ETV Bharat / state

ಸಿಲಿಕಾನ್ ಸಿಟಿಯಲ್ಲಿ ಮೋದಿ ಮೋಡಿ : ರೋಡ್ ಶೋ ವೇಳೆ ನಮೋಗೆ ಹೂವಿನ ಸುರಿಮಳೆ

author img

By

Published : Apr 29, 2023, 7:35 PM IST

Updated : Apr 29, 2023, 7:52 PM IST

ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಭರ್ಜರಿ ರೋಡ್​ ಶೋ ನಡೆಸಿದರು.

pm-narendra-modi-rally-at-bengaluru
ಸಿಲಿಕಾನ್ ಸಿಟಿಯಲ್ಲಿ ಮೋದಿ ಮೋಡಿ : ರೋಡ್ ಶೋ ವೇಳೆ ನಮೋಗೆ ಹೂವಿನ ಸುರಿಮಳೆ

ಸಿಲಿಕಾನ್ ಸಿಟಿಯಲ್ಲಿ ಮೋದಿ ಮೋಡಿ : ರೋಡ್ ಶೋ ವೇಳೆ ನಮೋಗೆ ಹೂವಿನ ಸುರಿಮಳೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದು, ನೆಚ್ಚಿನ ನಾಯಕನಿಗೆ ಪುಷ್ಪವೃಷ್ಟಿಗೈಯುವ ಮೂಲಕ ಕ್ಷೇತ್ರದ ಜನತೆ ಸ್ವಾಗತಿಸಿದರು. ಈ ವೇಳೆ ಮೋದಿ ಪರ ಜಯಘೋಷಗಳನ್ನು ಮೊಳಗಿಸಿದರು. ಅಪಾರ ಜನಸ್ತೋಮದತ್ತ ಕೈಬೀಸುತ್ತಲೇ ಮೋದಿ ಮೋಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆರು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಮೊದಲ ದಿನದ ರಾಜ್ಯ ಪ್ರವಾಸ ಬೆಂಗಳೂರಿನ ರೋಡ್ ಶೋ ಮೂಲಕ ಇಂದು ಮುಕ್ತಾಯಗೊಂಡಿತು. ಸಂಜೆ 6.15ಕ್ಕೆ ನಗರದ ತುಮಕೂರು ರಸ್ತೆಯಲ್ಲಿರುವ ನೈಸ್ ರಸ್ತೆ ಜಂಕ್ಷನ್ ಗೆ ಆಗಮಿಸಿದ ಮೋದಿ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿವಿ ಸದಾನಂದಗೌಡ ಹಾಗು ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತ್ರ ಮೋದಿ ಜೊತೆ ತೆರೆದ ವಾಹನದಲ್ಲಿ ಉಪಸ್ಥಿತರಿದ್ದರು.

ನೈಸ್ ರೋಡ್ ಜಂಕ್ಷನ್ ನಿಂದ ಆರಂಭಗೊಂಡ ರೋಡ್ ಶೋ ಸುಮನಹಳ್ಳಿ ಸರ್ಕಲ್​ವರೆಗೂ ಸಾಗಿತು. ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಮೋದಿಗೆ ಜೈಕಾರ ಹಾಕಿತು. ಮೋದಿಯತ್ತ ಪುಷ್ಪವೃಷ್ಟಿ ಸುರಿಸಿ ಅದ್ಧೂರಿ ಸ್ವಾಗತ ಕೋರಿದರು. ನೆರೆದಿದ್ದ ಕಾರ್ಯಕರ್ತರು ಅಭಿಮಾನಿಗಳತ್ತ ಕೈಬೀಸಿದ ಮೋದಿ ಮಂದಹಾಸದೊಂದಿಗೆ ರೋಡ್ ಶೋ ನಡೆಸಿದರು. ರಸ್ತೆಯ ಎರಡೂ ಕಡೆಯಲ್ಲಿಯೂ ಜನರು ಮೋದಿಗೆ ಜೈಕಾರ ಕೂಗುತ್ತ ಹೆಜ್ಜೆ ಹಾಕಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ, ಆರ್.ಆರ್. ನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ರೋಡ್ ಶೋ ನಡೆದಿದ್ದು, ಯಶವಂತಪುರ, ಆರ್.ಆರ್. ನಗರ, ಮಲ್ಲೇಶ್ವರ, ಪುಲಕೇಶಿನಗರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ, ಮಹಾಲಕ್ಷ್ಮಿ ಲೇಔಟ್, ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕರ್ತರು ರೋಡ್ ಶೋ ವೀಕ್ಷಿಸಲು ಆಗಮಿಸಿದ್ದರು.

ಒಟ್ಟು 5.5 ಕಿಲೋಮೀಟರ್ ವರೆಗೂ 45 ನಿಮಿಷಗಳ ಕಾಲ ರೋಡ್ ಶೋ ನಡೆಸಲಾಯಿತು. ಇಡೀ ರೋಡ್ ಶೋ ನಲ್ಲಿ ಯಾವುದೇ ಅಭ್ಯರ್ಥಿಗಳ ಪರ ಪ್ರಚಾರವಾಗಲಿ, ಮೋದಿ ಭಾಷಣವಾಗಲಿ ಇರಲಿಲ್ಲ. ಪಕ್ಷದ ಪರವಾಗಿಯೇ ಅಲೆ ಸೃಷ್ಟಿಸುವ ಭಾಗವಾಗಿ ಈ ರೋಡ್ ಶೋ ಹಮ್ಮಿಕೊಳ್ಳಲಾಯಿತು.

ಆಪರೇಷನ್ ಕಮಲದ ಮೂಲಕವೇ ಬಿಜೆಪಿ ಪಾಲಾಗಿರುವ ಯಶವಂತಪುರ, ಆರ್.ಆರ್.ನಗರ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳನ್ನು ದೃಷ್ಟಿಯಲ್ಲಿರಿಸಿಕೊಂಡೇ ಮೋದಿ ರೋಡ್ ಶೋ ನಡೆಸಲಾಗಿದೆ. ಬಿಜೆಪಿ ಭದ್ರಕೋಟೆ ಹೊರತುಪಡಿಸಿ ಹೊಸದಾಗಿ ಬಿಜೆಪಿ ತೆಕ್ಕೆಗೆ ಬಂದ ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳುವ ತಂತ್ರದ ಭಾಗವಾಗಿ ಈ ರೋಡ್ ಶೋ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಡೆಸಲಾಗಿದೆ ಎನ್ನಲಾಗಿದೆ.

ಮೋದಿ ಜೊತೆ ತೆರೆದ ವಾಹನದಲ್ಲಿ ಅಭ್ಯರ್ಥಿಗಳಿಲ್ಲದಿದ್ದರೂ ಆಯಾ ಕ್ಷೇತ್ರ ವ್ಯಾಪ್ತಿಗೆ ರೋಡ್ ಶೋ ಬಂದಾಗ ಸ್ವಾಗತಿಸುವ ಕೆಲಸವನ್ನು ಅಭ್ಯರ್ಥಿಗಳು ಮಾಡಿದರು. ಅಲ್ಲದೆ ತಮ್ಮ ಬೆಂಬಲಿಗರನ್ನು ಸೇರಿಸಿ ಶಕ್ತಿ ಪ್ರದರ್ಶನವನ್ನು ಮಾಡಿದರು. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದು, ಅಭ್ಯರ್ಥಿಗಳಿಗೆ ಬೂಸ್ಟ್ ನೀಡಿದ್ದಾರೆ.

ರೋಡ್ ಶೋ ಮುಗಿಸಿದ ನಂತರ ನೇರವಾಗಿ ಪ್ರಧಾನಿ ಮೋದಿ ರಾಜಭವನಕ್ಕೆ ತೆರಳಿದರು. ರಾಜಭವನದಲ್ಲಿಯೇ ಇಂದು ವಾಸ್ತವ್ಯ ಹೂಡಲಿರುವ ಮೋದಿ ನಾಳೆ ಬೆಳಗ್ಗೆ ಕೋಲಾರಕ್ಕೆ ತೆರಳಲಿದ್ದು, ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಚನ್ನಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದು, ಕಡೆಯದಾಗಿ ಬೇಲೂರಿನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಿ ದೆಹಲಿಗೆ ವಾಪಸ್ಸಾಗಲಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸರ್ಕಾರದಲ್ಲಿ ಸತ್ಯ ಮಾತನಾಡಿದ್ರೆ ಜೈಲಿಗೆ ಕಳಿಸ್ತಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Last Updated : Apr 29, 2023, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.