ETV Bharat / state

ಅತಿಕ್ರಮಿಸಿದ 16,420 ಎಕರೆ ಜಮೀನು ಸರ್ಕಾರದ ವಶಕ್ಕೆ : ಸಚಿವ ಆರ್‌ ಅಶೋಕ್

author img

By

Published : Dec 15, 2021, 7:15 PM IST

ಪ್ರಸಕ್ತ ಸಾಲಿನಲ್ಲಿ ಜುಲೈರಿಂದ ನವೆಂಬರ್​​ವರೆಗೆ ರಾಜ್ಯಾದ್ಯಂತ ಸುರಿದ ಮಳೆಯಿಂದಾಗಿ ರೂ.18,292.57 ಕೋಟಿ ಅಂದಾಜು ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ಎಸ್‍ಡಿಆರ್‌ಎಫ್/ಎನ್‍ಡಿಆರ್‌ಎಫ್​ ಮಾರ್ಗಸೂಚಿ ಅನ್ವಯ ರೂ.2,123.47 ಕೋಟಿಗಳ ಅರ್ಥಿಕ ನೆರವು ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್​​​ ವಿಧಾನಪರಿಷತ್‍ನಲ್ಲಿ ತಿಳಿಸಿದರು..

ಸಚಿವ ಆರ್‌.ಅಶೋಕ್
ಸಚಿವ ಆರ್‌.ಅಶೋಕ್

ಬೆಂಗಳೂರು : ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸರ್ಕಾರಿ ಜಮೀನನ್ನು ಖಾಸಗಿಯವರು ಅತಿಕ್ರಮಿಸಿಕೊಂಡಿದ್ದರಿಂದ ಈಗ ಎಚ್ಚೆತ್ತಿರುವ ರಾಜ್ಯ ಸರ್ಕಾರ, ತನ್ನ ಜಮೀನನ್ನು ವಶಪಡಿಸಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಮತ್ತು ಭೂಕಬಳಿ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸಹ ಸ್ಥಾಪನೆ ಮಾಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದ್ದಾರೆ.

ವಿಧಾನಪರಿಷತ್‍ನಲ್ಲಿ ಕಂದಾಯ ಸಚಿವ ಆರ್.ಅಶೋಕ್​​ ಅವರು ಡಾ.ವೈ.ಎ.ನಾರಾಯಣಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಬೆಂಗಳೂರು ನಗರ ಜಿಲ್ಲೆಯಲ್ಲಿ 14,660 ಪ್ರಕರಣಗಳಲ್ಲಿ 38,888 ಎಕರೆ ಸರಕಾರಿ ಜಮೀನನ್ನು ಖಾಸಗಿಯವರು ಅತಿಕ್ರಮಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 38,546 ಪ್ರಕರಣಗಳಲ್ಲಿ 36,229 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರಿಸಿದ ಸಚಿವ ಅಶೋಕ್​​ ಅವರು, ಅತಿಕ್ರಮಿಸಲ್ಪಟ್ಟ ಗೋಮಾಳ ಮತ್ತು ಸರ್ಕಾರಿ ಜಮೀನುಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 4,940 ಪ್ರಕರಣಗಳಲ್ಲಿ 16,420 ಎಕರೆ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 10,892 ಪ್ರಕರಣಗಳಲ್ಲಿ 11,779 ಎಕರೆ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಬೆಂಗಳೂರು ಡಿಸಿಗೆ ಪ್ರತಿ ಶನಿವಾರ ಒತ್ತುವರಿ ಪ್ರಕರಣಗಳ ಪರಿಶೀಲನೆ ಜವಾಬ್ದಾರಿ : ಸರಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಿಸಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿರುವುದನ್ನು ಹಾಗೂ ಸಮಿತಿಗಳು ಕಾರ್ಯಪ್ರವೃತ್ತರಾಗಿರುವುದನ್ನು ಸದನದ ಗಮನಕ್ಕೆ ತಂದ ಸಚಿವ ಅಶೋಕ್​​ ಅವರು, ಬೆಂಗಳೂರು ನಗರದಲ್ಲಿ ಅಪಾರ ಪ್ರಮಾಣದಲ್ಲಿ ಒತ್ತುವರಿಯಾಗಿರುವ ಸರಕಾರಿ ಜಮೀನನ್ನು ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಪ್ರತಿ ಶನಿವಾರ ಈ ಒತ್ತುವರಿ ಪ್ರಕರಣಗಳ ಪರಿಶೀಲನೆ ಮತ್ತು ವಶಕ್ಕೆ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದರು.

ರಾಜ್ಯದಲ್ಲಿ 62,72,811 ಎಕರೆ ಸರ್ಕಾರಿ ಜಮೀನು : ರಾಜ್ಯದಲ್ಲಿ ಒಟ್ಟು 62,72,811 ಎಕರೆ ಸರಕಾರಿ ಜಮೀನು ಇದೆ. ಇದರಲ್ಲಿ ಒಟ್ಟು 14,27,195 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಒಟ್ಟು 9,732 ಎಕರೆ, ಅಕ್ರಮ-ಸಕ್ರಮ ಯೋಜನೆ ಅಡಿ ಅರ್ಜಿ ಸಲ್ಲಿಸಿದ 9,97,198 ಎಕರೆ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವ 14,048 ಎಕರೆ ಸರಕಾರಿ ಜಮೀನು ಹೊರತುಪಡಿಸಿ 4,06,217 ಎಕರೆ ಒತ್ತುವರಿ ಜಮೀನು ತೆರವುಗೊಳಿಸಬೇಕಾಗಿದೆ ಎಂದು ವಿವರಿಸಿದರು. ಇದರಲ್ಲಿ 2021 ನವೆಂಬರ್ 30ರವರೆಗೆ 2,70,108 ಎಕರೆ ಸರಕಾರಿ ಜಮೀನು ತೆರವುಗೊಳಿಸಲಾಗಿದೆ. ಉಳಿದಂತೆ 1,36,109 ಎಕರೆ ಒತ್ತುವರಿ ತೆರವುಗೊಳಿಸಲು ಬಾಕಿ ಇದ್ದು, ಹಂತಹಂತವಾಗಿ ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಒತ್ತುವರಿ ಪ್ರಕರಣಗಳ ತಡೆಗೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ಥಾಪನೆ : ಒತ್ತುವರಿ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವನ್ನು ರಚಿಸಲಾಗಿದೆ ಎಂದು ಸಚಿವ ಅಶೋಕ್​​ ವಿವರಿಸಿದರು. ಒತ್ತುವರಿದಾರರ ವಿರುದ್ಧ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ 20,841 ಪ್ರಕರಣಗಳನ್ನು ದಾಖಲಿಸಲಾಗಿದ್ದು 4,712 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 16,129 ಪ್ರಕರಣಗಳು ಬಾಕಿ ಇವೆ. 61 ಜನರಿಗೆ ಒಂದು ವರ್ಷದಂತೆ ಶಿಕ್ಷೆ ವಿಧಿಸಲಾಗಿದೆ ಎಂದರು.

ಮಳೆಯಿಂದ 18,292.57 ಕೋಟಿ ರೂ.ಹಾನಿ : ಪ್ರಸಕ್ತ ಸಾಲಿನಲ್ಲಿ ಜುಲೈರಿಂದ ನವೆಂಬರ್​​ವರೆಗೆ ರಾಜ್ಯಾದ್ಯಂತ ಸುರಿದ ಮಳೆಯಿಂದಾಗಿ ರೂ.18,292.57 ಕೋಟಿ ಅಂದಾಜು ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ಎಸ್‍ಡಿಆರ್‌ಎಫ್/ಎನ್‍ಡಿಆರ್‌ಎಫ್​ ಮಾರ್ಗಸೂಚಿ ಅನ್ವಯ ರೂ.2,123.47 ಕೋಟಿಗಳ ಅರ್ಥಿಕ ನೆರವು ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್​​​ ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಹಾನಿ ಹಾಗೂ ಮೂಲಸೌಕರ್ಯಗಳ ತುರ್ತುದುರಸ್ಥಿಗಾಗಿ ಕ್ರಮಕೈಗೊಳ್ಳಲಾಗುತ್ತಿದೆ. ನಿಯಮಾನುಸಾರ ಬೆಳೆಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ ತಕ್ಷಣ ರೈತರ ಬ್ಯಾಂಕ್ ಖಾತೆಗೆ ಇನ್‍ಪುಟ್ ಸಬ್ಸಿಡಿ ಹಣ ಮಾಡಲಾಗುತ್ತಿದೆ. ಈವರೆಗೆ 6.60ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ರೂ.443.16 ಕೋಟಿ ಜಮಾ ಮಾಡಲಾಗಿದೆ ಎಂದರು. ರಾಜ್ಯಾದ್ಯಂತ ಮಳೆಯಿಂದ 39,975 ಮನೆಗಳು ಹಾನಿಯಾಗಿವೆ. ನಿಯಮಾನುಸಾರ ಪರಿಹಾರ ಒದಗಿಸಲಾಗಿದೆ ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.