ETV Bharat / state

ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆಗೆ ಒಪ್ಪಿಗೆ ಸಿಕ್ಕಿದೆ: ಸಚಿವ ಎಂ.ಬಿ.ಪಾಟೀಲ್

author img

By

Published : Jun 13, 2023, 9:17 PM IST

ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆಗೆ ಕೇಂದ್ರ ವಿಮಾನಯಾನ‌ ನಿರ್ದೇಶನಾಲಯ ಒಪ್ಪಿಗೆ ನೀಡಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Etv Bharat
Etv Bharat

ಬೆಂಗಳೂರು : ರಾಜ್ಯದಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಗಳ ವೈಮಾನಿಕ ಸೇವೆ ಮತ್ತು ನಿರ್ವಹಣೆಯನ್ನು ಭಾರಿ ಕೈಗಾರಿಕಾ ಇಲಾಖೆಯಡಿ ಬರುವ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ತೆಗೆದುಕೊಳ್ಳುವ ಕುರಿತು ಗಂಭೀರವಾಗಿ ಆಲೋಚಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಸದ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣವು ಕಾರ್ಯಾಚರಣೆಗೆ ಸಿದ್ಧವಾಗಿದೆ. ಇದರ ನಿರ್ವಹಣೆಗೆ ಕೇಂದ್ರ ವಿಮಾನಯಾನ‌ ನಿರ್ದೇಶನಾಲಯ ಒಪ್ಪಿಗೆ ನೀಡಿದೆ. ಅದೇ ರೀತಿ ನಿರ್ಮಾಣ ಹಂತದಲ್ಲಿ ಇರುವ ವಿಜಯಪುರ ಮತ್ತು ಹಾಸನ ವಿಮಾನ ನಿಲ್ದಾಣಗಳನ್ನೂ ಕಾರ್ಯಾಚರಣೆ ಮಾಡುವ ಉದ್ದೇಶ ಇದೆ. ರಾಜ್ಯದಲ್ಲಿ ಇನ್ನು‌ ಮುಂದಿನ ದಿನಗಳಲ್ಲಿ ನಿರ್ಮಿಸುವ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುವುದು ಒಳ್ಳೆಯದು. ಇದರಿಂದ ನಮಗೆ ಆರ್ಥಿಕವಾಗಿ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕೊನೆಪಕ್ಷ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಿಸಿದರೆ ಆಗುವ ಲಾಭ-ನಷ್ಟಗಳನ್ನು ಕುರಿತು ಚರ್ಚಿಸಲಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಕಲಬುರಗಿಯಲ್ಲಿ ರಾಜ್ಯ ಸರ್ಕಾರವು 1,000 ಕೋಟಿ ರೂ. ಖರ್ಚು ಮಾಡಿ ವಿಮಾನ ನಿಲ್ದಾಣ ನಿರ್ಮಿಸಿದೆ. ಆದರೆ, ಅದನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಬಿಟ್ಟು ಕೊಟ್ಟಿದ್ದೇವೆ. ಇದರ ಬದಲು ನಾವೇ ನಿರ್ವಹಣೆಯನ್ನು ಹೊತ್ತುಕೊಂಡರೆ ಅದರಿಂದ ಪ್ರಯೋಜನವಾಗಲಿದೆ. ಇಂತಹ ಚಿಂತನೆ ಈಗ ದೇಶದ ಹಲವು ರಾಜ್ಯಗಳಲ್ಲಿ ಮುನ್ನೆಲೆಗೆ ಬಂದಿದೆ. ಇದರಿಂದ ಸ್ಥಳೀಯವಾಗಿ ಹೆಚ್ಚು ಲಾಭವಿದೆ ಎಂದು ಅವರು ಹೇಳಿದರು.

ಚಾಣಕ್ಯ ವಿವಿಗೆ ನೀಡಿರುವ ಭೂಮಿ ಹಿಂಪಡೆಯುವ ವಿಚಾರ : ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಹಿಂದಿನ ಬಿಜೆಪಿ ಸರಕಾರ ಮಂಜೂರು ಮಾಡಿರುವ ಭೂಮಿಯನ್ನು ವಾಪಸ್‌ ಪಡೆಯುವ ವಿಚಾರ ಸದ್ಯಕ್ಕೆ ನಮ್ಮ ಮುಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸುತ್ತಾರೆ. ಆದರೆ, ಹಿಂದಿನ ಅವಧಿಯಲ್ಲಿ ಭೂಮಿ ಹಂಚಿಕೆಯಲ್ಲಿ ಎಲ್ಲೆಲ್ಲೆ ದುರ್ಬಳಕೆ ಆಗಿದೆಯೋ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಆಗಿರುವ ಭೂಮಿ ಹಂಚಿಕೆಯನ್ನು ಪ್ರತಿಯೊಂದು ಕಡೆಯೂ ಪರಿಶೀಲಿಸುತ್ತೇವೆ ಎಂದು ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ : ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ.. ಸಚಿವ ಎಂ ಬಿ ಪಾಟೀಲ್​ - ಶಾಸಕ ಯತ್ನಾಳ್​ ಮಧ್ಯೆ ಟ್ವೀಟ್ ವಾರ್​ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.