ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: ಅಗ್ನಿಯ ಕೆನ್ನಾಲಿಗೆಗೆ ತಾಯಿ-ಮಗಳು ಸಜೀವ ದಹನ

author img

By

Published : Sep 21, 2021, 7:48 PM IST

Updated : Sep 21, 2021, 10:00 PM IST

two burns in a apartment fire accident

ಬೆಂಗಳೂರು ನಗರದ ದೇವರಚಿಕ್ಕನಹಳ್ಳಿಯ ಅಪಾರ್ಟ್​ಮೆಂಟ್‌ ಒಂದರಲ್ಲಿ ಇಂದು ಸಂಜೆ ಭಾರಿ ಬೆಂಕಿ ಅವಘಡ ಸಂಭವಿಸಿತು. ಪರಿಣಾಮ ಒಂದು ಫ್ಲ್ಯಾಟ್​ ಸಂಪೂರ್ಣ ಹೊತ್ತಿ ಉರಿದಿದೆ. ಅಷ್ಟೇ ಅಲ್ಲ, ತಾಯಿ ಮತ್ತು ಮಗಳು ಬೆಂಕಿಯ ಕೆನ್ನಾಲಿಗೆಯಿಂದ ಹೊರಬರಲಾಗದೆ ಜೀವ ಉಳಿಸಿಕೊಳ್ಳಲು ಸಾಕಷ್ಟು ಹೋರಾಡುತ್ತಲೇ ಸಜೀವವಾಗಿ ಸಾವಿಗೆ ಶರಣಾದರು. ದುರ್ಘಟನೆಯ ದೃಶ್ಯಗಳು ಮನಕಲಕುವಂತಿತ್ತು.

ಬೆಂಗಳೂರು: ನಗರದ ದೇವರಚಿಕ್ಕನಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಇವತ್ತು ಸಂಜೆ ಭೀಕರ ಬೆಂಕಿ ಅವಘಡ ಸಂಭವಿಸಿತು. ಗ್ಯಾಸ್‌ ಸೋರಿಕೆಯಾದ ಕಾರಣ ಉಂಟಾಗಿದೆ ಎನ್ನಲಾದ ಸ್ಫೋಟದಿಂದ ಇಡೀ ಅಪಾರ್ಟ್‌ಮೆಂಟ್‌ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಯ ರುದ್ರ ನರ್ತನಕ್ಕೆ ಅಲ್ಲಿ ಇಬ್ಬರು ತಾಯಿ ಮತ್ತು ಮಗಳು ಸಜೀವ ದಹನವಾದರು.

ಕಬ್ಬಿಣದ ಗ್ರಿಲ್‌ನಿಂದ ಹೊರಬರಲಾಗದೆ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ:

ಈ ದುರ್ಘಟನೆ ಅತ್ಯಂತ ಮನಕಲಕುವ ದೃಶ್ಯಕ್ಕೂ ಸಾಕ್ಷಿಯಾಯಿತು. ಕಣ್ಣೆದುರಿಗೇ ಅಗಾಧ ಬೆಂಕಿಯ ಜ್ವಾಲೆಯ ರೂಪದಲ್ಲಿ ಯಮನೇ ಪ್ರತ್ಯಕ್ಷವಾದ ಸನ್ನಿವೇಶ ಅಲ್ಲಿತ್ತು. ಎದುರಿಗೆ ಬೆಂಕಿಯ ರುದ್ರನರ್ತನ.. ತಾನು ನಿಂತಿರುವ ಬೆನ್ನ ಹಿಂದೆ ಕಬ್ಬಿಣದ ಗ್ರಿಲ್‌.. ಇದರ ನಡುವೆ ಸಿಕ್ಕಿ ಹಾಕಿಕೊಂಡು ಜೀವನ್ಮರಣದ ನಡುವೆ ನರಳಾಡಿದ ಮಹಿಳೆಗೆ ತಾನು ಸಾವಿನಿಂದ ಪಾರಾಗುವ ಯಾವುದೇ ಮಾರ್ಗ ಅಲ್ಲಿ ಕಾಣಲಿಲ್ಲ. ಅಸಹಾಯಕ ಮಹಿಳೆಯ ಮೇಲೆ ಅಗ್ನಿಯೂ ಕರುಣೆ ತೋರಲಿಲ್ಲ. ನೋಡು ನೋಡುತ್ತಿದ್ದಂತೆ ಮಹಿಳೆ ಬೆಂಕಿಯಲ್ಲಿ ನರಳಿ ಪ್ರಾಣ ಕಳೆದುಕೊಂಡರು.

ಇಬ್ಬರು ಮಹಿಳೆಯರನ್ನು ಬಲಿ ಪಡೆದ ಅಗ್ನಿ ಅವಘಡ

ಇಬ್ಬರು ಮಹಿಳೆಯರು ಬಲಿ:

ಇಲ್ಲಿನ 'ಆಶ್ರಿತ ಆಸ್ಪೈರ್' ನಲ್ಲಿ ಸಂಜೆ 4.35ರಿಂದ 4.40ರ ಸುಮಾರಿಗೆ ಗ್ಯಾಸ್‌ ಸೋರಿಕೆಯಾಗಿ ಸ್ಫೋಟ ಉಂಟಾಗಿದೆ. ಪರಿಣಾಮ, ಫ್ಲ್ಯಾಟ್ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆಗೆ ಮನೆಯಲ್ಲಿದ್ದ ಮಗಳು ಭಾಗ್ಯ ರೇಖಾ (59) ಹಾಗೂ‌ ಅವರ ತಾಯಿ ಲಕ್ಷ್ಮೀದೇವಿ (82) ಇಬ್ಬರೂ ಹೊರಬರಲಾಗದೇ ಅಗ್ನಿಗೆ ಆಹುತಿಯಾದರು. ಈ ದುರ್ಘಟನೆಯಲ್ಲಿ ಐವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

two burns in a apartment fire accident
ಹೊತ್ತಿ ಉರಿದ ಅಪಾರ್ಟ್​ಮೆಂಟ್​

ವಿಷಯ ತಿಳಿದು ಘಟನಾ ಸ್ಥಳಕ್ಕೆ ಮೂರು ವಾಹನಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬಂದು ಬೆಂಕಿ ನಂದಿಸಿದರು. ಬೇಗೂರು ಪೊಲೀಸರು ಕೂಡಾ ಸ್ಥಳದಲ್ಲಿದ್ದರು. ಅಪಾರ್ಟ್​ಮೆಂಟ್​ನಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಫ್ಲ್ಯಾಟ್‌ನಲ್ಲಿ ಸಿಲುಕಿರುವವರನ್ನು ರಕ್ಷಿಸಲು ಹರಸಾಹಸವೇ ನಡೆಯಿತು.

two burns in a apartment fire accident
ತಾನು ನಿಂತಿರುವ ಹಿಂಭಾಗ ಕಬ್ಬಿಣದ ಗ್ರಿಲ್‌, ಕಣ್ಣೆದುರು ಬೆಂಕಿಯ ಕೆನ್ನಾಲಿಗೆ- ಚಿಂತಾಜನಕ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡು ನರಳಿ ಪ್ರಾಣಬಿಟ್ಟ ಮಹಿಳೆ

ಮೂರು ಅಪಾರ್ಟ್​​ಮೆಂಟ್ ಪ್ಲ್ಯಾಟ್​​ಗಳಿಗೂ ವಿಸ್ತರಿಸಿದ ಬೆಂಕಿ:

ಅಗ್ನಿಯ ಜ್ವಾಲೆ ಇತರೆ ಮೂರು ಫ್ಲ್ಯಾಟ್​ಗಳಿಗೂ ವಿಸ್ತರಿಸಿದೆ. ಇದರಿಂದ ಆತಂಕಕೊಂಡ ನಿವಾಸಿಗಳು ಕೂಡಲೇ ಹೊರಬಂದಿದ್ದರಿಂದ ಸಂಭವಿಸುತ್ತಿದ್ದ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ದುರ್ಘಟನೆಯಿಂದಾಗಿ ಇಡೀ‌ ಅಪಾರ್ಟ್​​ಮೆಂಟ್​​ಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ‌. ಈ ದುರಂತದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಕ್ಷಿಣ ವಲಯದ ಜಂಟಿ ಆಯುಕ್ತ ರಾಮಕೃಷ್ಣ ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ಜೋಷಿ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸುತ್ತಿದ್ದಾರೆ.

two burns in a apartment fire accident
ಅಗ್ನಿ ಅವಘಡಕ್ಕೆ ತುತ್ತಾದ ನತದೃಷ್ಟ ಅಪಾರ್ಟ್‌ಮೆಂಟ್‌

ದುರಂತ ನಡೆದ ಫ್ಲ್ಯಾಟ್‌ನಲ್ಲಿ ಯಾರಿದ್ದರು?

ದುರಂತ ಸಂಭವಿಸಿದ ಫ್ಯ್ಲಾಟ್​​ನಲ್ಲಿ ಐವರು ವಾಸ ಮಾಡುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಈ ಪೈಕಿ ಮಹಿಳೆ ಸೇರಿ ಇಬ್ಬರು ಸಜೀವ ದಹನವಾದರೆ, ಇನ್ನುಳಿದ ಮೂವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ‌. ಅಗ್ನಿ‌ಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ವೃದ್ಧೆಯು ಮನೆಯ ಬಾಲ್ಕನಿ ಕಡೆ ಓಡಿಬಂದಿದ್ದಾರೆ. ಆದ್ರೆ ನೋಡು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡಿದ್ದು ಅವರು ಹೊರ ಬರಲಾಗದೆ ಸಜೀವವಾಗಿ ಸಾವಿಗೆ ಶರಣಾದರು.

ಅಗ್ನಿಶಾಮಕ ದಳ ಡಿಜಿಪಿ & ಡಿಜಿ ಹೇಳಿದ್ದೇನು?

two burns in a apartment fire accident
ದುರಂತಕ್ಕೀಡಾದ 'ಆಶ್ರಿತ ಆಸ್ಪೈರ್' ಅಪಾರ್ಟ್‌ಮೆಂಟ್‌

'ಸಂಜೆ 4.35 ರಿಂದ 4:40ರ ಸುಮಾರಿಗೆ ದುರಂತ ಸಂಭವಿಸಿತು. ಮಾಹಿತಿ ಆಧರಿಸಿ 4:55 ರ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ನಡೆಸಿದರು. ಒಂದು ಫ್ಯ್ಲಾಟ್​​ನಲ್ಲಿ‌ ಮಾತ್ರ ಬೆಂಕಿ ಆವರಿಸಿಕೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಅಗ್ನಿ ದುರಂತಕ್ಕೆ ಗ್ಯಾಸ್​ ಸೋರಿಕೆಯಾಗಿದ್ದು​ ಕಾರಣವಾಗಿದೆ'.

- ಡಿಜಿಪಿ & ಡಿಜಿ ಅಗ್ನಿಶಾಮಕ ವಿಭಾಗ, ಕರ್ನಾಟಕ

Last Updated :Sep 21, 2021, 10:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.