ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮತ್ತು ಈ ದೇಶಕ್ಕೆ ಒಂದು ದೊಡ್ಡ ಇತಿಹಾಸ, ಚರಿತ್ರೆ ಇದೆ. ಇದನ್ನು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಯುವಕರಿಗೆ, ಎಲ್ಲಾ ವರ್ಗದ ಜನರ ಜೊತೆ ಹಂಚಿಕೊಳ್ಳುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತಿಹಾಸ ತಿರುಚುವಿಕೆಗೆ ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ನಮಗೆ ರಾಜಕಾರಣ ಮುಖ್ಯವಲ್ಲ, ದೇಶದ ಸಮಗ್ರತೆ ಮುಖ್ಯ. ದೇಶ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ದೇಶಾದ್ಯಂತ ಉದ್ಯೋಗಗಳು ಸೃಷ್ಟಿಯಾಗಬೇಕು, ಜನರಿಗೆ ನೆಮ್ಮದಿ ಸಿಗಬೇಕು ಎಂದು ಒತ್ತಾಯಿಸಿದರು.
ಅಕ್ಟೋಬರ್ 2ರಿಂದ ಪ್ರತಿಯೊಂದು ಗ್ರಾಮ ಪಂಚಾಯತ್ಗೂ ನಮ್ಮ ನಾಯಕರು ಭೇಟಿ ಕೊಡುತ್ತಾರೆ. ನಾನು ಮುಖ್ಯಮಂತ್ರಿಯಂತೆ ಭಾಷಣ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ರಾಜ್ಯದ ಜನರಿಗೆ ಏನು ಸಂದೇಶ ನೀಡಬೇಕು ಅದನ್ನು ನೀಡಿದ್ದೇನೆ ಎಂದು ಡಿಕೆಶಿ ಸ್ಪಷ್ಟನೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಾಲಿಗೆ ಹರಿಬಿಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಇಂಥ ಪವಿತ್ರವಾದ ದಿನದಂದು ಹೃದಯ ಇಲ್ಲದವರು, ಇತಿಹಾಸ ಗೊತ್ತಿಲ್ಲದವರ ಬಗ್ಗೆ ಮಾತನಾಡಲ್ಲ ಎಂದರು.