ETV Bharat / state

ರಾತ್ರಿ 12 ಗಂಟೆಯೊಳಗೆ ಪ್ರತಿಪಕ್ಷ ನಾಯಕರ ಹೆಸರು ಪ್ರಕಟ: ಆರ್​ ಅಶೋಕ್

author img

By

Published : Jul 4, 2023, 7:55 PM IST

ವೀಕ್ಷಕರು ಅಭಿಪ್ರಾಯ ಸಂಗ್ರಹ ಮಾಡಿದ್ದು, ಬಹುಶಃ ಇವತ್ತು ನೂತನ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ಆಯ್ಕೆ ಆಗಬಹುದು ಅಂತಾ ಮಾಜಿ ಡಿಸಿಎಂ ಆರ್.ಅಶೋಕ್ ಮತ್ತು ಸಂಸದ ಡಿವಿ ಸದಾನಂದಗೌಡ ಹೇಳಿದ್ದಾರೆ.

ಮಾಜಿ ಡಿಸಿಎಂ ಆರ್.ಅಶೋಕ್
ಮಾಜಿ ಡಿಸಿಎಂ ಆರ್.ಅಶೋಕ್

ಮಾಜಿ ಡಿಸಿಎಂ ಆರ್.ಅಶೋಕ್

ಬೆಂಗಳೂರು: ನೂತನ ರಾಜ್ಯಾಧ್ಯಕ್ಷ ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧ ವೀಕ್ಷಕರು ಅಭಿಪ್ರಾಯ ಸಂಗ್ರಹ ಮಾಡಿದ್ದು, ಬಹುತೇಕ ಇಂದು ರಾತ್ರಿಯೇ ಪ್ರತಿಪಕ್ಷ ನಾಯಕರ ಹೆಸರು ಪ್ರಕಟವಾಗಲಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಆರ್.ಅಶೋಕ್ ಭೇಟಿ ನೀಡಿದರು. ವೀಕ್ಷಕರಾಗಿ ಬಂದಿರುವ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅವರೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ಕೂಡ ತಿಳಿಸಿದರು.

ಹೈಕಮಾಂಡ್ ವೀಕ್ಷಕರ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದರು, ಬೊಮ್ಮಾಯಿ ಹಿಂದೆಯೇ ಆಗಮಿಸಿದ ಅಶೋಕ್ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದ ಅಧ್ಯಕ್ಷರು ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧ ನಾವು ನಮ್ಮ ಅಭಿಪ್ರಾಯಗಳನ್ನು ನೀಡಿದ್ದೇವೆ, ಯಾರ್ಯಾರು ಆಕಾಂಕ್ಷಿಗಳಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಇಂದು ರಾತ್ರಿ 12 ಗಂಟೆ ಒಳಗೆ ತೀರ್ಮಾನ ಪ್ರಕಟವಾಗಲಿದೆ ಎಂದರು.

ಶಾಸಕಾಂಗ ಸಭೆ ನಡೆಸದೇ ಪ್ರತಿಪಕ್ಷ ನಾಯಕರ ಆಯ್ಕೆ ಕಸರತ್ತು: ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ ಮನ್ಸುಖ್ ಮಾಂಡವಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಆಲಿಸದೇ ಆಯ್ದ ಹಿರಿಯರ ಜೊತೆ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಶಾಸಕಾಂಗ ಸಭೆ ನಡೆಸಿದರೆ ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯ ಕೂಡ ಪರಿಗಣಿಸಬೇಕಾಗಲಿದೆ, ಇದರಿಂದ ಆಯ್ಕೆ ವಿಚಾರದಲ್ಲಿ ಮತ್ತೆ ಸಮಸ್ಯೆ ಎದುರಾಗಲಿದೆ ಎನ್ನುವ ಕಾರಣಕ್ಕೆ ಪ್ರಮುಖರ ಅಭಿಪ್ರಾಯ ಆಲಿಸಿ ನಂತರ ಶಾಸಕಾಂಗ ಪಕ್ಷದ ಸಭೆ ನಡೆಸಿ ಹೈಕಮಾಂಡ್ ನಿರ್ಧಾರಿತ ಹೆಸರು ಪ್ರಸ್ತಾಪಿಸಿ ಶಾಸಕಾಂಗ ಪಕ್ಷದ ಸಭೆಯ ಅನುಮೋದನೆ ಪಡೆಯಲಾಗುತ್ತದೆ.

ಇದನ್ನೂ ಓದಿ: ಪ್ರತಿಪಕ್ಷ ನಾಯಕನ ಆಯ್ಕೆ ಕಸರತ್ತು: ಹೈಕಮಾಂಡ್ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ ಆರಂಭ

ಅಭಿಪ್ರಾಯ ಸಂಗ್ರಹಕ್ಕೂ ಮುನ್ನ ಈ ಕುರಿತು ಮಾತನಾಡಿದ ಸಂಸದ ಡಿ.ವಿ ಸದಾನಂದಗೌಡ, ಬಹುಶಃ ಇವತ್ತು ಪ್ರತಿಪಕ್ಷ ನಾಯಕರ ಆಯ್ಕೆ ಆಗಬಹುದು ಅಂತಾ ನಮ್ಮ ಅನಿಸಿಕೆ ಇದೆ. ವೀಕ್ಷಕರು ನನ್ನ ಅಭಿಪ್ರಾಯ ಕೇಳಿದರು, ಅದರಂತೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ, ಸಮರ್ಥ ಪ್ರತಿಪಕ್ಷ ನಾಯಕರನ್ನು ಕೊಡಿ ಅಂತಾ ಕೇಳಿದ್ದೇನೆ, ವೀಕ್ಷಕರ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ವೀಕ್ಷಕರ ವರದಿ ಆಧರಿಸಿ ಕೇಂದ್ರದಿಂದ ಪ್ರತಿಪಕ್ಷ ನಾಯಕನ ಘೋಷಣೆ ಆಗಲಿದೆ ಎಂದಿದ್ದಾರೆ.

ಎಲ್ಲ ಶಾಸಕರ ಅಭಿಪ್ರಾಯವನ್ನು ವಾಪಸ್ ಪ್ರತ್ಯೇಕವಾಗಿ ಕೇಳುವ ಅವಶ್ಯಕತೆ ಇಲ್ಲ, ಮೊನ್ನೆಯೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಪಕ್ಷದ ಕೋರ್ ಕಮಿಟಿ ಸದಸ್ಯರು ಮತ್ತು ಪ್ರಮುಖರ ಅಭಿಪ್ರಾಯ ಪಡೆಯುವ ಸಲುವಾಗಿ ಇಂದು ವೀಕ್ಷಕರು ಬಂದಿದ್ದಾರೆ. ಅವರ ಅಭಿಪ್ರಾಯ ಪಡೆದುಕೊಂಡು ಕೇಂದ್ರಕ್ಕೆ ವರದಿ ನೀಡಲಿದ್ದಾರೆ. ನಾಳೆಯೊಳಗೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಸಹ ಹೇಳಿದ್ದಾರೆ.

ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿದೆ ಎನ್ನುವುದು ನಿಜ. ಸೋಲು ಬಂದಾಗ ನಾವು ಸಹಜವಾಗಿ ಎಂದಿನ ವೇಗದಲ್ಲಿ ಇರುವುದಿಲ್ಲ, ಎಲ್ಲವನ್ನೂ ಅಳೆದೂ ತೂಗಿ ಅಂತಿಮ ಹಂತಕ್ಕೆ ಹೋಗಬೇಕು, ವಿಳಂಬ ಆಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹಾಗಂತ ಕೈಚಲ್ಲಿ ಕುಳಿತಿಲ್ಲ. ನಾವು ಸದಾ ಹೋರಾಟ ಮಾಡಿಕೊಂಡು ಬಂದವರು, ಈಗಲೂ ಹೋರಾಟ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಮರಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೊಂದಾಣಿಕೆಗೆ ಬಗ್ಗದ ಹಿಂದುತ್ವವಾದಿ ವ್ಯಕ್ತಿ ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.