ETV Bharat / state

ಮಾರ್ಚ್ 25, 26ರಂದು ನಮ್ಮ ಬೆಂಗಳೂರು ಹಬ್ಬ: ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ

author img

By

Published : Mar 20, 2023, 5:49 PM IST

Updated : Mar 20, 2023, 6:12 PM IST

ಮಾ.26 ರಂದು ಬೆಂಗಳೂರು ಹಬ್ಬದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿ ವಿಧಾನಸೌಧದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.

namma-bangalore-habba-programm-organized-by-govt
ಮಾರ್ಚ್ 25, 26ರಂದು ನಮ್ಮ ಬೆಂಗಳೂರು ಹಬ್ಬ: ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ

ವಿಧಾನಸಭೆ ಚುನಾವಣೆ 2023.. ಆಮ್ ಆದ್ಮಿ ಪಾರ್ಟಿಯ ಬೆಸ್ಟ್‌ ಲಿಸ್ಟ್‌ ಬಿಡುಗಡೆ, ಇಲ್ಲಿದೆ ಅಭ್ಯರ್ಥಿಗಳ ಮಾಹಿತಿ

ಬೆಂಗಳೂರು: ಕರ್ನಾಟಕ ಸಂಸ್ಕೃತಿ ಇತಿಹಾಸ ಹಾಗೂ ಪರಂಪರೆಗಳನ್ನು ಬೆಂಗಳೂರಿನಲ್ಲಿ ನೆಲೆಸಿರುವ ಇತರೆ ಭಾಷಿಕರನ್ನು ಒಳಗೊಂಡಂತೆ ನಾಡಿನ ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಮಾರ್ಚ್ 25 ಮತ್ತು 26 ರಂದು ‘ನಮ್ಮ ಬೆಂಗಳೂರು ಹಬ್ಬ’ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ವಿಧಾನಸೌಧದಲ್ಲಿ ಇಂದು ಬೆಂಗಳೂರು ಹಬ್ಬದ ಲೋಗೋವನ್ನು ಬಿಡುಗಡೆ ಮಾಡಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದ ವೇದಿಕೆಯಲ್ಲಿ ಮಾ.25 ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ಅನನ್ಯ ಭಟ್, ನವೀನ್ ಸಜ್ಜು, ಜನಾರ್ಧನ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಮಾ.25ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕಬ್ಬನ್ ಪಾರ್ಕ್ ಆವರಣದ ವಿವಿಧ ಸ್ಥಳಗಳಲ್ಲಿ ಬೆಂಗಳೂರು ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಮಿತ್ ಶಾ ಅವರಿಂದ ಪ್ರತಿಮೆ ಅನಾವರಣ: ಮಾ.26 ರಂದು ಬೆಂಗಳೂರು ಹಬ್ಬದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ 5 ಗಂಟೆ ವಿಧಾನಸೌಧದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ನಂತರ ನಾಡಿನ ಪ್ರಸಿದ್ಧ ಸಂಗೀತಗಾರರಿಂದ ಗಾಯನ ಕಾರ್ಯಕ್ರಮ ಹಾಗೂ ಪ್ರಭಾತ್ ಕಲಾವಿದರಿಂದ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಚಿತ್ರಸಂತೆಯ ಮಾದರಿಯಲ್ಲಿ ಕಬ್ಬನ್ ಪಾರ್ಕ್​ನ ರಸ್ತೆಯಲ್ಲಿ ವೈವಿಧ್ಯಮಯ ಚಿತ್ರಕಲೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟ ಹಾಗೂ ಶಿಲ್ಪಕಲಾ ಉತ್ಸವದಡಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದ ಜೇಡಿಮಣ್ಣು/ಶಿಲೆ/ಕಾಷ್ಠ ಶಿಲ್ಪಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟಗಳನ್ನು ಏರ್ಪಡಿಸಲಾಗಿದೆ. ವಿವಿಧ ಇಲಾಖೆಗಳು, ಅಕಾಡೆಮಿಗಳು, ವಿವಿಧ ಸಂಘಟನೆಗಳ ವತಿಯಿಂದ ಕರಕುಶಲ ವಸ್ತುಗಳ ಮೇಳವನ್ನೂ ಆಯೋಜಿಸಲಾಗಿದೆ ಎಂದರು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು: ಬಾಲಭವನ ಆವರಣದ ಆಂಪಿಕ್ ಥಿಯೇಟರ್ ವಿವಿಧ ಅಕಾಡೆಮಿಗಳು, ರಂಗಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ, ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮಗಳನ್ನು ಬಾಲಭವನ ಆವರಣದ ಆಂಪೀಕ್ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ.

ಕಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟಾಂಡ್ ವೇದಿಕೆ: ಈ ವೇದಿಕೆಯಲ್ಲಿ ಪೋಲಿಸ್ ಬ್ಯಾಂಡ್ ವಾದನ, ನೃತ್ಯ ಜನಪದ ಗಾಯನ, ಯಕ್ಷಗಾನ, ನಾಟಕ ಹಾಗೂ ವಿವಿಧ ರಾಜ್ಯಗಳ ಸಂಘಟನೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವಿರುತ್ತದೆ.

ಮಕ್ಕಳ ಚಲನಚಿತ್ರೋತ್ಸ: ಬಾಲಭವನ ಸಭಾಂಗಣದಲ್ಲಿ ಮಾರ್ಚ್​ 24 ರಿಂದ 26 ರವರೆಗೆ ಪ್ರತಿದಿನ 3 ಪ್ರದರ್ಶನಗಳ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಪುಸ್ತಕ ಮೇಳ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಹಾಗೂ ಇತರೆ ಪ್ರಕಾಶನ ಸಂಸ್ಥೆಗಳ ಸಹಯೋಗದಲ್ಲಿ ಕಬ್ಬನ್ ಪಾರ್ಕ್ ಆವರಣದಲ್ಲಿ ಪುಸ್ತಕ ಮೇಳವನ್ನು ಏರ್ಪಡಿಸಲಾಗಿದೆ ಎಂದರು.

ಆಹಾರ ಮೇಳದಲ್ಲಿ ಶೇ10ರಷ್ಟು ರಿಯಾಯಿತಿ: ಬೆಂಗಳೂರು ಹಬ್ಬದ ಅಂಗವಾಗಿ ಹೊಟೇಲ್​ಗಳ ಸಂಘ ಹಾಗೂ ಬೆಂಗಳೂರಿನಲ್ಲಿರುವ ವಿವಿಧ ರಾಜ್ಯಗಳ ಸಂಘಗಳ ಸಹಯೋಗದಲ್ಲಿ ಕಬ್ಬನ್‌ ಪಾರ್ಕ್​ನಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಖ್ಯಾತ ಹೊಟೇಲ್​ಗಳ ಎಲ್ಲಾ ತಿನಿಸುಗಳ ಪ್ರದರ್ಶನ ಮತ್ತು ಮಾರಾಟವನ್ನು ಒಂದೇ ಸ್ಥಳದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಮೇಳದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲು ಹೋಟೆಲ್​ಗಳ ಸಂಘ ನಿರ್ಧರಿಸಿದೆ ಎಂದು ಹೇಳಿದರು.

ಬೆಂಗಳೂರು ಹಬ್ಬದ ಅಂಗವಾಗಿ ಮಾರ್ಚ್​ 25 ಮತ್ತು 26 ರಂದು ಬೆಂಗಳೂರಿನ ಆಯ್ದ ಸಿನಿಮಾ ಮಂದಿರಗಳಲ್ಲಿ ಬೆಳಗಿನ ಆಟದಲ್ಲಿ (ಮಾರ್ನಿಂಗ್ ಶೋ) ಹಳೆಯ ಕನ್ನಡ ಸಿನಿಮಾಗಳ ಉಚಿತ ವೀಕ್ಷಣೆಗೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ದಸರಾ ಮಾದರಿಯಲ್ಲಿ ಬೆಂಗಳೂರು ಹಬ್ಬ: ಮುಂದಿನ ದಿನಗಳಲ್ಲಿ ದಸರಾ ಮಾದರಿಯಲ್ಲಿ ಬೆಂಗಳೂರು ಹಬ್ಬ ಆಚರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಈ ಹಬ್ಬ ನಿರಂತರವಾಗಿ ನಡೆಯುತ್ತದೆ. ಮುಂದಿನ ವರ್ಷದಿಂದ ಜನವರಿ ತಿಂಗಳ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರು ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

Last Updated :Mar 20, 2023, 6:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.