ETV Bharat / state

ರಾಜ್ಯದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯುವ ಚಿಂತನೆ ಇಲ್ಲ: ಸಚಿವ ಸೋಮಶೇಖರ್

author img

By

Published : Mar 31, 2022, 8:13 PM IST

ಕೃಷಿ ಕಾಯ್ದೆ ವಾಪಸ್​ ಪಡೆಯುವ ಸಂಬಂಧ ನಾಳೆ ಅಮಿತ್​ ಶಾ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ. ರಾಜ್ಯದಲ್ಲಿ ಕೃಷಿ ಕಾಯ್ದೆಗಳ ವಾಪಸ್ ಪಡೆಯುವ ಚಿಂತನೆ ಇಲ್ಲ. ಈವರೆಗೂ ಒಂದೇ ಒಂದು ದೂರು ಎಪಿಎಂಸಿ ಮತ್ತು ಸರ್ಕಾರಕ್ಕೆ ಬಂದಿಲ್ಲ. ಹಾಗಾಗಿ ಕಾಯ್ದೆ ವಾಪಸ್ ಪಡೆಯುವ ಪ್ರಮೇಯ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

Minister of Cooperatives Somashekhar
ಸಹಕಾರಿ ಸಚಿವ ಸೋಮಶೇಖರ್

ಬೆಂಗಳೂರು: ರಾಜ್ಯದಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಪ್ರಸ್ತಾಪವೂ ಇಲ್ಲ. ಯಾವ ಎಪಿಎಂಸಿ ಹಾಗೂ ರೈತರಿಗೆ ತೊಂದರೆಯಾಗಿದೆ ಎಂದು ಒಂದೇ ಒಂದು ದೂರು ಬಂದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಕೃಷಿ ಕಾಯ್ದೆ ವಾಪಸ್ ಪಡೆಯುವುದಿಲ್ಲ: ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದಿದ್ದರೂ ರಾಜ್ಯದಲ್ಲಿ ಕೃಷಿ ಕಾಯ್ದೆಗಳ ವಾಪಸ್ ಪಡೆಯುವ ಚಿಂತನೆ ಇಲ್ಲ. ಎಪಿಎಂಸಿ ಒಳಗೆ ಮಾರಾಟ ಮಾಡುವ ನಿರ್ಬಂಧ ತೆಗೆದು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎನ್ನುವ ಅವಕಾಶವನ್ನು ಸ್ವಾಗತಿಸಿದ್ದಾರೆ. ಮೊದಲು ಹೀಗೆ ಮಾಡಿದರೆ ದಂಡ ವಿಧಿಸುವ, ಜೈಲಿಗೆ ಹಾಕುವ ಅವಕಾಶವಿತ್ತು, ಈಗ ನಿರ್ಬಂಧ ಮುಕ್ತ ಮಾಡಿದ್ದರಿಂದ ಯಾರೂ ವಿರೋಧಿಸುತ್ತಿಲ್ಲ. ಈವರೆಗೆ ಒಂದೇ ಒಂದು ದೂರು ಎಪಿಎಂಸಿ ಮತ್ತು ಸರ್ಕಾರಕ್ಕೆ ಬಂದಿಲ್ಲ. ಹಾಗಾಗಿ ಕಾಯ್ದೆ ವಾಪಸ್ ಪಡೆಯುವ ಪ್ರಮೇಯ ಇಲ್ಲ. ಈ ಕುರಿತು ನಾಳೆ ಅಮಿತ್ ಶಾ ಜೊತೆ ಚರ್ಚೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದ ರೈತ ಸಂಘಟನೆಗಳ ಮುಖಂಡರು ಸಿಎಂ ಜೊತೆ ಚರ್ಚಿಸಿದ್ದಾರೆ. ಈ ವೇಳೆ ರೈತನ ಬೆಳೆ ಇಡೀ ರಾಜ್ಯದ ಎಲ್ಲಿ ಬೇಕಾದರೂ ಮಾರಾಟ ಮಾಡಿದರೆ ಅನುಕೂಲವಾಗಲಿದೆಯಾ? ಅಥವಾ ಒಂದು ಎಪಿಎಂಸಿಯಲ್ಲಿ ಮಾರಾಟ ಮಾಡುವುದು ಅನುಕೂಲವಾ? ಎಂದು ರೈತರಿಗೆ ಸಿಎಂ ಕೇಳಿದ್ದಾರೆ‌. ರೈತ ಸಂಘಟನೆಗಳ ಮನವೊಲಿಸುವಲ್ಲಿ ಸಿಎಂ ಸಫಲರಾಗಿದ್ದಾರೆ ಎಂದು ಸಚಿವರು ಹೇಳಿದರು.

ನಾಳೆ ಸಹಕಾರ ಇಲಾಖೆಯಿಂದ 3 ಕಾರ್ಯಕ್ರಮ: ನಾಳೆ ಸಂಜೆ 4 ಗಂಟೆಗೆ ಬೆಂಗಳೂರು ಪ್ಯಾಲೇಸ್ ಗ್ರೌಂಡ್‍ನಲ್ಲಿ ಸಹಕಾರ ಸಮ್ಮೇಳನ ಮತ್ತು ಸಹಕಾರ ಲಾಂಛನ ಸೇರಿ ವಿವಿಧ ಕಾರ್ಯಕ್ರಮಗಳನ್ನು ಕೇಂದ್ರ ಸಚಿವರಾದ ಅಮಿತ್ ಶಾ ಅವರು ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಗೋಪೂಜೆ ನೆರವೇರಿಸಲಿದ್ದಾರೆ. ನಂತರ ಕೆಎಂಎಫ್ ಹೊರತಂದಿರವ 50-60 ಹೊಸ ಉತ್ಪನ್ನಗಳ ಸ್ಟಾಲ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಸಿ.ಎಂ. ಇಬ್ರಾಹಿಂ ನಾಯಕತ್ವದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೆ: ಹೆಚ್​​​ಡಿಕೆ ವಿಶ್ವಾಸ

ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್, ಸೌಹಾರ್ದ ಸಹಕಾರ ಬ್ಯಾಂಕ್​ನ ಹೊಸ ಕಟ್ಟಡ ಉದ್ಘಾಟನೆಯನ್ನು ಅಮಿತ್ ಶಾ ನೆರವೇರಿಸಲಿದ್ದಾರೆ. ಯಶಸ್ವಿನಿ ಯೋಜನೆ ಮರು ಚಾಲನೆ ಲೋಗೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣ ಮಾಡಲಿದ್ದಾರೆ. ನಂತರ ಸಹಕಾರ ಸಮ್ಮೇಳನ ನಡೆಸಲಿದ್ದು ಅಮಿತ್ ಶಾ ಮಾತನಾಡಲಿದ್ದಾರೆ. ಆದಾಯ ತೆರಿಗೆ ಸಮಸ್ಯೆ, ನಬಾರ್ಡ್ ನಿಂದ ನಮಗಿರುವ ನಿರ್ಬಂಧ ಸೇರಿ ಸಹಕಾರ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನವಿಯನ್ನೂ ನೀಡಲಾಗುತ್ತದೆ. ಈಗಾಗಲೇ ಸಹಕಾರಿಗಳು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಅಮಿತ್ ಶಾ ಗಮನಕ್ಕೆ ತರಲಾಗಿದೆ. ನಬಾರ್ಡ್ ಸಾಲ ನೀಡಲು ಮಿತಿ ಹೇರಿದೆ. ಅದನ್ನು ತೆಗೆಯುವಂತೆ ಮನವಿ ಮಾಡಿದ್ದೆವು, ಈ ಕುರಿತು ಮತ್ತೊಮ್ಮೆ ಮನವಿ ಪತ್ರದ ಮೂಲಕ ಸಲ್ಲಿಕೆ ಮಾಡಲಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.