ETV Bharat / state

ಸೇವಾ ದಾಖಲೆಗಳಲ್ಲಿ ವಯಸ್ಸು ಸರಿಪಡಿಸಲು ನಿರ್ಲಕ್ಷ್ಯ: 5 ವರ್ಷ ಮುನ್ನವೇ ನಿವೃತ್ತರಾದ ಪ್ರಾಂಶುಪಾಲ

author img

By

Published : Nov 30, 2022, 10:10 AM IST

ವಯೋಮಿತಿ ಮೀರದಿದ್ದರೂ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಸೇವೆಯಿಂದ ನಿವೃತ್ತಿಯಾಗಿದ್ದಾರೆ.

High Court
ಹೈಕೋರ್ಟ್

ಬೆಂಗಳೂರು: ವಯಸ್ಸಿನ ಗೊಂದಲಗಳ ಕುರಿತು ನ್ಯಾಯಾಲಯ ನೀಡಿದ್ದ ಆದೇಶದಂತೆ ಸೇವಾ ದಾಖಲೆಗಳಲ್ಲಿ ಸರಿಪಡಿಸಲು ಶ್ರದ್ಧೆ ತೋರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ವಯೋಮಿತಿ ಮಿರದಿದ್ದರೂ, ಐದು ವರ್ಷಗಳಿಗೂ ಮುನ್ನವೇ ಸೇವೆಯಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.

ತಮ್ಮ ವಯೋಮಿತಿ ಮೀರದಿದ್ದರೂ ಸರ್ಕಾರ ಹೊರಡಿಸಿರುವ ನಿವೃತ್ತರಾಗುತ್ತಿರುವ ಅಧಿಕಾರಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿರುವ ಪಟ್ಟಿಯನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಆದೇಶವನ್ನು ಪ್ರಶ್ನಿಸಿ ನಿವೃತ್ತ ಪ್ರಾಂಶುಪಾಲ ಪಿ.ರಾಮಕೃಷ್ಣ ಎಂಬುವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದ್ರ ಮತ್ತು ಪಿ.ಎನ್.ದೇಸಾಯಿ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ, ಅರ್ಜಿದಾರರು ತಮ್ಮ ಹಕ್ಕನ್ನು ಸಾಧಿಸಲು ಶ್ರದ್ದೆ ತೋರುವಲ್ಲಿ ವಿಫಲವಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ(ವಯಸ್ಸಿನ ನಿರ್ಣಯ) ಕಾಯಿದೆ 1974ರ ನಿಯಮ 5ರ ಪ್ರಕಾರ ನಿಗದಿತ ಸಮಯದೊಳಗೆ ತಮ್ಮ ಜನ್ಮ ದಿನಾಂಕವನ್ನು ಸರಿಪಡಿಸುವುದಕ್ಕೆ ಅವಕಾಶವಿದೆ. ಆದರೆ, ಅರ್ಜಿದಾರರು ತಮ್ಮ ಜನ್ಮ ದಿನಾಂಕವನ್ನು ಸೇವಾ ದಾಖಲೆಗಳಲ್ಲಿ ಬದಲಾವಣೆ ಮಾಡಲು ಮುಂದಾಗಿಲ್ಲ. ತಮ್ಮ ಹಕ್ಕು ಪ್ರತಿಪಾಧಿಸುವಲ್ಲಿ ನಿರಾಸಕ್ತಿ ತೋರಿದ್ದಾರೆ. 1976ರಲ್ಲಿ ಮನವಿ ಮಾಡಿರುವುದಾಗಿ ಹೇಳಿರುವುದು ಸತ್ಯವೆಂದು ಪರಿಗಣಿಸಿದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕ್ರಮಗಳನ್ನು ಕೈಗೊಂಡಿಲ್ಲ.

ಇದರ ಜತೆಗೆ, ವ್ಯಕ್ತಿಯೊಬ್ಬರು ತನ್ನ ಹಕ್ಕುಗಳನ್ನು ಪ್ರತಿಪಾದನೆ ವಿಷಯಲ್ಲಿ ಅತ್ಯಂತ ಜಾಕರೂಕರಾರಾಗಿರಬೇಕು. ಮತ್ತು ಶ್ರದ್ದೆಯಿಂದಿರಬೇಕು. ಆದರೆ, ಅರ್ಜಿದಾರರು ತಮ್ಮ ಸೇವಾ ದಾಖಲೆಗಳಲ್ಲಿ ವಯಸ್ಸಿನ ಗೊಂದಲವನ್ನು ಸರಿಪಡಿಸುವಲ್ಲಿ ವಿಫಲರಾಗಿದ್ದು, ಶ್ರದ್ದೆಯನ್ನು ತೋರಿಲ್ಲ.
ವಯಸ್ಸನ್ನು ಸರಿಪಡಿಸುವಂತೆ 1975ರಲ್ಲಿ ಅರ್ಜಿ ಸಲ್ಲಿಸಿದ್ದರೂ, ನಿವೃತ್ತಿಯ ಮುನ್ನದಿನ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದು ಅತ್ಯಂತ ವಿಳಂಬದ ಪ್ರಕ್ರಿಯೆಯಾಗಿದೆ. ಮುಖ್ಯವಾಗಿ ವಯಸ್ಸನ್ನು ಸರಿಪಡಿಸುವುದಕ್ಕಾಗಿ ಮನವಿ ಸಲ್ಲಿಸಿರುವ ಕುರಿತ ಸ್ವೀಕೃತಿಗಳನ್ನು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧಿಕರಣಕ್ಕೆ ಸಲ್ಲಿಸಿಲ್ಲ. ಹೀಗಾಗಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಯಾವುದೇ ದೋಷಗಳು ಕಾಣುತ್ತಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರ ರಾಮಕೃಷ್ಣ ಅವರು 1975ರ ನವಂಬರ್ 12ರಂದು ಸೇವೆಗೆ ಸೇರ್ಪಡೆಗೊಂಡಿದ್ದರು. 2004ರ ಡಿಸೆಬರ್ 31ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೇವೆಗೆ ಸೇರ್ಪಡೆಗೂ ಮುನ್ನ ಅವರ ಜನ್ಮ ದಿನಾಂಕವನ್ನು 1945ರ ಡಿಸೆಂಬರ್ 16ರ ಬದಲಿಗೆ 1950ರ ಫೆಬ್ರವರಿ 25 ಎಂಬುದಾಗಿ ಬದಲಿಸುವಂತೆ ಕೋರಿ ದಾವೆ ಹೂಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಅವರ ವಯಸ್ಸನ್ನು 1950ರ ಫೆಬ್ರವರಿ 25 ಎಂಬುದಾಗಿ ಪ್ರಕಟಿಸಿತ್ತು. ಆದರೆ, ಈ ಆದೇಶದಂತೆ ತಮ್ಮ ಜನ್ಮ ದಿನಾಂಕವನ್ನು ಅರ್ಜಿದಾರರು ಸೇವಾ ದಾಖಲೆಗಳಲ್ಲಿ ಬದಲಾಯಿಸಲು ಪ್ರಯತ್ನಿಸಿರಲಿಲ್ಲ.
2004ರಲ್ಲಿ ನಿವೃತ್ತರಾಗುವ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರ 2003ರ ಡಿಸೆಂಬರ್ 18ರಲ್ಲಿ ಅಧಿಸೂಚನೆ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಕ್ರಮ ಸಂಖ್ಯೆ 48ರಲ್ಲಿ ಅರ್ಜಿದಾರರ ಹೆಸರು ಉಲ್ಲೇಖವಾಗಿತ್ತು.

ಅಧಿಸೂಚನೆ ಪ್ರಕಟವಾದ ತಕ್ಷಣ ಅರ್ಜಿದಾರರು(ನಿವೃತ್ತ ಪ್ರಾಂಶುಪಾಲರು) ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ನಿವೃತ್ತಿಯಾಗುತ್ತಿರುವ ಕುರಿತು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದು ಮಾಡುವಂತೆ ಕೋರಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಕೆಎಟಿಯಲ್ಲಿ ಪ್ರಶ್ನಿಸುವಂತೆ ಸೂಚನೆ ನೀಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಕೆಎಟಿಗೆ ಅರ್ಜಿದಾರರು ತಮ್ಮ ಜನ್ಮ ದಿನಾಂಕ ಬದಲಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಸಂಬಂಧ ಸ್ವೀಕೃತಿ ಪತ್ರ/ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಮಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಗೊಂದಲ: ಮಹಿಳಾ ಅಭ್ಯರ್ಥಿಗಳಿಂದ ಸಿಎಂಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.