ETV Bharat / state

ನಕಲಿ ವೋಟರ್ ಐಡಿ ಸೃಷ್ಟಿ ಪ್ರಕರಣದಲ್ಲಿ ಬಂಧಿತ ಆರೋಪಿ ನನ್ನ ಆಪ್ತನಲ್ಲ: ಸಚಿವ ಭೈರತಿ ಸುರೇಶ್

author img

By ETV Bharat Karnataka Team

Published : Oct 21, 2023, 10:34 PM IST

ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನನ್ನ ಆಪ್ತರು ಎಂಬುದು ಸರಿಯಲ್ಲ. ನನ್ನೊಂದಿಗೆ ನೂರಾರು ಜನ ಫೋಟೋ ತೆಗೆಸಿಕೊಂಡಿದ್ದಾರೆ. ಯಾರೇ ತಪ್ಪಿತಸ್ಥರು ಆಗಲಿ, ಕಾನೂನು ಇದೆ ಎಂದು ನಕಲಿ ವೋಟರ್ ಐಡಿ ಪ್ರಕರಣ ಸಂಬಂಧ ಸಚಿವ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

minister-bhairati-suresh-clarified-about-fake-voter-id-creation-case
ನಕಲಿ ವೋಟರ್ ಐಡಿ ಸೃಷ್ಟಿ ಪ್ರಕರಣದಲ್ಲಿ ಬಂಧಿತ ಆರೋಪಿ ನನ್ನ ಆಪ್ತನಲ್ಲ: ಸಚಿವ ಭೈರತಿ ಸುರೇಶ್

ಬೆಂಗಳೂರು: ನಕಲಿ ವೋಟರ್ ಐಡಿ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟವರು ನನ್ನ ಆಪ್ತರಲ್ಲ ಎಂದು ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಮತದಾರರ ನಕಲಿ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ ಪತ್ರಗಳನ್ನು ತಯಾರಿಸಿ ಕೊಡುತ್ತಿದ್ದ ಆರೋಪದಲ್ಲಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಚಿವ ಭೈರತಿ ಸುರೇಶ್‌ ಆಪ್ತ ಎನ್ನಲಾಗುತ್ತಿರುವ ಆರೋಪಿ ಮೌನೇಶ್‌ ಕುಮಾರ್ ಹಣ ನೀಡಿದರೆ ವೋಟರ್ ಐಡಿ, ಆಧಾರ್, ಡಿಎಲ್ ಮಾಡಿಕೊಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ನಕಲಿ ವೋಟರ್ ಐಡಿ ಸೃಷ್ಟಿ ಸಂಬಂಧ ಸಿಸಿಬಿ ಪೊಲೀಸರು ಮೌನೇಶ್‌ ಕುಮಾರ್‌ ಸಹಚರರಾದ ಭಗತ್‌ ಮತ್ತು ರಾಘವೇಂದ್ರ ಎಂಬವರನ್ನು ಬಂಧಿಸಿದ್ದಾರೆ. ಆರೋಪಿ ಮೌನೇಶ್ ಸಚಿವ ಭೈರತಿ ಸುರೇಶ್ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಭೈರತಿ ಸುರೇಶ್, ''ಅನೇಕ ಜನರು ಬಂದು ಫೋಟೊ ತೆಗೆದುಕೊಂಡು ಹೋಗ್ತಾರೆ. ಆಸ್ಪತ್ರೆ ಬಳಿ ಹೋಗಿದ್ದೆ ಅಲ್ಲೂ ಫೋಟೋ ತೆಗೆದುಕೊಂಡ್ರು. ಒಂದು ಸಾವಿಗೆ ಹೋಗಿ ಬಂದೆ, ಫೋಟೋ ತೆಗೆಸಿಕೊಂಡ್ರು. ನೂರಾರು ಜನರ ಜೊತೆ ಫೋಟೋ ಹಿಡಿಸಿಕೊಂಡಿದ್ದೇನೆ. ಸಾವಿರಾರು ಜನರ ಜೊತೆ ಫೋಟೋ ಇದೆ. ಅವರೆಲ್ಲ ತಪ್ಪು ಮಾಡಿದ್ರೆ ನಾನು ಕಾರಣಾನಾ?'' ಎಂದು ಪ್ರಶ್ನಿಸಿದ್ದಾರೆ.

''ರಾಜ್ಯದ ಪೊಲೀಸ್ ಎಲ್ಲರೂ ನಮ್ಮವರೇ. ನ್ಯಾಯಯುತ ತನಿಖೆ ನಡೆಸಲಿ. ನನಗೆ 6 ಕೋಟಿ ಜನರು ಗೊತ್ತು. ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನನ್ನ ಆಪ್ತರು ಅನ್ನೋದು ಸರಿಯಲ್ಲ. ನಿತ್ಯ ನೂರಾರು ಜನ ನನ್ನ ಬಳಿ ಫೋಟೋ ತೆಗೆಸಿಕೊಳ್ತಾರೆ. ಯಾರೇ ತಪ್ಪಿತಸ್ಥರು ಆಗಲಿ, ಕಾನೂನು ಇದೆ. ಅದರ ಪ್ರಕಾರ ತನಿಖೆ ಆಗಲಿ. ನನಗೆ ಬೇಕಾದವರು ಆಗಿದ್ದರೆ ಎಪ್​ಐಆರ್ ಯಾಕೆ ಮಾಡಬೇಕಿತ್ತು. ಹಾಗೇ ಬಿಡಬಹುದಿತ್ತು ಅಲ್ವೆ?'' ಎಂದಿದ್ದಾರೆ.

''ಬೈರತಿ ಸುರೇಶ್ ಕಡೆಯವರು ಅಂದ್ರೆ ಅರೆಸ್ಟ್ ಮಾಡಬಾರದಿತ್ತು. ದೊಡ್ಡ ದೊಡ್ಡ ನಾಯಕರ ಜೊತೆ ಫೋಟೋ ತಗೋತಾರೆ. ಭಗತ್, ಮೌನೇಶ್, ರಾಘವೇಂದ್ರ ಎಲ್ಲರೂ ಪರಿಚಯದವರೇ. ಹಾಗಂತ ಅವರು ಮಾಡಿದ ತಪ್ಪಿಗೆ ನಾನು ಕಾರಣ ಆಗ್ತೀನಾ? ಪ್ರಕರಣದ ವಿಚಾರಣೆ ನಡೆಯಲಿ, ತಪ್ಪಿತಸ್ಥರಿದ್ದರೆ ಕ್ರಮ ತೆಗೆದುಕೊಳ್ಳಲಿ'' ಎಂದು ಸಚಿವ ಭೈರತಿ ಸುರೇಶ್‌ ಹೇಳಿದ್ದಾರೆ.

ಸಚಿವ ಭೈರತಿ ಸುರೇಶ್ ರಾಜೀನಾಮೆಗೆ ಎನ್ ರವಿಕುಮಾರ್ ಆಗ್ರಹ: ಅಕ್ರಮವಾಗಿ ವೋಟರ್ ಐಡಿ, ಆಧಾರ್ ಕಾರ್ಡ್ ಸೃಷ್ಟಿ ಮಾಡುವುದಕ್ಕೆ ಸಚಿವ ಬೈರತಿ ಸುರೇಶ್ ಅವರೇ ಮೂಲ ಮೂಲ ಕಾರಣ ಎಂದು ಆರೋಪಿಸಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.

ಶನಿವಾರ ಬೆಳಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ್ದ ಅವರು, ಒಬ್ಬರಿಗಿಂತ ಒಬ್ಬರು ಸಚಿವರು ಹಣ ಸಂಗ್ರಹ ಮಾಡುವುದರಲ್ಲಿ ಮುಂದಾಗಿದ್ದಾರೆ. ಮಾತ್ರವಲ್ಲ ಅಕ್ರಮಗಳನ್ನು ಮಾಡುತ್ತಿದ್ದಾರೆ. ಸಚಿವ ಬೈರತಿ ಸುರೇಶ್ ಅಕ್ರಮ ವೋಟರ್ ಐಡಿ ಕ್ರಿಯೆಟ್ ಮಾಡಿದ್ದಾರೆ. ಸಿಸಿಬಿ ಪೊಲೀಸ್ ರೇಡ್ ಮಾಡಿದಾಗ ಪ್ರಕರಣ ಹೊರಬಂದಿದೆ. ಈ ಬಗ್ಗೆ ತನಿಖೆ ಆಗಿ ವರದಿ ಬರುವ ತನಕ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಈ ಬಗ್ಗೆ ನಾವು ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ರವಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಆಧಾರ್, ವೋಟರ್ ಐಡಿ ನಕಲು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.