ETV Bharat / state

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ: 'ಜನರಿಗೆ ಹಂಚಿಕೆಯಾಗದ ₹5,000 ಕೋಟಿ ಮೌಲ್ಯದ ಆಸ್ತಿ ಪತ್ತೆ'

author img

By

Published : Aug 10, 2022, 5:13 PM IST

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜನರಿಗೆ ಹಂಚಿಕೆಯಾಗದೆ ಉಳಿದ 13 ಸಾವಿರ ನಿವೇಶನಗಳು ಮತ್ತು 200 ಎಕರೆಗೂ ಹೆಚ್ಚಿನ ಭೂಮಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಸಚಿವ ಭೈರತಿ ಬಸವರಾಜ್​ ಮಾಹಿತಿ ನೀಡಿದ್ದಾರೆ.

ಭೈರತಿ ಬಸವರಾಜ್
ಭೈರತಿ ಬಸವರಾಜ್

ಬೆಂಗಳೂರು: ಜನರಿಗೆ ಹಂಚಿಕೆಯಾಗದೆ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉಳಿದುಕೊಂಡಿದ್ದ 5,000 ಕೋಟಿ ರೂ ಮೌಲ್ಯದ ಬಹು ದೊಡ್ಡ ಆಸ್ತಿಯನ್ನು ಸರ್ಕಾರ ಪತ್ತೆ ಹಚ್ಚಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜನರಿಗೆ ಹಂಚಿಕೆಯಾಗದೆ ಉಳಿದ 13 ಸಾವಿರ ನಿವೇಶನಗಳು ಮತ್ತು 200 ಎಕರೆಗೂ ಹೆಚ್ಚಿನ ಭೂಮಿಯನ್ನು ಪತ್ತೆ ಹಚ್ಚಲಾಗಿದ್ದು, ಉಳಿದ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದೆ ಉಳಿದಿರುವ ಆಸ್ತಿಯ ವಿವರ ಪಡೆಯುವುದಾಗಿ ಹೇಳಿದರು.

ಮೈಸೂರು ಮಹಾನಗರದ ವ್ಯಾಪ್ತಿಯಲ್ಲಿ ಮೂಡಾ ಹಲವಾರು ಬಡಾವಣೆಗಳನ್ನು ನಿರ್ಮಿಸಿದ್ದು, ಹಲವು ಕಾರಣಗಳಿಂದ ತನ್ನ ವಶದಲ್ಲಿರುವ ನಿವೇಶನಗಳ ವಿವರ ಮರೆತಿತ್ತು. ಆದರೆ, ಈಗ ಅಂತಹ ನಿವೇಶನ ಮತ್ತು ಭೂಮಿಯ ವಿವರವನ್ನು ತರಿಸಿಕೊಂಡಿದ್ದು ಇವತ್ತಿನ ಮಾರುಕಟ್ಟೆಯಲ್ಲಿ ಅದರ ಮೌಲ್ಯ 5 ಸಾವಿರ ಕೋಟಿ ರೂ. ಗಳಷ್ಟಾಗುತ್ತದೆ. ಇಷ್ಟು ದೊಡ್ಡ ಹಣವನ್ನು ಬಳಸಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು. ಆದರೆ, ಮೂಡಾದ ವ್ಯಾಪ್ತಿಯಲ್ಲಿ ಸಿಕ್ಕ ಆಸ್ತಿಯನ್ನು ಹಲವು ಕಾರ್ಯಗಳಿಗೆ ಬಳಸಲು ನಿರ್ಧರಿಸಲಾಗಿದೆ ಎಂದರು.

ಮೈಸೂರಿನಲ್ಲಿ ಬಡವರಿಗಾಗಿ ಗುಂಪು ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಬಯಸಿದ್ದು, ಇದೇ ರೀತಿ ಹಲವು ನಿವೇಶನಗಳನ್ನು ಮಾರಾಟ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಯೋಚಿಸಲಾಗಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳ ಆರ್ಥಿಕತೆಯನ್ನು ಬಲಪಡಿಸಿ ಜನರಿಗೆ ನಿವೇಶನಗಳನ್ನು ವಿತರಿಸಲು ಯೋಜಿಸಲಾಗಿದ್ದು ಹಾಸನದಲ್ಲಿ 1,200 ಎಕರೆ, ಬಳ್ಳಾರಿಯಲ್ಲಿ 120 ಎಕರೆ, ದಾವಣಗೆರೆಯಲ್ಲಿ 57 ಎಕರೆ ಸೇರಿದಂತೆ ಹಲವು ಕಡೆ ಭೂಮಿ ಖರೀದಿಸಲಾಗಿದೆ ಎಂದು ಹೇಳಿದರು.

ಹಲವು ಕಾಲದಿಂದ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡುವ ಕಾರ್ಯ ನಡೆದಿಲ್ಲ. ಆದರೆ, ಇನ್ನು ಮುಂದೆ ಸಣ್ಣ ಮಟ್ಟದಲ್ಲಾದರೂ ಭೂಮಿಯನ್ನು ಅಭಿವೃದ್ಧಿಪಡಿಸಿ ಜನರಿಗೆ ಹಂಚಿಕೆ ಮಾಡುವುದು ಸರ್ಕಾರದ ಯೋಚನೆಯಾಗಿದೆ ಎಂದ ಸಚಿವರು, ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಆರ್ಥಿಕವಾಗಿ ಸಧೃಡಗೊಳಿಸಿ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ.ಆದರೆ, ಹಲವು ಕಡೆ ರೈತರು ಭೂಮಿ ಕೊಡಲು ಮುಂದೆ ಬರುತ್ತಿಲ್ಲ.ರೈತರು ಭೂಮಿ ಕೊಡದೆ ನಾವೂ ನಿವೇಶನಗಳನ್ನು ಅಭಿವೃದ್ದಿ ಮಾಡುವುದು ಕಷ್ಟ ಎಂದು ತಿಳಿಸಿದರು.

ಅಕ್ರಮ ಮನೆಗಳ ಸಕ್ರಮಕ್ಕೆ ಕ್ಷಣಗಣನೆ: 40+ 60 ಅಳತೆಯ ನಿವೇಶನಗಳವರೆಗೆ ಜನ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಬೇಕು ಎಂಬ ವಾದವಿದೆಯಾದರೂ, ಒಂದೇ ಸಲಕ್ಕೆ ಅಕ್ರಮ ಕಟ್ಟಡಗಳೆಲ್ಲವನ್ನೂ ಸಕ್ರಮಗೊಳಿಸುವುದು ಸೂಕ್ತ ಎಂಬ ಭಾವನೆಯೂ ಇದೆ. ಹೀಗಾಗಿ ಅಕ್ರಮ ಮನೆಗಳ ಸಕ್ರಮ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ತಿಳಿಸಿದರು.

ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಳೆಯಿಂದ ಏನೇ ಹಾನಿಯಾದರೂ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.‌ ರಾಜ್ಯದಲ್ಲಿ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಕಾರ್ಯ ಪ್ರಗತಿಪಥದಲ್ಲಿದ್ದು, ಈ ಕೆಲಸವನ್ನು ತ್ವರಿತಗತಿಯಲ್ಲಿ ಫೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಕೇಂದ್ರದ ನೆರವಿನ ಯೋಜನೆಯೂ ಜಾರಿಯಾದರೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ : ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?: ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.