ETV Bharat / state

ಮುಸ್ಲಿಂ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ: ಕಲ್ಲಡ್ಕ‌ ವಿರುದ್ಧ ಮತ್ತೊಂದು ದೂರು

author img

By ETV Bharat Karnataka Team

Published : Dec 30, 2023, 7:24 PM IST

Updated : Dec 30, 2023, 8:00 PM IST

ಮುಸ್ಲಿಂ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಲ್ಲಡ್ಕ‌ ಪ್ರಭಾಕರ್ ಭಟ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಕಲ್ಲಡ್ಕ‌ ಪ್ರಭಾಕರ್ ಭಟ್ ವಿರುದ್ಧ ಮತ್ತೊಂದು ದೂರು
ಕಲ್ಲಡ್ಕ‌ ಪ್ರಭಾಕರ್ ಭಟ್ ವಿರುದ್ಧ ಮತ್ತೊಂದು ದೂರು

ಬೆಂಗಳೂರು: ಮಂಡ್ಯದಲ್ಲಿ ನಡೆದಿದ್ದ ಹನುಮ ಜಯಂತಿ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಡಿ.ಜೆ. ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ರಕೀಬ್​ವುಲ್ಲಾ ಕೆ.ಎಸ್ ಎಂಬುವರು ಡಿ.ಜೆ. ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಪ್ರಭಾಕರ್ ಭಟ್ ಹೇಳಿಕೆಯಿಂದ ಮುಸ್ಲಿಂ ಧರ್ಮದ ಎಲ್ಲಾ ಮಹಿಳೆಯರ ತೇಜೋವಧೆ ಮಾಡಲಾಗಿದೆ. ಇದು ಮಹಿಳಾ ನಿಂದನೆ, ಜಾತಿ ನಿಂದನೆ ಹಾಗೂ ಧರ್ಮ ನಿಂದನೆಯಾಗಿದ್ದು, ಅವರನ್ನು ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳುವಂತೆ ದೂರಿನಲ್ಲಿ ಕೋರಲಾಗಿದೆ. ದೂರಿನನ್ವಯ ಡಿ.ಜೆ. ಹಳ್ಳಿ ಠಾಣೆಯಲ್ಲಿ ಎನ್.ಸಿ.ಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿದೆ. ಡಿಸೆಂಬರ್ 24ರಂದು ಮಂಡ್ಯದಲ್ಲಿ ನಡೆದಿದ್ದ ಹನುಮ ಜಯಂತಿ ವೇಳೆ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಅನ್ಯಧರ್ಮಿಯ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯದ ಶ್ರೀರಂಗಪಟ್ಟಣ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆದಿದ್ದಾರೆ.

ಆಪ್​ ಮುಖಂಡ ದೂರು: ಕಲ್ಲಡ್ಕ ಪ್ರಭಾಕರ್ ಭಟ್‌ ಅವರು ಮುಸ್ಲಿಂ ಮಹಿಳೆಯರಿಗೆ ಅಗೌರವ ಉಂಟುಮಾಡುವ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶುಕ್ರವಾರ ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಮುಖಂಡ ಉಸ್ಮಾನ್ ನರಸಿಂಹಯ್ಯ ಒತ್ತಾಯಿಸಿದ್ದರು.

ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್‌ ವಿರುದ್ಧ ದೂರು ದಾಖಲಿಸಿದ ಬಳಿಕ ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಸಹಾಯ ಮಾಡಿದ ಹನುಮನ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರಿಗೆ ಮೋದಿ ಬಂದ ಮೇಲೆ ಪರ್ಮನೆಂಟ್ ಗಂಡ ಸಿಕ್ಕಿದ್ದು ಎಂಬ ಹೇಳಿಕೆ ನೀಡಿರುವುದು ಅಕ್ಷಮ್ಯ. ಪ್ರಭಾಕರ್ ಭಟ್ ಈ ರೀತಿ ಮಾತನಾಡಿದ್ದರೂ ಬಿಜೆಪಿ ಮುಖಂಡರು ಯಾಕೆ ಸುಮ್ಮನಿದ್ದಾರೆ?. ಬಿಜೆಪಿ ಅಲ್ಪಸಂಖ್ಯಾತ ಘಟಕ ಸತ್ತು ಹೋಗಿದೆ, ಅವರೆಲ್ಲಾ ದುಡ್ಡಿಗಾಗಿ ಕೆಲಸ ಮಾಡುತ್ತಿರುವ ಕೂಲಿಯಾಳುಗಳು" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಭಾಕರ್ ಭಟ್ ಅವರು ಮಹಿಳಾ ನಿಂದನೆ, ಜಾತಿ ನಿಂದನೆ, ಧರ್ಮ ನಿಂದನೆ ಮಾಡಿದ್ದು, ಈ ರೀತಿ ಹೇಳಿಕೆ ನೀಡುವವರು ದೇಶದ್ರೋಹಿ, ಧರ್ಮ ದ್ರೋಹಿಯಾಗಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್​ಗೆ ಹೈಕೋರ್ಟ್​ನಲ್ಲಿ ರಿಲೀಫ್

Last Updated : Dec 30, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.