ETV Bharat / state

ಮಾಜಿ ಸಚಿವ ಈಶ್ವರಪ್ಪ ಅವರಿಂದ ಶಿವಮೊಗ್ಗ ಜಿಲ್ಲೆ ಹಾಳಾಗಿದೆ : ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿ

author img

By ETV Bharat Karnataka Team

Published : Oct 4, 2023, 7:38 PM IST

ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ವಿರುದ್ಧ ಕಾಂಗ್ರೆಸ್​ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

mla-belur-gopalakrishna-slams-former-minister-k-s-eshwarappa
ಶಾಸಕ ಬೇಳೂರು ಗೋಪಾಲಕೃಷ್ಣ

ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

ಬೆಂಗಳೂರು : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮಾತಿನಿಂದಾಗಿ ಇಡೀ ಶಿವಮೊಗ್ಗ ಜಿಲ್ಲೆ ಹಾಳಾಗಿದೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದ ಪ್ರಕರಣದಲ್ಲಿ ಬಿಜೆಪಿಯವರು ಏನು ಮಾಡಿದರು?. ಈಗ ಸತ್ಯ ಶೋಧನಾ ಸಮಿತಿ ಎಂದು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಇಂತಹ ವಿಚಾರವನ್ನು ಅತಿಯಾಗಿ ಮಾಡಲು ಹೋಗಿ ಬಿಜೆಪಿ ರಾಜ್ಯದಲ್ಲಿ ಮೂಲೆಗುಂಪಾಗಿದೆ. ಈಶ್ವರಪ್ಪನಂತವರು ನಾಲಿಗೆ ಹರಿಬಿಡುವುದರಿಂದ ಹೀಗಾಗುತ್ತದೆ. ಸತ್ಯ ಶೋಧನಾ ಸಮಿತಿ ಅಗತ್ಯವಿಲ್ಲ. ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಅವರಿಗೆ ಲಾಭವಾಗುವುದಿಲ್ಲ ಎಂದು ಹೇಳಿದರು. ಈ ಹಿಂದೆ ಹಿಜಾಬ್, ಹಲಾಲ್ ಕಟ್​, ಜಟಕಾ ಕಟ್ ಅಂತ ಹಾಳು ಮಾಡಿದ್ರಿ. ಹರ್ಷನ ಪ್ರಕರಣದಲ್ಲಿ ಬಿಜೆಪಿಯವರು ನೀವೇನು ಮಾಡಿದ್ರಿ?. ನಿಮ್ಮ ಕಾಲದಲ್ಲಿ ಆಗಿಲ್ಲವೇ?. ಇವತ್ತು ಬಿಜೆಪಿ ಮೂಲೆ ಗುಂಪಾಗಿದ್ದು ಇದಕ್ಕಾಗಿಯೇ, ಎಲ್ಲವನ್ನೂ ಅತಿಯಾಗಿ ಮಾಡೋಕೆ ಹೋಗಿ ಮೂಲೆಗುಂಪಾಗಿದೆ. ಈಶ್ವರಪ್ಪ ತರದ ಹಿಂದುತ್ವವಾದಿಗಳು ನಾಲಿಗೆ ಹರಿಬಿಡುವುದರಿಂದ ಹೀಗಾಗುತ್ತದೆ ಎಂದು ಬೇಳೂರು ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ನಡೆದ ಕಲ್ಲು ತೂರಾಟ ಘಟನೆ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿದ್ದು, ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಆದರೆ ಆ ಘಟನೆಗೆ ಕಾರಣಕರ್ತರಾದವರು ಯಾವುದೇ ಸಮುದಾಯದವರಾದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗದಲ್ಲಿ ಮೊನ್ನೆ ನಡೆದ ಘಟನೆಯಲ್ಲಿ ಎಸ್​ಪಿಯವರು ಸಂಪೂರ್ಣ ಹಿಡಿತ ತೆಗೆದುಕೊಂಡಿದ್ದಾರೆ. ಪ್ರಕರಣವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಹಿಂದೂ ಇರಲಿ, ಮುಸ್ಲಿಂ ಸಮುದಾಯ ಇರಲಿ ಯಾರಾದರೇನು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಒತ್ತಾಯ : ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಬಿಜೆಪಿ ಒತ್ತಾಯಿಸಿದೆ. ಕಲ್ಲು ತೂರಾಟ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರನ್ನು ಹಿಡಿದು ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್​ನ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್​ ಸರ್ಕಾರದ ವೈಫಲ್ಯವೆಂದು ಬೊಮ್ಮಾಯಿ ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 140 ದಿನಗಳಾಗಿವೆ. ಕೋಮುವಾದಿ ಶಕ್ತಿಗಳು ಸಾರ್ವಜನಿಕವಾಗಿ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸರ್ಕಾರವನ್ನು ಟೀಕಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗದ ಕಲ್ಲು ತೂರಾಟ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳಿ: ಬಿಜೆಪಿ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.