ಬಣ್ಣ ನಮ್ಮದು, ಶಾಲೆಗೆ ಸಹಾಯ ನಿಮ್ಮದು : ಬಣ್ಣ ದರ್ಪಣ ಅಭಿಯಾನ ಆರಂಭಿಸಿದ ಪ್ರಹ್ಲಾದ ಜೋಶಿ

author img

By

Published : Oct 4, 2022, 8:16 PM IST

prahlada-joshi-started-the-banna-darpan-campaign

ಬಣ್ಣ ನಮ್ಮದು, ಶಾಲೆ ಮತ್ತು ಸಹಾಯ ನಿಮ್ಮದು ಎಂಬ ಬಣ್ಣ ದರ್ಪಣ ಅಭಿಯಾನಕ್ಕೆ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದು, ನಟ ರಮೇಶ್​ ಅರವಿಂದ್​ ಬೆಂಬಲಿಸಿದ್ದಾರೆ.

ಬೆಂಗಳೂರು : ಹಲವಾರು ವರ್ಷಗಳಿಂದ ಸುಣ್ಣ-ಬಣ್ಣ ಕಾಣದೇ ಪಾಳುಬಿದ್ದ ಕಟ್ಟಡವೆಂದು ಭಾಸವಾಗುತ್ತಿರುವ ಸರಕಾರಿ ಶಾಲೆ - ಕಾಲೇಜುಗಳಿಗೆ ಬಣ್ಣ ಬಳಿದು ನವ ವಧುವಿ ರೀತಿ ಕಂಗೊಳಿಸುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಂದಾಗಿದ್ದಾರೆ. ಇದಕ್ಕಾಗಿ ಬಣ್ಣ ದರ್ಪಣ ಎಂಬ ಅಭಿಯಾನ ಆರಂಭಿಸಿದ್ದು, ವರ್ಷದಲ್ಲಿ ಕ್ಷಮತಾ ಸೇವಾ ಸಂಸ್ಥೆ ಸಹಬಾಗಿತ್ವದೊಂದಿಗೆ ಧಾರವಾಡ ಲೋಕಸಭೆ ಕ್ಷೇತ್ರದ 1,130 ಶಾಲೆಗಳಿಗೆ ಬಣ್ಣ ಬಳಿಯುವ ಕಾರ್ಯಕ್ರಮ ರೂಪಿಸಿದ್ದಾರೆ. ಈ ಅಭಿಯಾನಕ್ಕೆ ಕೈ ಜೋಡಿಸುವಂತೆ ಜೋಶಿ ಮನವಿ ಮಾಡಿದ್ದಾರೆ.

ಬಣ್ಣ ನಮ್ಮದು, ಶಾಲೆ ಮತ್ತು ಸಹಾಯ ನಿಮ್ಮದು : ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಬಣ್ಣಗಳನ್ನು ಕ್ಷಮತಾ ಸಂಸ್ಥೆ ಮೂಲಕ ಉಚಿತವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒದಗಿಸಲಿದ್ದಾರೆ. ಆದರೆ ಶಾಲೆಯ ಗೋಡೆಗಳಿಗೆ ಪೇಂಟಿಂಗ್ ಮಾಡಿಸುವ ಜವಾಬ್ದಾರಿಯನ್ನು ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣದರ್ಪಣೆ ಅಭಿಯಾನ ಆರಂಭಿಸಿರುವ ಕೇಂದ್ರ ಸಚಿವ ಜೋಶಿ, ಬಣ್ಣ ನಮ್ಮದು, ಶಾಲೆ ಮತ್ತು ಸಹಾಯ ನಿಮ್ಮದು, ಬನ್ನಿ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ. ಬಣ್ಣದರ್ಪಣೆ ಅಭಿಯಾನಕ್ಕೆ ನಟ ರಮೇಶ್ ಅರವಿಂದ ಬೆಂಬಲಿಸಿದ್ದಾರೆ.

ಬಣ್ಣ ದರ್ಪಣ ಅಭಿಯಾನ ಆರಂಭಿಸಿದ ಪ್ರಹ್ಲಾದ ಜೋಶಿ

ವಿದ್ಯಾರ್ಥಿ ಸಂಘಟನೆಗಳಿಗೆ ಮನವಿ : ಶಾಲಾ ಕಾಲೇಜುಗಳ ಹಳೆಯ ವಿದ್ಯಾರ್ಥಿ ಸಂಘಗಳು ಮುಂದೆ ಬಂದು ಉಚಿತವಾಗಿ ಬಣ್ಣ ಪಡೆದು ತಮ್ಮ ಶಾಲೆ ಮತ್ತು ಕಾಲೇಜುಗಳಿಗೆ ಪೇಂಟ್ ಮಾಡಿಕೊಳ್ಳಬಹುದಾಗಿದೆ. ನೀವು ಕಲಿತ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚಲು ಕೈ ಜೋಡಿಸುವಂತೆ ಮನವಿ ಮಾಡಿರುವ ಸಚಿವರು ಬಣ್ಣದರ್ಪಣೆ ಅಭಿಯಾನಕ್ಕೆ ಸಹಯೋಗ ನೀಡುವಂತೆ ವಿದ್ಯಾರ್ಥಿ ಸಂಘಟನೆಗಳಿಗೆ ಸಹ ಕರೆ ನೀಡಿದ್ದಾರೆ.

ಸ್ಥಳೀಯ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಬಹುದಾಗಿದೆ. ವಿಶೇಷವಾಗಿ ಗ್ರಾಪಂ, ಜಿ.ಪಂ ಸದಸ್ಯರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಸ್ಥಳೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ಬಣ್ಣ ಹೊಡೆಸುವ ಜವಾಬ್ದಾರಿ ಹೊರಬೇಕು. ಯಾರೇ ಮುಂದೆ ಬಂದರೂ, ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಬಣ್ಣ ನೀಡಲಾಗುವುದು ಎಂದು ಪ್ರಹ್ಲಾದ್ ಜೋಶಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : 108 ಆರೋಗ್ಯ ಕವಚ ಸಿಬ್ಬಂದಿಗೆ ಇಲ್ಲದ ದಸರಾ ಹಬ್ಬದ ಸಂಭ್ರಮ : ಎರಡು ತಿಂಗಳಿಂದ ಸಂಬಳ ನೀಡದ ಜಿವಿಕೆ ಸಂಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.