ಬೆಂಗಳೂರು: ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಥಾಯ್ಲೆಂಡ್ ಜತೆ ಸಹಭಾಗಿತ್ವದ ಉಪಕ್ರಮಗಳ ಮೂಲಕ ಸಹಕಾರ ಸ್ಥಾಪನೆಗೆ ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಕಾಸಸೌಧದಲ್ಲಿ ಇಂದು ತಮ್ಮನ್ನು ಭೇಟಿಯಾದ ಥಾಯ್ಲೆಂಡ್ ದೇಶದ ಭಾರತೀಯ ಕಾನ್ಸುಲ್ ಜನರಲ್ ನಿಟಿರೂಜ್ ಫೋನ್ ಪ್ರಸೆರ್ಟ್ ನೇತೃತ್ವದ ನಿಯೋಗದೊಂದಿಗೆ ಅವರು ವಿಚಾರ ವಿನಿಮಯ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಥಾಯ್ಲೆಂಡ್ ದೇಶವು ಶಿಕ್ಷಣ, ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಕರ್ನಾಟಕದ ನೆರವನ್ನು ಕೋರಿದೆ. ತಮ್ಮಲ್ಲಿಗೆ ಬಂದು ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗಳನ್ನು ತೆರೆಯುವಂತೆಯೂ ಅದು ಕೋರಿದೆ. ಇದಕ್ಕೆ ನಾವು ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ ಎಂದರು. ಆ ರಾಷ್ಟವು ಪ್ರವಾಸೋದ್ಯಮ ಚಟುವಟಿಕೆಗಳನ್ನು ಅವಲಂಬಿಸಿದೆ. ಹೀಗಾಗಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೇಕಿರುವ ತಂತ್ರಜ್ಞಾನದ ನೆರವು ನೀಡಲು ಕೂಡ ತಾವು ಸಿದ್ದ ಎಂದು ಅವರು ತಿಳಿಸಿದರು.
ಐಟಿ, ಬಿಟಿ ತಂತ್ರಜ್ಞಾನಗಳನ್ನು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಪ್ರಗತಿಗೆ ದುಡಿಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿರುವ ಈ ಕಂಪನಿಗಳ ಪೈಕಿ ಆಸಕ್ತ ಕಂಪನಿಗಳು ಥಾಯ್ಲೆಂಡಿನಲ್ಲೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿ, ಆ ದೇಶಕ್ಕೆ ನೆರವು ನೀಡುವ ಬಗ್ಗೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಅವರು ನುಡಿದರು.
ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಬಾಂಧವ್ಯ ವರ್ಧಿಸಿಕೊಳ್ಳಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಶಯವಾಗಿದೆ. ಇದಕ್ಕೆ ತಕ್ಕಂತೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಉಪಸ್ಥಿತರಿದ್ದರು.
ಓದಿ: ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ: ಚುನಾವಣಾ ಅಜೆಂಡಾ ಸೆಟ್ ಮಾಡ್ತಾರಾ ಬಿಜೆಪಿ ಚಾಣಕ್ಯ!