ETV Bharat / state

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ.. ಪಾದಚಾರಿ ಸಾವು..

author img

By

Published : Feb 14, 2023, 4:20 PM IST

Updated : Feb 14, 2023, 4:52 PM IST

ಬಿಎಂಟಿಸಿ ಬಸ್​ ಡಿಕ್ಕಿಯಾದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೆಡಿಎಸ್​ ಕಚೇರಿ ಎದುರು ನಡೆದಿದೆ.

ಬೆಂಗಳೂರು
ಬೆಂಗಳೂರು

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿರುವ ಘಟನೆ ಜೆಡಿಎಸ್ ಕಚೇರಿ ಎದುರು ನಡೆದಿದೆ. KA 57 F4762 ನಂಬರಿನ ಬಸ್ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಹರಿದಿದೆ. ಮೃತನ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ, ಚಾಲಕ ಮಹಾಂತ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಸಾಲ ಮರಳಿ ಕೇಳಿದ್ದಕ್ಕೆ ಫೈನಾನ್ಶಿಯರ್ ಹತ್ಯೆಗೈದಿದ್ದ ಆರೋಪಿಗಳ ಬಂಧನ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಫೈನಾನ್ಶಿಯರ್ ಗೆ ಚಾಕು ಇರಿದು ಹತ್ಯೆ ಮಾಡಿದ್ದ ಆರೋಪಿಗಳನ್ನ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಹಾಗೂ ಕವೀಶ್ ಬಂಧಿತ ಆರೋಪಿಗಳು ಎಂಬುದು ತಿಳಿದು ಬಂದಿದೆ. ಫೆಬ್ರವರಿ 7ರಂದು ರಾತ್ರಿ ಬಾಣಸವಾಡಿ ಠಾಣಾ ವ್ಯಾಪ್ತಿಯ ಚಿಕ್ಕ ಬಾಣಸವಾಡಿ ಬಳಿ ಶೇಖರ್ (29) ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಹಣ ಮರಳಿ ಕೊಡದಿರುವುದಾಗಿ ಶೇಖರ್​ ಬಳಿ ಮನೋಜ್ ಗಲಾಟೆ:​​ ಬಾಣಸವಾಡಿ ಸುತ್ತಮುತ್ತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಶೇಖರ್ ಈ ಹಿಂದೆ ಮನೋಜ್​ಗೆ 90 ಸಾವಿರ ರೂ ಸಾಲ ನೀಡಿದ್ದ. ಫೆಬ್ರವರಿ 7ರಂದು ಕುಡಿದ ಅಮಲಿನಲ್ಲಿದ್ದ ಶೇಖರ್, ಮನೋಜ್​ಗೆ ಅವಾಚ್ಯವಾಗಿ ನಿಂದಿಸಿ ಕೊಟ್ಟ ಹಣ ವಾಪಸ್ ಕೊಡುವಂತೆ ಶೇಖರ್ ಕೇಳಿದ್ದ. ಆಗ ಸಿಟ್ಟಿಗೆದ್ದು ಸ್ನೇಹಿತ ಕವೀಶ್ ಜೊತೆ ಬಂದಿದ್ದ ಮನೋಜ್ 'ಸಾಲ ವಾಪಸ್ ಕೊಡಲ್ಲ, ಏನ್ ಮಾಡ್ಕೊತಿಯೋ ಮಾಡ್ಕೋ' ಎಂದು ಶೇಖರ್ ಬಳಿ ಗಲಾಟೆ ಆರಂಭಿಸಿದ್ದ.

ಇದನ್ನೂ ಓದಿ : ಮಂಡ್ಯದಲ್ಲಿ ಸಾರ್ವಜನಿಕರ ಬಳಿ ಹಣ ವಸೂಲಿ ಮಾಡ್ತಿದ್ದ ನಕಲಿ ಪೊಲೀಸ್ ಬಂಧನ

ಶೇಖರ್ ಹೊಟ್ಟೆಯ ಭಾಗಕ್ಕೆ ಚಾಕು ಇರಿತ: ಈ ವೇಳೆ, ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದಾಗ ಮನೋಜ್ ಹಾಗೂ ಆತನ ಸ್ನೇಹಿತ ಕವೀಶ್ ಶೇಖರ್​​​ನ ಹೊಟ್ಟೆ ಭಾಗಕ್ಕೆ ಮೂರ್ನಾಲ್ಕು ಕಡೆಗಳಲ್ಲಿ ಚಾಕು ಇರಿದಿದ್ದರು. ತೀವ್ರ ರಕ್ತಸ್ರಾವದಿಂದ ಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಠಾಣಾ ಪೊಲೀಸರು ಆರೋಪಿ ಮನೋಜ್ ಹಾಗೂ ಆತನ ಸ್ನೇಹಿತ ಕವೀಶ್ ನನ್ನ ಬಂಧಿಸಿದ್ದಾರೆ.

ಯುವಕ ಆತ್ಮಹತ್ಯೆ: ಮತ್ತೊಂದೆಡೆ ಮಾನಸಿಕ ಸಮಸ್ಯೆಯಿಂದ ಬಳಲುತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಚಿರ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ವಿದ್ಯಾರಣ್ಯಪುರದ ಎನ್​ಟಿಐ ಜಂಕ್ಷನ್​ ಬಳಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.

ಮೃತನ ತಂದೆ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದು ಕಳೆದ ಒಂದೂವರೆ ವರ್ಷದಿಂದ ಸುಚಿರ್, ತಾಯಿ ಜೊತೆ ಬೆಂಗಳೂರಿನಲ್ಲಿ ವಾಸಿಸುತಿದ್ದನು. ಎಂಎಸ್ ರಾಮಯ್ಯ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತಿದ್ದ ಯುವಕ, ಇತ್ತೀಚಿಗೆ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಎಂದು ತಿಳಿದು ಬಂದಿದೆ.

ಯುವಕ ಸುಚಿರ್ ಇದಕ್ಕೂ ಮುನ್ನ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಸದ್ಯ ಆತನ ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿದ್ಯಾರಣ್ಯಪುರ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಪರಿಚಿತನನ್ನೇ ಹತ್ಯೆಗೈದಿದ್ದ ಆರೋಪಿ ಬಂಧನ: ಇನ್ನೊಂದು ಪ್ರಕರಣದಲ್ಲಿ ಕುಡಿದ ಅಮಲಿನಲ್ಲಿ ಪರಿಚಿತನನ್ನೇ ಹತ್ಯೆಗೈದಿದ್ದ ಆರೋಪಿಯನ್ನು ವರ್ತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್ ಬಂಧಿತ ಆರೋಪಿ ಎಂಬುದು ತಿಳಿದು ಬಂದಿದೆ. ಫೆಬ್ರವರಿ 11ರ ರಾತ್ರಿ ವರ್ತೂರು ಠಾಣಾ ವ್ಯಾಪ್ತಿಯ ಹಲಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಎಸ್ಎಸ್ಎಸ್ ಬಾರ್​​ನಲ್ಲಿ ಮುನಿಯಪ್ಪ (45) ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು.

ಆರೋಪಿ ಶ್ರೀಧರ್ ಮತ್ತು ಮೃತ ಮುನಿಯಪ್ಪ ಇಬ್ಬರೂ ಒಂದೇ ಏರಿಯಾದಲ್ಲಿ ವಾಸವಿದ್ದವರು. ಘಟನೆಯ ದಿನ ರಾತ್ರಿ ಬಾರ್​​ನಲ್ಲಿ ಮದ್ಯಪಾನ ಮಾಡಿದ ನಂತರ ಇಬ್ಬರೂ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಶ್ರೀಧರ್, ಮುನಿಯಪ್ಪನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಪರಿಣಾಮ ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಘಟನೆ ಸಂಬಂಧ ವರ್ತೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಓದಿ : ಬೆಂಗಳೂರು: ಮದ್ಯದ ಅಮಲಿನಲ್ಲಿ ಪರಿಚಿತನನ್ನು ಹತ್ಯೆಗೈದಿದ್ದ ಆರೋಪಿಯ ಬಂಧನ

Last Updated : Feb 14, 2023, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.