ETV Bharat / state

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ

author img

By

Published : Apr 24, 2023, 9:16 AM IST

Updated : Apr 24, 2023, 12:10 PM IST

ನಿವೃತ್ತ ಡಿಎಫ್​ಓ​ ಹಾಗೂ ಹೊಳಲ್ಕೆರೆ ತಹಶೀಲ್ದಾರರಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ದಾಳಿ
ಲೋಕಾಯುಕ್ತ ದಾಳಿ

ಬೆಂಗಳೂರು: ಚುನಾವಣೆಗೂ ಮುನ್ನ ಬೆಂಗಳೂರಿನ ಕೆಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಪ್ರಮುಖವಾಗಿ ಯಲಹಂಕದಲ್ಲಿರುವ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯರ ಯಲಹಂಕ, ಮಹಾಲಕ್ಷ್ಮಿ ಲೇಔಟ್​ನ ನಿವಾಸಗಳಲ್ಲಿ ಲೋಕಾಯುಕ್ತ ಪರಿಶೀಲನೆ ನಡೆಸಲಾಗುತ್ತಿದೆ. ಲೋಕಾಯುಕ್ತ ಎಸ್ಪಿ ಅಶೋಕ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಗಂಗಾಧರಯ್ಯರ ಮನೆಯಲ್ಲಿ ಬೆಳ್ಳಿ, ಬಂಗಾರ, ಸೀರೆ, ಆಸ್ತಿ ಪತ್ರಗಳು, ಫಾರಿನ್ ಕರೆನ್ಸಿ ಪತ್ತೆಯಾಗಿದೆ. ಅಂದಾಜು 2 ಕೋಟಿಗೂ ಅಧಿಕ ಮೌಲ್ಯದ ಸಂಪತ್ತು ಪತ್ತೆಯಾಗಿದ್ದು, ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಚುನಾವಣೆಯ ಕಾರ್ಯಕ್ಕೂ ಸಹ ನೇಮಕವಾಗಿದ್ದ ಗಂಗಾಧರಯ್ಯರ ಕಾರಿನ ಮೇಲೆ ಬ್ಯಾಟರಾಯನಪುರ ವಿಧಾನಸಭಾ‌ ಕ್ಷೇತ್ರದ ಸ್ಟಿಕ್ಕರ್ ಸಹ ಪತ್ತೆಯಾಗಿದೆ. ಸದ್ಯ ಹಣದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಗಂಗಾಧರಯ್ಯ ಸಂಪತ್ತಿನ ವಿವರ: ಯಲಹಂಕ, ಜೆ.ಸಿ.ನಗರ, ಹೆಬ್ಬಾಳದಲ್ಲಿ ಫ್ಲ್ಯಾಟ್​ಗಳ ಸಹಿತ 12 ಮನೆಗಳು, ನೆಲಮಂಗಲದಲ್ಲಿ 1.5 ಕೋಟಿ ಮೌಲ್ಯದ 5 ಎಕರೆ ಜಮೀನು, ಮಲ್ಲೇಶ್ವರಂನಲ್ಲಿ 3.65 ಕೋಟಿ ಮೌಲ್ಯದ ನಿವೇಶನ, 1 ಕೋಟಿ ಮೌಲ್ಯದ ವಜ್ರ, ಚಿನ್ನಾಭರಣಗಳು ಹಾಗೂ 1.40 ಕೋಟಿ ರೂ ನಗದು ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿದೆ.

ನಗದು ಸಹಿತ ಚಿನ್ನಾಭರಣ ಪತ್ತೆ
ನಗದು ಸಹಿತ ಚಿನ್ನಾಭರಣ ಪತ್ತೆ

ದಾವಣಗೆರೆ ಮತ್ತು ಶಿವಮೊಗ್ಗದಲ್ಲಿಯೂ ದಾಳಿ: ಕಳೆದ ಒಂದು ವಾರದ ಹಿಂದಷ್ಟೆ ಬಿಜೆಪಿ ಸೇರ್ಪಡೆಗೊಂಡಿದ್ದ ನಿವೃತ್ತ ಐಎಫ್ಎಸ್ ಅಧಿಕಾರಿ ಮನೆ ಹಾಗೂ ಇತರಡೆ ಕೂಡ ಲೋಕಾಯುಕ್ತ ದಾಳಿ ನಡೆಸಿದೆ. ಶಿವಮೊಗ್ಗ ವನ್ಯಜೀವಿ ವಿಭಾಗದ ನಿವೃತ್ತ ಡಿಎಫ್ಒ ಐ‌.ಎಂ.ನಾಗರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. 2022ರ ಡಿಸಂಬರ್ 31 ರಂದು ತಮ್ಮ ಹುದ್ದೆಯಿಂದ ನಾಗರಾಜದ ನಿವೃತ್ತರಾಗಿದ್ದರು. ಇವರ ಮೇಲೆ ಅಕ್ರಮ ಆಸ್ತಿ ಗಳಿಕೆ ದೂರು ಕೇಳಿ ಬಂದ ಕಾರಣ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆ, ಲಗಾನ್ ಮಂದಿರದ ಹಿಂಭಾಗದ ವಿಸ್ಮಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ ಸಾಗರ ರಸ್ತೆಯ ಪೆಟ್ರೋಲ್ ಬಂಕ್‌ ಸೇ‌ರಿದಂತೆ ದಾವಣಗೆರೆ ಜಿಲ್ಲೆ ಹೂನ್ನಾಳಿಯಲ್ಲೂ ಸಹ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಹಲವು ಮಹತ್ವ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಇನ್ನೂ ಈ ಹಿಂದೆ ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ, ಹಾಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕರೆ ತಹಶೀಲ್ದಾರ್ ಆಗಿರುವ ನಾಗರಾಜ್ ಅವರ ಮನೆ ಮೇಲೆಯೂ ಲೋಕಾಯುಕ್ತ ದಾಳಿಯಾಗಿದೆ. ಅವರ ಸಂಬಂಧಿಕರ ಮನೆ ಶಿಕಾರಿಪುರದ ಚನ್ನಕೇಶವ ನಗರದಲ್ಲಿ ಈ ದಾಳಿ ನಡೆಸಲಾಗಿದೆ. ಒಂದೆಡೆ ಚಿತ್ರದುರ್ಗ ಲೋಕಾಯುಕ್ತರಾದ ವಸಂತ ಕುಮಾರ ನೇತೃತ್ವದಲ್ಲಿ 7 ಕಡೆ ದಾಳಿ ನಡೆದರೆ, ಮತ್ತೊಂದೆಡೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿಯಿಂದ ದಾಳಿ ನಡೆದಿದೆ.

ಬಳ್ಳಾರಿ: ಜೆಸ್ಕಾಂ ಎಇಇ ಆಗಿರುವ ಹುಸೇನ್ ಸಾಬ್ ಅವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ ಬೆಂಗಳೂರು ಮತ್ತು ಬಳ್ಳಾರಿಯ ಲೋಕಾಯುಕ್ತ ತಂಡಗಳು ಬಳ್ಳಾರಿ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿ, ರಾಘವೇಂದ್ರ ಕಾಲೋನಿಯಲ್ಲಿರುವ ಮನೆ ಮತ್ತು ಹುಟ್ಟೂರು ಶಿಡಿಗಿನಮೊಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಏಕಕಾಲಕ್ಕೆ ದಾಳಿ 6 ಕಡೆ ದಾಳಿ: ಬೀದರ್ ಜಿಲ್ಲೆಯಾದ್ಯಂತ ಏಕಕಾಲಕ್ಕೆ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಡಬಿ ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿ ಅವರ ಆನಂದ್ ನಗರ ಹಾಗೂ ಬಸವಕಲ್ಯಾಣ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಈ ದಾಳಿ ನಡೆದಿದೆ. ಅವರು ಕಾರ್ಯನಿರ್ವಹಿಸುವ ಕಚೇರಿ ಹಾಗೂ ಬಸವಕಲ್ಯಾಣ ಪಟ್ಟಣದ ಹೊಂದಿರುವ ಗ್ಯಾರೇಜ್ ಮೇಲೂ ದಾಳಿ ನಡೆಸಲಾಗಿದೆ.

ಇನ್ನು ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಸುರೇಶ್ ಮೇದಾ ಅವರ ಗುರು ನಗರದ ನಿವಾಸ ಹಾಗೂ ನೌಬಾದ್‍ನಲ್ಲಿರುವ ಕಚೇರಿ ಮೇಲೆಯೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಎ.ಆರ್ ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ ಓಲೇಕಾರ್ ನೇತೃತ್ವದಲ್ಲಿ ಜಿಲ್ಲಾದ್ಯಂತ ದಾಳಿ ನಡೆದಿದೆ.

ಬೆಳ್ತಂಗಡಿಯಲ್ಲಿ ಐಟಿ ದಾಳಿ: ಕಾಂಗ್ರೆಸ್ ಪಕ್ಷದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷರು ಆಗಿರುವ ಗಂಗಾಧರ ಗೌಡ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆ ಸೇರಿದಂತೆ ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿದಲ್ಲಿರುವ ಪ್ರಸನ್ನ ಶಿಕ್ಷಣ ಸಂಸ್ಥೆ, ಇಂದಬೆಟ್ಟುವಿನಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಇನೋವಾ ಕಾರಿನಲ್ಲಿ ಪೊಲೀಸರ ಜೊತೆ ಬಂದ ಐಟಿ ಅಧಿಕಾರಿಗಳು, ಸದ್ಯ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬೆಳ್ತಂಗಡಿಯಲ್ಲಿ ಐಟಿ ದಾಳಿ
ಬೆಳ್ತಂಗಡಿಯಲ್ಲಿ ಐಟಿ ದಾಳಿ

ಕೋಲಾರ: ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ (EO) ಎನ್.ವೆಂಕಟೇಶಪ್ಪ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಮೂರು ಕಡೆ ಹಾಗೂ ಮುಳಬಾಗಿಲು ತಾಲೂಕು ತಿಪ್ಪದೊಡ್ಡಿಯಲ್ಲಿ ಎರಡು ಕಡೆ ಸೇರಿದಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಅವರಿಗೆ ಸೇರಿದ ಒಟ್ಟು ಐದು ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಇನ್ನೂ ಕಳೆದ ಎಂಟು ವರ್ಷಗಳಿಂದ ಬಂಗಾರಪೇಟೆಯಲ್ಲಿ ಇಓ ಆಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶಪ್ಪ ಕಳೆದ ಎರಡು ದಿನದ ಹಿಂದಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ವರ್ಗಾವಣೆಗೊಂಡಿದ್ದರು.

ಇದನ್ನೂ ಓದಿ: ಫೋನ್ ಪೇನಲ್ಲಿ ಲಂಚ ಪಡೆದ ಪಿಎಸ್​ಐ, ಪೊಲೀಸ್​ ಕಾನಸ್ಟೇಬಲ್ ಲೋಕಾಯುಕ್ತ ಬಲೆಗೆ

Last Updated :Apr 24, 2023, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.