ಬೆಂಗಳೂರು: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿನ ಮಹತ್ವದ ರೈಲ್ವೆ ಯೋಜನೆಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಕೇರಳ ಸಿಎಂ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಬರಮಾಡಿಕೊಂಡರು. ಮೈಸೂರುಪೇಟ ತೊಡಿಸಿ ರಾಜ್ಯದ ಸಂಸ್ಕೃತಿಯಂತೆ ಗೌರವಿಸಿ ಉಭಯ ಕುಶಲೋಪರಿ ವಿಚಾರಿಸಿದರು. ನಂತರ ಕೆಲಕಾಲ ಎರಡೂ ರಾಜ್ಯಗಳ ಯೋಜನೆಗಳ ಕುರಿತು ಮಾತುಕತೆ ನಡೆಸಿದರು.
ತಲಶ್ಶೇರಿ–ಮೈಸೂರು ಹಾಗೂ ನಿಲಂಬೂರು–ನಂಜನಗೂಡು ರೈಲ್ವೆ ಯೋಜನೆಯ ಅನುಷ್ಠಾನದ ಕುರಿತು ಉಭಯ ನಾಯಕರಿಂದ ಚರ್ಚೆ ನಡೆದಿದೆ. ತಿರುವನಂತಪುರ–ಕಾಸರಗೋಡು ಸೆಮಿ ಹೈ–ಸ್ಪೀಡ್ ರೈಲು ಮಾರ್ಗ ಹಾಗೂ ಸಿಲ್ವರ್ ಮಾರ್ಗವನ್ನು ಮಂಗಳೂರಿನವರೆಗೂ ವಿಸ್ತರಿಸುವ ಸಂಬಂಧ ಕೇರಳ ಸರ್ಕಾರದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಸಂಬಂಧ ಚರ್ಚೆ ನಡೆದಿದೆ ಎನ್ನಲಾಗಿದೆ.
ತಿರುವನಂತಪುರದಲ್ಲಿ ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ದಕ್ಷಿಣ ವಲಯದ ಸಮಿತಿ ಸಭೆ ನಡೆಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಾಗಿದೆ. ಹೀಗಾಗಿ ಇಂದು ಎರಡು ರೈಲು ಯೋಜನೆಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಳಂಬಕ್ಕೆ ಬಿಜೆಪಿಯಲ್ಲಿ ಬೇಗುದಿ: ಅಧಿವೇಶನಕ್ಕೆ ಆಕಾಂಕ್ಷಿತರು ಗೈರು, ಕಲಾಪದಲ್ಲಿ ನಿರಾಸಕ್ತಿ