ETV Bharat / state

ಹೆಂಡತಿ ಗಂಡನ ಲೈಂಗಿಕ ಗುಲಾಮಳಲ್ಲ: 2022ರಲ್ಲಿ ಕೌಟುಂಬಿಕ ಕೇಸ್​ಗಳ ಕುರಿತು ಹೈಕೋರ್ಟ್​ ನೀಡಿದ ಆದೇಶಗಳಿವು!

author img

By

Published : Dec 31, 2022, 7:25 AM IST

ಗಂಡ ನಪುಂಸಕನೆಂದು ನಿರಾಧಾರ ಆರೋಪ ಮಾಡಿದರೂ ಕ್ರೌರ್ಯ ಹಾಗೂ ಪತ್ನಿ ಗಂಡನ ಲೈಂಗಿಕ ಗುಲಾಮಳಲ್ಲ ಎಂಬ ಮಹತ್ವದ ಆದೇಶ ಸೇರಿದಂತೆ 2022ರಲ್ಲಿ ಕೌಟುಂಬಿಕ ಕೇಸ್​ಗಳ ಕುರಿತು ಹೈಕೋರ್ಟ್​ ನೀಡಿದ ತೀರ್ಪುಗಳ ಮಾಹಿತಿ ಇಲ್ಲಿದೆ.

high court
ಹೈಕೋರ್ಟ್​

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಕೌಟುಂಬಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್​ನಿಂದ ಹಲವು ಮಹತ್ವದ ಆದೇಶಗಳು ಹೊರಬಿದ್ದಿವೆ. ಹೆಂಡತಿ ಗಂಡನ ಲೈಂಗಿಕ ಗುಲಾಮಳಲ್ಲ, ಪ್ರತ್ಯೇಕ ಕಾಯ್ದೆಯಡಿ ಮಹಿಳೆ ಜೀವನಾಂಶಕ್ಕೆ ಅರ್ಹಳು, ಗಂಡ ನಪುಂಸಕ ಎಂದು ನಿರಾಧಾರ ಆರೋಪ ಮಾಡಿದ್ರೆ ಅದೂ ಕೂಡ ಕ್ರೌರ್ಯಕ್ಕೆ ಸಮಾನ ಸೇರಿದಂತೆ ಹಲವು ಆದೇಶಗಳ ಮಾಹಿತಿ ಈ ಕೆಳಗಿನಂತಿದೆ.

ವಿವಾಹವಾದ 2 ತಿಂಗಳಲ್ಲಿ ಬೇರ್ಪಟ್ಟು 21 ವರ್ಷಕ್ಕೆ ವಿಚ್ಛೇಧನ: ಮದುವೆಯಾದ ಎರಡೇ ತಿಂಗಳಿಗೆ ಬೇರ್ಪಟ್ಟು 21 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದು, ಕಾನೂನು ಹೋರಾಟ ನಡೆಸುತ್ತಿದ್ದ ದಂಪತಿಗೆ ಹೈಕೋರ್ಟ್​ನಿಂದ ವಿಚ್ಛೇದನ ಮಂಜೂರು ಮಾಡಲಾಗಿದೆ. 21 ವರ್ಷಗಳ ಕಾಲ ಪ್ರತ್ಯೇಕವಾಗಿದ್ದರೂ ಕೂಡ ಒಂದಾಗಿಲ್ಲ. ಸದ್ಯಕ್ಕೆ ದಂಪತಿಗೆ 56 ವರ್ಷ ವಯಸ್ಸಾಗಿದ್ದು,ಇಂತಹ ಸಂಬಂಧ ಒಟ್ಟುಗೂಡಿಸುವುದರಲ್ಲಿ ಅರ್ಥವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಪತ್ನಿ ಗಂಡನ ಲೈಂಗಿಕ ಗುಲಾಮಳಲ್ಲ: ಹೆಂಡತಿಯಾದವಳು ಗಂಡನ ಲೈಂಗಿಕ ಗುಲಾಮಗಳಲ್ಲ. ಪತ್ನಿಯೊಂದಿಗೆ ಪತಿ ನಡೆಸುವ ಬಲವಂತದ ಸಂಭೋಗವೂ ಅತ್ಯಾಚಾರವೆಂದು ಪರಿಗಣಿಸಬೇಕಾಗುತ್ತದೆ. ಮ್ಯಾರಿಟಲ್ ರೇಪ್ (ವೈವಾಹಿಕ ಅತ್ಯಾಚಾರ) ಪ್ರಕರಣಗಳಲ್ಲಿ ಪತಿಗೆ ನೀಡುವ ವಿನಾಯಿತಿ ರದ್ದುಪಡಿಸುವ ಬಗ್ಗೆ ಶಾಸಕಾಂಗ ಚಿಂತನೆ ನಡೆಸುವುದು ಸೂಕ್ತ ಎಂದು ಹೈಕೋರ್ಟ್ ತಿಳಿಸಿದೆ.

ಇದನ್ನೂ ಓದಿ: ಪತ್ನಿ ಮೇಲೆ ಪತಿ ಸಂಶಯ: ಮೂರನೇ ವ್ಯಕ್ತಿಯ ಫೋನ್ ಸಂಭಾಷಣೆ ಬಹಿರಂಗ ಸಾಧ್ಯವಿಲ್ಲ- ಹೈ ಕೋರ್ಟ್

ಗಂಡ ನಪುಂಸಕನೆಂದು ನಿರಾಧಾರ ಆರೋಪ ಮಾಡಿದರೂ ಕ್ರೌರ್ಯ: ಲೈಂಗಿಕ ಕ್ರಿಯೆ ನಡೆಸಲು ಪತಿ ಅಸಮರ್ಥನಾಗಿದ್ದಾನೆಂದು ಪತ್ನಿ ನಿರಾಧಾರ ಆರೋಪ ಮಾಡುವಂತಿಲ್ಲ. ಹಾಗಾದಲ್ಲಿ ಅದು ಕ್ರೌರ್ಯಕ್ಕೆ ಸಮವಾಗಿರಲಿದೆ. ಅದರ ಆಧಾರದಲ್ಲಿ ಪತಿ ವಿವಾಹ ವಿಚ್ಛೇದನ ಕೋರಬಹುದು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

ಇದನ್ನೂ ಓದಿ; ವಿಚ್ಛೇದಿತ ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಹೈಕೋರ್ಟ್​ ಆದೇಶ​

ದುಡಿಯಲು ಸಾಮರ್ಥ್ಯವಿರುವ ಪತಿಗೆ ಜೀವನಾಂಶ ಕೊಡಬೇಕಿಲ್ಲ: ದುಡಿಯುವುದಕ್ಕೆ ಸಾಮರ್ಥ್ಯವಿರುವ ಸಶಕ್ತ ಪುರುಷ ತನ್ನ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳಲು ಅವಕಾಶವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪತ್ನಿಯಿಂದ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ಸಶಕ್ತ ಪತಿಗೆ ಪತ್ನಿಯಿಂದ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಆದ್ರೆ, ಎರಡು ಪ್ರತ್ಯೇಕ ಕಾಯ್ದೆಗಳಡಿ ಜೀವನಾಂಶ ಪಡೆಯಲು ಪತ್ನಿಗೆ ಅವಕಾಶವಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಮತ್ತು ಹಿಂದೂ ವಿವಾಹ ಕಾಯ್ದೆಯಡಿ ಪತಿಯಿಂದ ಜೀವನಾಂಶ ಪಡೆಯಲು ವಿಚ್ಛೇದಿತ ಪತ್ನಿ ಅರ್ಹಳು ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಪ್ರತ್ಯೇಕ ಕಾಯ್ದೆಗಳ ಅಡಿ ನೀಡಲಾಗುವ ಮೊತ್ತ ಒಂದನ್ನೊಂದು ಅತಿಕ್ರಮಿಸುವಂತಿಬಾರದು ಎಂದು ಸ್ಪಷ್ಟ ಪಡಿಸಿತ್ತು.

ಇದನ್ನೂ ಓದಿ: ಕ್ರಿಮಿನಲ್​ ಪ್ರಕರಣ: ಜನವರಿ 2022 ರಿಂದ ಈವರೆಗೆ ಹೈಕೋರ್ಟ್​ ನೀಡಿದ ಮಹತ್ವದ ಆದೇಶಗಳಿವು

ಮೋಟಾರು ವಾಹನ ಕಾಯ್ದೆಯಡಿ ಪ್ರಕರಣಗಳು: ಅಕ್ರಮ ಸಂಬಂಧದ ಮಗುವಾದರೂ ಅಪಘಾತ ವಿಮೆ ಪಡೆಯಲು ಅರ್ಹರು. ವಿವಾಹೇತರ ಸಂಬಂಧದಿಂದ ಜನಿಸಿದ ಮಗುವಿಗೂ ಅಪಘಾತ ಪ್ರಕರಣಗಳಲ್ಲಿ ಪರಿಹಾರ ಪಡೆದುಕೊಳ್ಳಬಹುದು ಎಂದು ಹೈಕೋರ್ಟ್ ತಿಳಿಸಿದೆ. ಅಕ್ರಮ ಸಂಬಂಧದಿಂದ ಜನ್ಮ ನೀಡಲು ಕಾರಣನಾದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166ರ ಅಡಿ ಆ ಮಗು ಮೃತರ ಕಾನೂನಾತ್ಮಕ ಪ್ರತಿನಿಧಿಯಾಗಲಿದೆ. ಅದು ವಿಮಾ ಕಂಪನಿ ನೀಡುವ ಪರಿಹಾರ ಪಡೆಯಲು ಅರ್ಹತೆ ಹೊಂದಿರುತ್ತದೆ ಎಂದು ಹೈಕೋರ್ಟ್ ಆದೇಶಿಸಿತ್ತು.

ಇದನ್ನೂ ಓದಿ; ವಾಹನ ನೋಂದಣಿ ಪ್ರಮಾಣಪತ್ರ: ಸ್ಮಾರ್ಟ್ ಕಾರ್ಡ್ ವಿತರಣೆ ಆದೇಶ ತೆರವು ಕೋರಿ ಸಾರಿಗೆ ಇಲಾಖೆ ಅರ್ಜಿ

ವಿಮೆ ಇಲ್ಲವೆಂಬ ಕಾರಣಕ್ಕೆ ವಾಹನ ಬಿಡುಗಡೆಗೆ ನಿರಾಕರಿಸುವಂತಿಲ್ಲ: ಅಪಘಾತ ಪ್ರಕರಣಗಳಲ್ಲಿ ಭಾಗಿಯಾದ ವಾಹನಗಳಿಗೆ ವಿಮೆ ಮಾಡಿಸಿಲ್ಲ ಎಂಬ ಕಾರಣ ನೀಡಿ ಆ ವಾಹನಗಳನ್ನು ಮಾಲೀಕರಿಗೆ ಬಿಡುಗಡೆ ಮಾಡಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್​ ಅಭಿಪ್ರಾಯ ಪಟ್ಟಿದೆ. ಕರ್ನಾಟಕ ಮೋಟಾರು ವಾಹನ ಅಧಿನಿಯಮದ 232ಜಿ ಪ್ರಕಾರ, ವಿಚಾರಣಾ ನ್ಯಾಯಾಲಯ ಅಗತ್ಯ ಷರತ್ತುಗಳನ್ನು ವಿಧಿಸಿ ವಾಹನ ಬಿಡುಗಡೆ ಮಾಡಬೇಕು. ಈ ಬಗ್ಗೆ ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.