ETV Bharat / state

ನಳಿನ್​ ಬಿಜೆಪಿ ರಾಜ್ಯಾಧ್ಯಕ್ಷರಾಗಿ 3 ವರ್ಷ ಪೂರ್ಣ: ಪಕ್ಷದ ನಾಯಕರಿಂದ ಶುಭ ಹಾರೈಕೆ

author img

By

Published : Aug 28, 2022, 11:29 AM IST

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಮೂರು ವರ್ಷದ ಅವಧಿ ಪೂರ್ಣಗೊಳಿಸುತ್ತಿರುವುದಕ್ಕೆ ಪಕ್ಷದ ನಾಯಕರು ಶುಭ ಕೋರಿದ್ದಾರೆ.

Etv Bharatnalin-kumar-kateel-completes-three-years-as-bjp-state-president
ನಳಿನ್​ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರ್ಣ : ಪಕ್ಷದ ನಾಯಕರಿಂದ ಶುಭ ಹಾರೈಕೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಯಶಸ್ವಿ ಕಾರ್ಯನಿರ್ವಹಣೆಗಾಗಿ ರಾಜ್ಯದ ನಾಯಕರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

2019ರ ಆಗಸ್ಟ್ 20ರಂದು ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಸಂಸದ ನಳಿನ್ ಕುಮಾರ್ ಅವರ ಹೆಸರನ್ನು ಪ್ರಕಟಿಸಿತ್ತು. ಆಗಸ್ಟ್ 28ರಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದ ಮುಂಭಾಗದಲ್ಲಿ ಕಟೀಲ್ ರಾಜ್ಯದ ನೂತನ ಅಧ್ಯಕ್ಷರಾಗಿ ಯಡಿಯೂರಪ್ಪ ಅವರಿಂದ ಅಧಿಕಾರ ಸ್ವೀಕರಿಸಿದ್ದರು.

2020ರ ಜನವರಿ 16ರಂದು ಪಕ್ಷದ ಸಾಂಸ್ಥಿಕ ವ್ಯವಸ್ಥೆಯಂತೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಮೂರು ವರ್ಷಕ್ಕೆ ಕಟೀಲ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೂ ಅವರ ಹೈಕಮಾಂಡ್​​ನಿಂದ ನೇಮಕಗೊಂಡು ಪದಗ್ರಹಣ ಮಾಡಿದ ಪ್ರಕಾರ ಇಂದಿಗೆ ಕಟೀಲ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಮೂರು ವರ್ಷ ಪೂರ್ಣಗೊಂಡಿದೆ. ಈ ಮೂರು ವರ್ಷದಲ್ಲಿ ಕಟೀಲ್ ಸಾರಥ್ಯದ ಬಿಜೆಪಿ ಅತಿ ಹೆಚ್ಚಿನ ಯಶಸ್ಸು ಗಳಿಸಿದ್ದು, ಅವರಿಗೆ ಯಶಸ್ವಿ ನಾಯಕ ಎಂಬ ಪಟ್ಟ ತಂದುಕೊಟ್ಟಿದೆ.

nalin-kumar-kateel-completes-three-years-as-bjp-state-president
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆ ಕಟೀಲ್​

ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದ ನಂತರ ನಡೆದ ಮೊದಲ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 12 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ನಂತರ ನಡೆದ ಆರ್.ಆರ್. ನಗರ, ಶಿರಾ ಕ್ಷೇತ್ರಗಳೆರಡರಲ್ಲಿಯೂ ಬಿಜೆಪಿ ಜಯಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಒಟ್ಟಿನಲ್ಲಿ ಕಟೀಲ್ ಅವಧಿಯಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿಗೆ ಮೇಲುಗೈ ಸಿಕ್ಕಿದೆ.

ಕಟೀಲ್ ಮೂರು ವರ್ಷದ ಅವಧಿ ಪೂರ್ಣಗೊಳಿಸುತ್ತಿರುವುದಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಶುಭ ಕೋರಿದ್ದಾರೆ. ಇನ್ನಷ್ಟು ಸೇವೆ ಪಕ್ಷಕ್ಕೆ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.

ಮೂರು ವರ್ಷ ಮುಗಿಸಿದ ಸಂಭ್ರಮದಲ್ಲಿರುವ ಕಟೀಲ್ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ತಮ್ಮ ಅಧ್ಯಕ್ಷತೆಯಲ್ಲಿಯೇ ಎದುರಿಸಬೇಕು, ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕಟೀಲ್ ಅವಧಿ 2023ರ ಜನವರಿ 16ಕ್ಕೆ ಮುಗಿಯಲಿದೆ. ಚುನಾವಣೆವರೆಗೂ ಮುಂದುವರೆಸಬೇಕು ಎನ್ನುವ ಬೇಡಿಕೆಯನ್ನು ರಾಜ್ಯ ಉಸ್ತುವಾರಿ ಮುಂದೆ ಇರಿಸಿದ್ದಾರೆ. ಇದಕ್ಕೆ ಅರುಣ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದರಾದರೂ ಎಲ್ಲವೂ ಬಿಜೆಪಿ ಹೈಕಮಾಂಡ್ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ: ಪೂರ್ಣಗೊಳ್ಳದ ಕಟೀಲ್ ಅವಧಿ: ಕೇಸರಿ ಪಾಳಯದಲ್ಲಿ ಹೊಸ ರಾಜ್ಯಾಧ್ಯಕ್ಷ ನೇಮಕದ ಬಗ್ಗೆ ಗುಸು ಗುಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.