ETV Bharat / state

ಭದ್ರಾವತಿಯ ಉಕ್ಕಿನ ಕಾರ್ಖಾನೆ ಮುಚ್ಚದಂತೆ ಪ್ರಧಾನಿ ಮೋದಿಗೆ ದೇವೇಗೌಡರಿಂದ ಪತ್ರ

author img

By

Published : Jan 22, 2023, 2:50 PM IST

ಉಕ್ಕು ಸ್ಥಾವರ ಮುಚ್ಚುವ ಪ್ರಕ್ರಿಯೆ ಕೈಬಿಡಿ - ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ - ಭದ್ರಾವತಿಯ ಉಕ್ಕಿನ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೆಚ್​ ಡಿ ದೇವೇಗೌಡ ಮನವಿ

Former Prime Minister HD Deve Gowda and Prime Minister Narendra Modi
ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು : ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (VISL)ನ್ನು ಮುಚ್ಚುವ ಪ್ರಕ್ರಿಯೆಯನ್ನು ಕೈ ಬಿಡುವಂತೆ ಕೋರಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧವಾಗಿ ಸುದೀರ್ಘ ಪತ್ರ ಬರೆದಿರುವ ಮಾಜಿ ಪ್ರಧಾನಿ ದೇವೇಗೌಡ, VISL ಸ್ಥಾವರವನ್ನು ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಅವರು ಆರಂಭಿಸಿದ್ದರು. ನಾನು ಪ್ರಧಾನಿಯಾಗಿದ್ದಾಗ 1996ರಲ್ಲಿ VISLನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಜೊತೆ ವಿಲೀನಗೊಳಿಸಲು ಕ್ರಮ ಕೈಗೊಂಡಿದ್ದೆ. 650 ಕೋಟಿ ರೂ. ಹೂಡಿಕೆಯೊಂದಿಗೆ VISLನ ಆಧುನೀಕರಣಕ್ಕಾಗಿ ಆಡಳಿತಾತ್ಮಕ ನೆರವಿನೊಂದಿಗೆ ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಉದ್ದೇಶದೊಂದಿಗೆ ವಿಲೀನ ಮಾಡುವ ಮುಂದಾಗಿದ್ದೆನು. ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ.

2016ರಲ್ಲಿ ಸಂಸ್ಥೆ ಕೆಲ ಅಡೆತಡೆಗಳನ್ನು ಎದುರಿಸಿದ ಕಾರಣ ನೀತಿ ಆಯೋಗ ಖಾಸಗೀಕರಣಕ್ಕೆ ಶಿಫಾರಸು ಮಾಡಿತ್ತು. ಆದರೆ ಖಾಸಗಿ ಹೂಡಿಕೆದಾರರು ಒಲವು ತೋರದ ಕಾರಣ ಖಾಸಗೀಕರಣದ ನಿರ್ಧಾರವನ್ನು ಕೈ ಬಿಟ್ಟಿತ್ತು. 2000ರ ಈಚೆಗೆ VISL ಬಂಡವಾಳ ಹಿಂತೆಗೆತ, ಖಾಸಗೀಕರಣ, ಪಾಲುದಾರಿಕೆ ಮುಂತಾದ ಹಲವು ಸವಾಲುಗಳನ್ನು ಎದುರಿಸಿತು. ಆದರೆ ಯಾವುದೇ ಫಲಶೃತಿ ನೀಡಲಿಲ್ಲ. ಇದು ಈ ಭಾಗದ ಜನರ ಹಾಗೂ ನೌಕರ ವರ್ಗದವರ ಆತ್ಮಬಲದ ಮೇಲೆ ಪರಿಣಾಮ ಬೀರಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.

ಈ ಕಾರ್ಖಾನೆ 700 ಗ್ರೇಡ್ ಗೂ ಅಧಿಕ ವಿಶೇಷ ಉಕ್ಕು ಹಾಗೂ ಮಿಶ್ರಲೋಹ ಉತ್ಪಾದಿಸುವ ಸಾಮರ್ಥಡ ಹೊಂದಿದೆ. ಹೀಗಾಗಿ ಹೆಚ್ಚಿಬ ಬಂಡವಾಳ ಹೂಡುವ ಮೂಲಕ ಈ ಸಂಸ್ಥೆಯ ಪುನಶ್ಚೇತನ ಅತ್ಯಗತ್ಯವಾಗಿದೆ. ಬಳ್ಳಾರಿ ಜಿಲ್ಲೆಯ ರಾಮನದುರ್ಗ ಪ್ರದೇಶದಲ್ಲಿ ಕರ್ನಾಟಕ ಸರ್ಕಾರ VISL ಸಂಸ್ಥೆಗೆ 150 ಎಕರೆ ಕಬ್ಬಿಣದ ಅದಿರು ಗಣಿಗಾರಿಕೆ ಪ್ರದೇಶವನ್ನು ಹಂಚಿಕೆ ಮಾಡಿದೆ. ಗಣಿಗಾರಿಕೆ ಆರಂಭಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 2024ರಲ್ಲಿ ಗಣಿಗಾರಿಕೆ ಆರಂಭವಾಗುವ ನಿರೀಕ್ಷೆ ಇದೆ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗತ ನೀತಿಯಡಿ ಭದ್ರಾವತಿಯ VSIL ಸ್ಥಾವರವನ್ನು ಮುಚ್ಚುವ ಪ್ರಕ್ರಿಯೆಯನ್ನು SAIL ಪ್ರಾರಂಭಿಸಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. ಕರ್ನಾಟಕದ ಭದ್ರಾವತಿಯಲ್ಲಿ ಈ ಬೃಹತ್ ಸಾರ್ವಜನಿಕ ವಲಯದ ಉಕ್ಕಿನ ಕೈಗಾರಿಕೆ ಇದ್ದು, ಇದು ಒಂದು ವೇಳೆ ಮುಚ್ಚಲ್ಪಟ್ಟರೆ, ಸುಮಾರು 20,000 ಕುಟಂಬಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನೌಕರ ವರ್ಗದ ಸಾಮರ್ಥ್ಯ ಹಾಗೂ VISLನಲ್ಲಿನ ಕೆಲಸದ ಕಾರ್ಯವೈಖರಿಯನ್ನು ನೋಡಿದರೆ, ಸಂಸ್ಥೆಯನ್ನು ಲಾಭದಾಯಕವಾಗಿ ಮಾಡಬಹುದಾಗಿದೆ. ಇದರಿಂದ ರಕ್ಷಣಾ ವಲಯ, ಪರಮಾಣು ಕ್ಷೇತ್ರ, ಆಟೋ ಮೊಬೈಲ್ ಹಾಗೂ ರೈಲ್ವೆ ಕ್ಷೇತ್ರಗಳಿಗೆ ಪೂರಕ ಉಪ ಉತ್ಪನ್ನಗಳನ್ನು ಪೂರೈಸುವ ಮೂಲಕ ಆತ್ಮನಿರ್ಭರ್ ಭಾರತಕ್ಕೆ ಹೆಚ್ಚಿನ ಕೊಡುಗೆ ನೀಡಬಹುದಾಗಿದೆ. ಹಾಗಾಗಿ ಭದ್ರಾವತಿಯ VISL ಘಟಕವನ್ನು ಮುಚ್ಚುವ ಪ್ರಸ್ತಾಪವನ್ನು ಕೈ ಬಿಟ್ಟು, ಅದರ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಕ್ಕು ಸಚಿವಾಲಯ ಹಾಗೂ SAIL ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಸಂಸತ್ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.