ಬೆಂಗಳೂರು: ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ ಆದಿತ್ಯ ರಾವ್. ಎಂಜಿನಿಯರಿಂಗ್ ಪದವಿ ಪಡೆದು ಏರ್ ಪೋರ್ಟ್ನಲ್ಲಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ. ಕೆಲಸ ಸಿಗದೆ ಕುಗ್ಗಿ ಹೋಗಿದ್ದ. ಆದಿತ್ಯ ತಂದೆ ನಿವೃತ್ತ ಬ್ಯಾಂಕ್ ಮಾನೇಜರ್ ಆಗಿದ್ದು, ಆತನ ತಾಯಿ ಕೆಲ ದಿನಗಳ ಹಿಂದೆಯಷ್ಟೇ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು.
ಅಂದರ್ ಆಗಿದ್ದ:
ಕೆಲ ವರ್ಷಗಳಿಂದ ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದ ಆರೋಪಿ, ವಿಧಾನ ಸೌಧ ಸುತ್ತ ಮುತ್ತ ಬಾಂಬ್ ಇಡುವುದಾಗಿ ಬೆದರಿಸಿ, ನಂತರ ಅಂದರ್ ಆಗಿದ್ದ. ಬೆಂಗಳೂರು ಏರ್ಪೋರ್ಟ್ಗೆ ಬಾಂಬ್ ಇಡಲೂ ಯತ್ನಿಸಿದ್ದ ಎನ್ನಲಾಗಿದೆ.
ಬಿಳಿ ಬಣ್ಣದ ಪೌಡರ್ ಖರೀದಿಸಿದ್ದ:
ಆನ್ ಲೈನ್ ನಲ್ಲಿ ಬಿಳಿ ಬಣ್ಣದ ಪೌಡರ್ ಖರೀದಿ ಮಾಡಿ, 10 ದಿನಗಳ ಹಿಂದೆ ಮಂಗಳೂರಿನ ಕುಡ್ಲ ರೆಸ್ಟೋರೆಂಟ್ನಲ್ಲಿ ಕೆಲಸಕ್ಕೆ ಸೇರಿದ್ದನು. ಅಲ್ಲಿ ಬಿಲ್ಲಿಂಗ್ ಕಾರ್ಯದ ತರಬೇತಿ ಪಡೆಯುತ್ತಿದ್ದ. ಚಿಲಿಂಬಿಯ ಕೆನರಾ ಬ್ಯಾಂಕ್ನ ಹಿಲ್ಸೈಡ್ ಅಪಾರ್ಟ್ಮೆಂರ್ಟ್ನಲ್ಲಿ ತಂಗಿದ್ದ. ತಿಂಗಳ ಸಂಬಳ ಪಡೆದ ಬಳಿಕ ಆತ ಕೆಲಸಕ್ಕೆ ಹೋಗಿರಲಿಲ್ಲ. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ವರ್ತನೆ ಸಹಜವಾಗಿರಲಿಲ್ಲ ಎಂದು ತಿಳಿದು ಬಂದಿದೆ. ಮಂಗಳೂರು ಪೊಲೀಸರು ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು ಬಜ್ಪೆ ವಿಮಾನದ ಬಳಿ ಬಾಂಬ್ ಪತ್ತೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸದ್ಯ ಡಿಜಿ ನೀಲಮಣಿ ರಾಜು ಸೂಚನೆಯಂತೆ ಸಿಸಿಬಿ ಹಾಗೂ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿ ತಪ್ಪೊಪ್ಪಿಕೊಂಡ ಹಿನ್ನೆಲೆ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.
ಅಜ್ಞಾತ ಸ್ಥಳಕ್ಕೆ ಶಿಫ್ಟ್:
ಆರೋಪಿ ಆದಿತ್ಯ ರಾವ್ ವೈದ್ಯಕೀಯ ತಪಾಸಣೆಯನ್ನು ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಆರೋಪಿಯ ಆರೋಗ್ಯ ತಪಾಸಣೆ ಮುಕ್ತಾಯವಾದ ಕಾರಣ, ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಆರೋಪಿಯನ್ನ ಪೊಲೀಸರು ಅಜ್ಞಾತ ಸ್ಥಳಕ್ಕೆ ಶಿಫ್ಟ್ ಮಾಡಲಿದ್ದಾರೆ.
ಇಂದು ನ್ಯಾಯಾಲಯಕ್ಕೆ ಆರೋಪಿ ಹಾಜರು:
ಪೊಲೀಸ್ ವಿಚಾರಣೆ ಮುಗಿದ ಬಳಿಕ ಇಂದು ಸಂಜೆ ಆರೋಪಿ ಆದಿತ್ಯ ರಾವ್ನನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ. ನಂತರ ಆರೋಪಿಯನ್ನು ಮತ್ತೆ ವಶಕ್ಕೆ ಪಡೆಯಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.