ETV Bharat / state

ತಹಶೀಲ್ದಾರ್ ಅಜಿತ್ ರೈ ಸಹೋದರ ಸೇರಿ ನಾಲ್ವರು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್

author img

By

Published : Jun 29, 2023, 10:10 PM IST

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜಿತ್ ರೈ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಇವರ ಸಹೋದರ ಸೇರಿ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

lokayuktha-police-issued-notice-to-ajith-rais-brother-and-four-others-in-allegation-of-illegal-property-gain
ತಹಶೀಲ್ದಾರ್ ಅಜಿತ್ ರೈ ಸಹೋದರ ಸೇರಿ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಕೆ.ಆರ್.ಪುರ ತಹಶೀಲ್ದಾರ್ ಅಜಿತ್ ರೈ ಅವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು ನಾಳೆ ಬೆಳಗ್ಗೆ 11 ಗಂಟೆಯೊಳಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲು ಸಿದ್ದತೆ ನಡೆಸುತ್ತಿದ್ದಾರೆ.

ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆಪಾದನೆ ಹಿನ್ನೆಲೆಯಲ್ಲಿ ಸಹಕಾರ ನಗರದಲ್ಲಿರುವ ನಿವಾಸ ಸೇರಿದಂತೆ 12 ಕಡೆಗಳಲ್ಲಿ ದಾಳಿ ನಡೆಸಿದಾಗ 40 ಲಕ್ಷ ರೂಪಾಯಿ ನಗದು, ಕೋಟ್ಯಂತರ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್ ಮದ್ಯಗಳು ಪತ್ತೆಯಾಗಿದ್ದವು. ಸತತ 30 ಗಂಟೆ ಶೋಧ ಮುಕ್ತಾಯ ಬಳಿಕ ಮಹಜರು ಮಾಡಿದ ಸ್ಥಿರಾಸ್ತಿ-ಚರಾಸ್ತಿ ಪರಿಶೀಲಿಸಿದಾಗ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಜಿತ್ ರೈ ಅವರನ್ನು ಅಧಿಕಾರಿಗಳು ಬಂಧಿಸಿದ್ದರು. ನಾಳೆ ಬೆಳಗ್ಗೆ 11 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಅಜಿತ್ ಅವರನ್ನು ಪೊಲೀಸ್ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.

ನಾಲ್ವರಿಗೆ ನೋಟಿಸ್ ಜಾರಿ : ದಾಳಿ ವೇಳೆ ಪತ್ತೆಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಪತ್ರಗಳು ಬೇನಾಮಿಗಳ ಹೆಸರಿನಲ್ಲಿ ಇರುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದರು. ಅಜಿತ್ ಸಹೋದರ ಆಶಿಕ್ ರೈ, ಸ್ನೇಹಿತ ಗೌರವ್, ಹರ್ಷವರ್ಧನ್, ನವೀನ್ ಹಾಗೂ ಅಜಿತ್ ಸಹೋದರನಿಗೆ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು ನಾಳೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಅಶೋಕ್ ಮಾಹಿತಿ ನೀಡಿದ್ದಾರೆ.

ಫಾರ್ಚೂನರ್, ಲ್ಯಾಂಡ್ ಕ್ರೂಸರ್, ಥಾರ್ ಸೇರಿದಂತೆ ಇತರೆ ವಾಹನಗಳು ಬಹುತೇಕ ಹರ್ಷವರ್ಧನ್ ಹಾಗೂ ನವೀನ್ ಅವರ ಹೆಸರಿನಲ್ಲಿ ಇರುವುದು ಕಂಡುಬಂದಿದೆ. ಸರ್ಚ್ ವಾರೆಂಟ್ ಮೇರೆಗೆ ಮತ್ತೋರ್ವ ಬೇನಾಮಿಯಾಗಿರುವ ಸಿ.ಕೃಷ್ಣಪ್ಪ ನಾಪತ್ತೆಯಾಗಿದ್ದು ಆತನಿಗೆ ಇನ್ನಷ್ಟೇ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಬೇಕಿದೆ. ನೋಟಿಸ್ ನೀಡಲಾಗಿರುವ ಬೇನಾಮಿಗಳೆಲ್ಲರೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದವರು. ಹಲವು ವರ್ಷಗಳಿಂದ ಇವರ ನಡುವೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿರುವುದು ಮಾಹಿತಿ ಲಭ್ಯವಾಗಿದ್ದು, ಕೂಲಂಕಷವಾಗಿ ಪರಿಶೀಲಿಸಿದ ಬಳಿಕವಷ್ಟೇ ಖಚಿತವಾಗಿ ಎಷ್ಟೆಷ್ಟು ಎಲ್ಲಿ ಹಣ ವರ್ಗಾವಣೆಯಾಗಿದೆ ಎಂಬುವುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್. ಪುರದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್ ಅವರನ್ನು ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್​ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ‌ ಆರೋಪದಡಿ ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಬಳಿಕ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ ಆರ್ ಪುರ ತಹಶೀಲ್ದಾರ್ ಆಗಿ ಅಜಿತ್ ಬಂದಿದ್ದರು.‌‌‌ ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ರೈ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ : Lokayukta Raid: ಕೆ ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ಲೋಕಾಯುಕ್ತ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.