಹಾಕಿದ್ದಾರೆ. ಹಾಗೇಯೆ ಡಿ.ಕೆ. ಶಿವಕುಮಾರ್ ಅವರ ಸಿಎಂ ಆಗುವ ಕನಸು ಡಿಸ್ಕೌಂಟ್ ಭಾಗ್ಯ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಲ್ಲೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದ ಆರ್.​ ಅಶೋಕ್​ ಮತಾಂತರವಾದರೆ ಕಾಂಗ್ರೆಸ್ಸಿಗೆ ಮತ ಬೀಳುತ್ತೆ. ಹಾಗಾಗಿ, ಮತಾಂತರಕ್ಕೆ ಸಿದ್ದರಾಮಯ್ಯ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹಾಗಾದ್ರೆ, ಪಕ್ಕದ ಮನೆಯ ಅಮರನಾಥ್ ಇದ್ದವರು, ಮುಂದೆ ಅಬ್ದುಲ್ ಘನಿ ಆಗ್ಬೇಕಾ?. ಈ ದೇಶ ನಮ್ಮ ಕೈಯಲ್ಲಿ ಉಳಿಬೇಕು ಅಂದ್ರೆ ಮತಾಂತರ ಆಗ್ಬೇಕು ಅಂತ ಬ್ರಿಟಿಷರು ಹೇಳಿದ್ರು. ಬಾಬರ್, ಔರಂಗಜೇಬ್ ಈ ದೇಶ ನಮ್ಮ ಕೈಗೆ ಬರಬೇಕಾದ್ರೆ ಎಲ್ಲರೂ ಮುಸ್ಲಿಂ ಆಗ್ಬೇಕು ಅಂದಿದ್ದರು. ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಶಾಸಕರನ್ನು ಎತ್ತಿ, ಎಳೆದು ಅಸೆಂಬ್ಲಿಯಿಂದ ಹೊರ ಹಾಕಿದ ಮಾರ್ಷಲ್​ಗಳು! ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.