ETV Bharat / state

ಕಡೆಯ ಕ್ಷಣದಲ್ಲಾದರೂ ನಾರಾಯಣಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಹುದಿತ್ತು: ಡಿಕೆಶಿ

author img

By

Published : Jan 26, 2022, 3:27 PM IST

ಕೇಂದ್ರ ಸರ್ಕಾರ ನಾರಾಯಣ ಗುರು ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡಲಿಲ್ಲ. ತಿರಸ್ಕರಿಸಿ ಬೇರೆಯವರ ಹೆಸರನ್ನ ಸೇರಿಸಿದ್ರು. ಇದು ಕೇರಳ, ನಮ್ಮ ರಾಜ್ಯದ ವಿಚಾರವಲ್ಲ. ಇದು ಮಾನವೀಯತೆಗೆ ದೊಡ್ಡ ಅಪಮಾನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಕೇಂದ್ರದ ವಿರುದ್ಧ ಹರಿಹಾಯ್ದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು: ಸಮಾಜ ಸುಧಾರಕ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕಡೆಯ ಕ್ಷಣದಲ್ಲಾದರೂ ಅವಕಾಶ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕೇಂದ್ರ ಸರ್ಕಾರದ ನಡೆ ನಿರಾಸೆಯನ್ನುಂಟು ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪರೇಡ್​​ನಲ್ಲಿ ನಾರಾಯಣಗುರು ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ಸಿಗುವ ನಿರೀಕ್ಷೆ ಕಡೆಯ ಕ್ಷಣದವರೆಗೂ ಇತ್ತು. ನಾರಾಯಣ ಗುರು ಅವರ ಸ್ತಬ್ಧಚಿತ್ರ ದಿಲ್ಲಿ ತಲುಪಿತ್ತು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಕೊನೆಯವರೆಗೂ ಅವಕಾಶ ನೀಡದೆ ದಕ್ಷಿಣ ಭಾರತದ ಪ್ರಮುಖ ಸಮಾಜ ಸುಧಾರಕನಿಗೆ ಅವಮಾನಿಸಿದೆ. ಇಂದು ಮಂಗಳೂರಿನಲ್ಲಿ ಸ್ವಾಭಿಮಾನದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

ನಾನು ಸಹ ಅಲ್ಲಿಗೆ ತೆರಳಬೇಕಿತ್ತು. ಆದರೆ ಕಡೆ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸಿದ್ದೇನೆ. ನಾನು ತೆರಳುವುದರಿಂದ ಕಾರ್ಯಕ್ರಮಕ್ಕೆ ರಾಜಕೀಯ ತಿರುವು ಸಿಗಬಹುದು. ಅಂತಹ ಕಾರ್ಯ ಆಗದಿರಲಿ ಎಂಬ ಕಾರಣಕ್ಕೆ ನಿರ್ಧಾರ ಬದಲಿಸಿದ್ದೇನೆ. ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಡಿಕೆಶಿ ಹೇಳಿದ್ರು.

ಇವತ್ತು ಹಿರಿಯರನ್ನ ಸ್ಮರಿಸಿಕೊಳ್ಳುವ ವಿಶೇಷ ದಿನ. ದಕ್ಷಿಣ ಭಾರತದಲ್ಲಿ ಎಲ್ಲ ವರ್ಗದ ಜನರಿದ್ದಾರೆ. ಎಲ್ಲ ವರ್ಗದವರಿಗೆ ಇಂದು ದುಃಖದ ದಿನ, ಸಮಾಜವನ್ನ ಒಟ್ಟು ಮಾಡಬೇಕೆಂಬ ಪ್ರಯತ್ನ ಮಾಡಿದ್ದರು. ಹಿಂದೆ ಸಮಾಜ ಸುಧಾರಕರು ಮಾಡಿದ್ದರು. ಧರ್ಮಕ್ಕೆ ಅದರದ್ದೇ ಆದ ಘನತೆಯಿದೆ. ನಾರಾಯಣ ಗುರು ನಮ್ಮ ದಕ್ಷಿಣ ಭಾರತದಲ್ಲಿ ಸುಧಾರಣೆ ತಂದವರು, ಜನರ ಭಾವನೆ, ನೋವು, ಶೋಷಣೆ ಬಗ್ಗೆ ಚಳವಳಿ ಮಾಡಿದ್ರು. ಅವರು ಜಾತಿಯ ಮೇಲೆ ನಿಲ್ಲಲಿಲ್ಲ. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರ ಕಲ್ಪನೆ ತಂದವರು. ಅದು ಮಾನವ ಜಾತಿ ಎಂದು ಹೋರಾಟ ಮಾಡಿದ್ದರು. ಅದನ್ನ ಎಲ್ಲರೂ ಒಪ್ಪಿಕೊಂಡಿದ್ದರು ಎಂದರು.

ಕೇಂದ್ರ ಸರ್ಕಾರ ನಾರಾಯಣ ಗುರು ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡಲಿಲ್ಲ. ತಿರಸ್ಕರಿಸಿ ಬೇರೆಯವರ ಹೆಸರನ್ನ ಸೇರಿಸಿದ್ರು. ಇದು ಕೇರಳ, ನಮ್ಮ ರಾಜ್ಯದ ವಿಚಾರವಲ್ಲ. ಇದು ಮಾನವೀಯತೆಗೆ ದೊಡ್ಡ ಅಪಮಾನವಾಗಿದೆ. ಎಲ್ಲರೂ ಒಂದೇ ಎಂಬುದನ್ನ ಸಾರಿದವರು ಅವರು. ಹಾಗಾಗಿ ಕೇಂದ್ರದ ನಡೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಅವರ ಹೋರಾಟವನ್ನ ನಾನು ಬೆಂಬಲಿಸುತ್ತೇನೆ. ಅವರು ಕೇವಲ ಬಿಲ್ಲವ ಸಮಾಜ ಗುರುಗಳಲ್ಲ. ಅವರು ಎಲ್ಲಾ ಧರ್ಮಗಳ ಗುರುಗಳು, ಇದರಲ್ಲಿ ರಾಜಕಾರಣ ಮಾಡಲ್ಲ. ಅವರ ತತ್ವ, ಆದರ್ಶವನ್ನು ನಾವು ಅಳವಡಿಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ರಾಜ್ಯದಲ್ಲಿದ್ದಾರೆ. ಇಬ್ಬರು ಬಿಲ್ಲವ ಸಮುದಾಯಕ್ಕೆ ಸೇರಿದ ಸಚಿವರು ರಾಜ್ಯದಲ್ಲಿದ್ದಾರೆ. ಅವರು ರಾಜೀನಾಮೆ ಕೊಡ್ತಾರೆ ಅಂದುಕೊಂಡಿದ್ದೆವು. ರಾಜೀನಾಮೆ ಕೊಟ್ಟು ಸ್ತಬ್ಧ ಚಿತ್ರ ಉಳಿಸಿಕೊಳ್ತಾರೆಂದುಕೊಂಡಿದ್ದೆವು. ಆದರೆ ಅವರು ಆ ರೀತಿ ಮಾಡಿಲ್ಲ. ನಮ್ಮ ಅವಧಿಯಲ್ಲಿ ನಾರಾಯಣ ಗುರುಗಳ ಜಯಂತಿ ಮಾಡಿದ್ದೆವು ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.

ನಟ ಪುನಿತ್ ರಾಜ್ ಕುಮಾರ್ ಗೆ ಪದ್ಮಶ್ರೀ ನೀಡುವ ವಿಚಾರ ಕುರಿತು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನೇನು ಮಾತನಾಡಿದ್ರು ಗೊತ್ತಿದೆ. ಕೊಟ್ಟ ಮಾತನ್ನ ಸರ್ಕಾರ ಉಳಿಸಿಕೊಳ್ಳಲಿಲ್ಲ ಅಷ್ಟೇ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡ್ತಿನಿ ಅಂತಿದ್ರು. ಆದ್ರೆ ಪ್ರಶಸ್ತಿ ನೀಡಿಲ್ಲ, ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಮಾತು ತಪ್ಪಿದ ಸಿಎಂ ಎಂದು ಡಿಕೆಶಿ ಲೇವಡಿ ಮಾಡಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.