ETV Bharat / state

ಇಂದಿನಿಂದ ಲೆಕ್ಕ ಪರಿಶೋಧಕರ ನೇಮಕಾತಿ ಪರೀಕ್ಷೆ: ಕಠಿಣ ಮುಂಜಾಗ್ರತಾ ಕ್ರಮ ಕೈಗೊಂಡ ಕೆಪಿಎಸ್​ಪಿ

author img

By ETV Bharat Karnataka Team

Published : Nov 4, 2023, 7:54 AM IST

KPSC recruitment: ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Karnataka recruitment
ಲೆಕ್ಕಪರಿಶೋಧಕರ ನೇಮಕಾತಿ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಅಕ್ರಮಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಡೆಯುತ್ತಿರುವ ಲೆಕ್ಕ ಪರಿಶೋಧನೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು 242 ಮತ್ತು ಕಿರಿಯ ಲೆಕ್ಕ ಸಹಾಯಕರು 67 ಹಾಗೂ ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು 47 ಮತ್ತು 53 (ಹೈ.ಕ. ವೃಂದ) ಹುದ್ದೆಗಳ ನೇಮಕಾತಿ ಸಂಬಂಧ ಕನ್ನಡ ಭಾಷೆಯನ್ನು ಅಧ್ಯಯನ ಮಾಡದ ಅಭ್ಯರ್ಥಿಗಳಿಗೆ ಇಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ. ಜೊತೆಗೆ ಭಾನುವಾರ ಸಾಮಾನ್ಯ ಪರೀಕ್ಷೆ ನಿಗದಿಯಾಗಿದೆ.

ಬೆಂಗಳೂರು ನಗರ ಸರಿದಂತೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ದಾವಣಗೆರೆ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಮಂಗಳೂರು ಜಿಲಾ ಕೇಂದ್ರಗಳು ಸೇರಿ 23 ಭಾಗಗಳಲ್ಲಿ 207 ಪರೀಕ್ಷಾ ಉಪ ಕೇಂದ್ರಗಳಲ್ಲಿ 78 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಲು ಹಾಗೂ ಪಾರದರ್ಶಕ, ನ್ಯಾಯ ಸಮ್ಮತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರೀಕ್ಷೆಯನ್ನು ನಡೆಸಲು ಆಯೋಗವು ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಪ್ರಮುಖ ಮುಂಜಾಗ್ರತಾ ಕ್ರಮಗಳು :

  • ಪರೀಕ್ಷಾರ್ಥಿಗಳು ತುಂಬು ತೋಳಿನ ಶರ್ಟ್ ಮತ್ತು ಯಾವುದೇ ಆಭರಣಗಳನ್ನು (ಮಂಗಳ ಸೂತ್ರ ಹಾಗೂ ಕಾಲುಂಗುರವನ್ನು ಹೊರತುಪಡಿಸಿ) ನಿಷೇಧ
  • ಮೆಟಲ್ ಕೈಗಡಿಯಾರ, ಪಾರದರ್ಶಕವಲ್ಲದ ನೀರಿನ ಬಾಟಲ್​​ಗಳನ್ನು ಪರೀಕ್ಷಾ ಕೊಠಡಿಯೊಳಗೆ ನಿಷೇಧ
  • ಪರೀಕ್ಷಾರ್ಥಿಗಳು ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಮಾಸ್ಕ್‌ ಅನ್ನು ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ
  • ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಅಭ್ಯರ್ಥಿಗಳು ಪ್ರವೇಶಿಸುವ ಮುನ್ನ ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಯಿಂದ ಪರಿಶೀಲನೆ
  • ಮೊಬೈಲ್ ಮತ್ತು ಇತರೆ ತಾಂತ್ರಿಕ (ಎಲೆಕ್ಟ್ರಾನಿಕ್) ವಸ್ತುಗಳಿಂದ ಪರೀಕ್ಷಾ ಉಪಕೇಂದ್ರದಲ್ಲಿ ಸಂವಹನ ನಡೆಸಲು ಅವಕಾಶವಾಗದಂತೆ ಜಾಮರ್ ಅಳವಡಿಕೆ
  • ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ನೈಜತೆಯನ್ನು ಪರಿಶೀಲಿಸಲು ಫೇಸ್ ರೆಕಗ್ನೈಜೇಷನ್ ಮೂಲಕ ಪರಿಸೀಲನೆ
  • ಪರೀಕ್ಷಾ ಉಪ ಕೇಂದ್ರಗಳ ಕೊಠಡಿಗಳಲ್ಲಿ ನಕಲು ಮಾಡುವುದನ್ನು ತಡೆಯಲು ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮರಾಗಳನ್ನು ಅಳವಡಿಕೆ
  • ಪರೀಕ್ಷೆ ನಡೆಯುವ ಕೊಠಡಿಗಳ ಅಭ್ಯರ್ಥಿಗಳ ಚಲನವಲನಗಳ ಪರಿಶೀಲನೆ ಮಾಡಲು ವ್ಯವಸ್ಥೆ
  • ಪ್ರಥಮ ಬಾರಿಗೆ ಪರೀಕ್ಷಾ ಕೇಂದ್ರಗಳ ಸಂವೀಕ್ಷಕರಿಗೆ ಬಾಡಿವೋರ್ನ್ ಕ್ಯಾಮೆರಾಗಳ ಅಳವಡಿಕೆ
  • ಪ್ರತಿ ಪರೀಕ್ಷಾ ಉಪಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯ ನಿರ್ವಹಣೆಯ ಚಟುವಟಿಕೆಗಳ ಕುರಿತು ಪ್ರತ್ಯೇಕವಾಗಿ ವಿಡಿಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ
  • ಈ ಸೂಚನೆಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಶಿಸ್ತು ಕ್ರಮಕ್ಕೆ ಒಳಪಡುತ್ತದೆ. ಜೊತೆಗೆ ಅವರ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು ಮತ್ತು ಆಯೋಗವು ನಡೆಸುವ ಪರೀಕ್ಷೆಗಳು, ಇತರೆ ಲೋಕಸೇವಾ ಆಯೋಗ, ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದು
  • ಪರೀಕ್ಷೆಗೂ ಮುನ್ನ ಒಂದು ಗಂಟೆ ಮುಂಚಿತವಾಗಿ ಪ್ರವೇಶಪತ್ರ, ಭಾವಚಿತ್ರವಿರುವ ಗುರುತಿನ ಮೂಲ ದಾಖಲೆ/ಚೀಟಿ (ಐಡಿ) ಮತ್ತು ಕಪ್ಪು ಶಾಹಿಯ ಬಾಲ್‌ನ್‌ನೊಂದಿಗೆ ಹಾಜರಾಗುವುದು

ಇದನ್ನೂ ಓದಿ: ಐಟಿಬಿಪಿಯಿಂದ ಪೊಲೀಸ್ ಕಾನ್ಸ್​​ಟೆಬಲ್​ ನೇಮಕಾತಿ: 10ನೇ ತರಗತಿ ಪಾಸ್​ ಆಗಿದ್ರೆ ಅರ್ಜಿ ಹಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.