ETV Bharat / state

ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು : ಡಿಕೆಶಿ ಆಗ್ರಹ

author img

By

Published : Jan 18, 2022, 3:48 PM IST

ಮೇಕೆದಾಟು ವಿಚಾರದಲ್ಲಿ ಬಿಜೆಪಿಯ ಒಕ್ಕಲಿಗ ನಾಯಕರು ನಿಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, 'ಎಲ್ಲ ಒಕ್ಕಲಿಗ ನಾಯಕರ ಕೈಲಿ ನಮ್ಮ ವಿರುದ್ಧ ವಾಗ್ದಾಳಿ ನಡೆಸುವುದು ಬಿಜೆಪಿಯವರ ತಂತ್ರಗಾರಿಕೆ. ಅವರು ಬೇರೆ ನಾಯಕರಿಂದ ಮಾತನಾಡಿಸುವುದಿಲ್ಲ. ಮುಖ್ಯಮಂತ್ರಿಗಳು ಬೇಕಂತಲೇ ಮಾತಾಡುತ್ತಿಲ್ಲ. ಅವರ ತಂತ್ರಗಾರಿಕೆ ಅವರು ಮಾಡಲಿ' ಎಂದು ಡಿಕೆಶಿ ಉತ್ತರಿಸಿದರು..

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು : ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುತ್ತಿದೆ.

ನಮ್ಮ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಅದನ್ನು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನೀಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಮುಖ್ಯಮಂತ್ರಿಗಳ ಮನೆಗೂ ಹೋಗುತ್ತೇವೆ. ಆದರೆ, ಕಾಫಿ-ಟೀ ಕುಡಿದು ನೆಂಟಸ್ಥಿಕೆ ಮಾಡಲು ಹೋಗುವುದಿಲ್ಲ. ನಾವು ಏನು ಮಾಡುತ್ತೇವೆ ಎಂದು ಹೇಳುವುದಿಲ್ಲ.

ಆದರೆ, ನಾವು ಸುಮ್ಮನೆ ಕೂರುವುದಿಲ್ಲ. ನಾನು ಸಿದ್ದರಾಮಯ್ಯ ಅವರಿಗಾಗಿ ಕಾಯುತ್ತಿದ್ದು, ಅವರು ಮೈಸೂರಿಗೆ ಹೋಗಿದ್ದಾರೆ. ಅವರು ಬಂದ ನಂತರ ಏನು ಮಾಡುತ್ತೇವೆ ಎಂದು ಕಾದು ನೋಡಿ ಎಂದರು.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದು..

ಮೇಕೆದಾಟು ಯೋಜನೆಯಿಂದ ರೈತರಿಗೆ ನೀರು ನೀಡುತ್ತೇವೆ ಎಂಬ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ ಎಂಬ ಸಚಿವ ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಆರ್.ಅಶೋಕ್ ಅವರಷ್ಟು ಅತಿ ಬುದ್ಧಿವಂತನಲ್ಲ.

ಅವರು ಸರ್ಕಾರದ ಪ್ರತಿನಿಧಿ. ನನಗೂ ರಾಜಕೀಯ, ಕಾನೂನು ಗೊತ್ತಿದೆ. ಮೇಕೆದಾಟು ಯೋಜನೆ ಕುಡಿಯುವ ನೀರಿನ ಯೋಜನೆ. ಕೋವಿಡ್‌ನಿಂದ ವಿಶ್ರಾಂತಿ ಪಡೆಯುತ್ತಿದ್ದ ಅವರು ಇನ್ನಷ್ಟು ದಿನ ವಿಶ್ರಾಂತಿ ಪಡೆಯಲಿ ಎಂದರು.

ಕನಕಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಒಂದು ಎಕರೆ ಜಮೀನಿಗೂ ಈ ನೀರು ಬಳಕೆಯಾಗುವುದಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ.

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟಿನಲ್ಲಿ ನೀರು ತುಂಬಿದಾಗ, ತಮಿಳುನಾಡಿಗೆ ಅವರ ಪಾಲಿನ ನೀರು ಕೊಟ್ಟ ನಂತರ ಹಾಸನ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ರೈತರಿಗೆ ಅನುಕೂಲ ಆಗುತ್ತದೆ. ರೈತರಿಗೆ ಅನೂಕೂಲವಾಗದೆ ಬ್ಯಾಲೆನ್ಸಿಂಗ್ ರಿಸರ್ವಾಯರ್ ಯೋಜನೆ ಮಾಡಲು ಸಾಧ್ಯವೇ?' ಎಂದರು.

ಮೇಕೆದಾಟು ವಿಚಾರದಲ್ಲಿ ಬಿಜೆಪಿಯ ಒಕ್ಕಲಿಗ ನಾಯಕರು ನಿಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, 'ಎಲ್ಲ ಒಕ್ಕಲಿಗ ನಾಯಕರ ಕೈಲಿ ನಮ್ಮ ವಿರುದ್ಧ ವಾಗ್ದಾಳಿ ನಡೆಸುವುದು ಬಿಜೆಪಿಯವರ ತಂತ್ರಗಾರಿಕೆ. ಅವರು ಬೇರೆ ನಾಯಕರಿಂದ ಮಾತನಾಡಿಸುವುದಿಲ್ಲ. ಮುಖ್ಯಮಂತ್ರಿಗಳು ಬೇಕಂತಲೇ ಮಾತಾಡುತ್ತಿಲ್ಲ. ಅವರ ತಂತ್ರಗಾರಿಕೆ ಅವರು ಮಾಡಲಿ' ಎಂದು ಉತ್ತರಿಸಿದರು.

ಕ್ಷೇತ್ರದ ನರೇಗಾ ಕೆಲಸದ ಕ್ಯಾಲೆಂಡರ್ ಬಿಡುಗಡೆ : ಕನಕಪುರ ತಾಲೂಕಿನಲ್ಲಿ ನರೇಗಾ ಯೋಜನೆ ಅಡಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಒಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. 'ಇದರಲ್ಲಿ ನಮ್ಮ ತಾಲೂಕಿನಲ್ಲಿ ಆಗಿರುವ ಕೆಲಸಗಳ ಮಾಹಿತಿ ಇದೆ.

ಒಂದು ವರ್ಷದಲ್ಲಿ 46 ಸಾವಿರ ಕುಟುಂಬಗಳಿಗೆ ವೈಯಕ್ತಿಕವಾಗಿ ಕೆಲಸ ಮಾಡಿಕೊಟ್ಟಿದ್ದೇವೆ. ನಮಗೆ 10 ಲಕ್ಷ ಕೆಲಸ ದಿನಗಳ ಗುರಿ ಇತ್ತು. ಆದರೂ ನಾವು 30 ಲಕ್ಷ ದಿನಗಳಷ್ಟು ಕೆಲಸ ನೀಡಿದ್ದೇವೆ. ಈವರೆಗೂ 110 ಕೋಟಿ ಖರ್ಚಾಗಿದ್ದು, ಏಪ್ರಿಲ್‌ವರೆಗೂ ನಮಗೆ ಸಮಯವಿದೆ.

ಆಟದ ಮೈದಾನ, ಉದ್ಯಾನವನ, 66 ಸ್ಮಶಾನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಗಿವೆ. ಈ ಅದ್ಭುತ ಕೆಲಸ ಮಾಡಿರುವ ಗ್ರಾಮ ಪಂಚಾಯತ್‌ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆ ಸಂವಿಧಾನದಿಂದ ಸಿಕ್ಕ ಹಕ್ಕು, ವೈಯಕ್ತಿಕವಾಗಿ ನೆರವು ನೀಡುವ ಅವಕಾಶ.

ಕನಕಪುರದಲ್ಲಿ ಈ ಯೋಜನೆ ಪರಿಣಾಮಕಾರಿ ಜಾರಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ರಾಜ್ಯದ ಇತರೆ ಪಂಚಾಯತ್‌ ಸದಸ್ಯರುಗಳು ಈ ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ' ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.