ETV Bharat / state

3 ವರ್ಷದಲ್ಲಿ ರಾಜ್ಯಕ್ಕೆ ಹರಿದು ಬಂದ 1.27 ಲಕ್ಷ ಕೋಟಿ ಬಂಡವಾಳ: ಆದರೆ ಸದ್ದಿಲ್ಲದೇ ಕೆಲ ಕೈಗಾರಿಕೆಗಳಿಗೆ ಬೀಗ!

author img

By

Published : Nov 4, 2022, 8:54 PM IST

ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣ. ಮೂರು ವರ್ಷದಲ್ಲಿ 1.27 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. ಆದ್ರೆ ಕೆಲ ಕೈಗಾರಿಕೆಗಳು ಈ ಮಧ್ಯೆ ಮುಚ್ಚಲ್ಪಟ್ಟಿವೆ.

ಕೈಗಾರಿಕೆಗಳಿಗೆ ಬೀಗ
ಕೈಗಾರಿಕೆಗಳಿಗೆ ಬೀಗ

ಬೆಂಗಳೂರು: ರಾಜ್ಯ ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿದೆ. ಉದ್ದಿಮೆ ಸ್ನೇಹಿ ವಾತಾವರಣ ಜಾಗತಿಕ ಕೈಗಾರಿಕೋದ್ಯಮಿಗಳನ್ನು ರಾಜ್ಯಕ್ಕೆ ಆಕರ್ಷಿಸುತ್ತದೆ. ರಾಜ್ಯ ಕಳೆದ ಮೂರು ವರ್ಷಗಳಲ್ಲಿ ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಅನುಮೋದನೆ‌‌ ನೀಡಿದೆ.‌ ಈ ಮಧ್ಯೆ ಕೆಲ ಬೃಹತ್ ಕೈಗಾರಿಕೆಗಳು ಸದ್ದಿಲ್ಲದೇ ಬಾಗಿಲು ಮುಚ್ಚಿವೆ.

ಕರ್ನಾಟಕ ರಾಜ್ಯ ಅತ್ಯಂತ ಪ್ರಗತಿಶೀಲ ರಾಜ್ಯ. ಅಭಿವೃದ್ಧಿಯಲ್ಲಿ ಯಾವತ್ತೂ ಮುಂಚೂಣಿಯಲ್ಲಿರುವ ರಾಜ್ಯ. ಜಾಗತಿಕ, ದೇಶಿ ಉದ್ಯಮಿಗಳಿಗೆ ಕರ್ನಾಟಕ, ಅದರಲ್ಲೂ ಬೆಂಗಳೂರು ಅಚ್ಚುಮೆಚ್ಚಿನ ತಾಣ. ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ.‌ ಈಗ ಸರ್ಕಾರ ಇನ್ನಷ್ಟು ಹೆಚ್ಚಿನ ಬಂಡವಾಳ ಹೂಡಿಕೆಗಾಗಿ ಜಾಗತಿಕ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡಿದೆ. ನಿರೀಕ್ಷೆಯಂತೆ ಜಿಮ್​ಗೆ ಉತ್ತಮ ಸ್ಪಂದನೆ ಸಿಕ್ಕಿದೆ.

ರಾಜ್ಯಕ್ಕೆ ಪ್ರತಿವರ್ಷ ಉತ್ತಮ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಹರಿದು ಬರುತ್ತಿವೆ. ಈಗಾಗಲೇ ಹಲವು ಬಂಡವಾಳ ಹೂಡಿಕೆ ಯೋಜನೆಗಳಿಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಮತ್ತು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

3 ವರ್ಷಗಳಲ್ಲಿ ರಾಜ್ಯದ ಹೂಡಿಕೆ ಪ್ರಗತಿ: ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 1,103 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ 1,27,386 ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇಡಲಾಗಿದೆ. ಇದರಿಂದ ಒಟ್ಟು 3,43,593 ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಕೈಗಾರಿಕಾ ಇಲಾಖೆ ಅಂಕಿ ಅಂಶ ನೀಡಿದೆ.

2019-20ರಲ್ಲಿ 30,001 ಕೋಟಿ ರೂ‌. ಬಂಡವಾಳ ಹೂಡಿಕೆಯ 186 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಇನ್ನು 2020-21ರಲ್ಲಿ 307 ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಆ ಮೂಲಕ ರಾಜ್ಯಕ್ಕೆ 51,856 ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಅದೇ ರೀತಿ 2021-22ರಲ್ಲಿ 610 ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿತ್ತು. ಆ ಮೂಲಕ ರಾಜ್ಯಕ್ಕೆ 45,529 ಕೋಟಿ ರೂ. ಹೂಡಿಕೆ ಬರಲಿದೆ.

ಸದ್ದಿಲ್ಲದೇ ಮುಚ್ಚಿದ ಬೃಹತ್ ಕೈಗಾರಿಕೆಗಳು: ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 15 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ವಿವಿಧ ಕಾರಣಗಳಿಂದ ಮುಚ್ಚಲಾಗಿದೆ. ಕಾರ್ಖಾನೆಗಳು ಮುಚ್ಚಿರುವುದರಿಂದ ಒಟ್ಟು 2,086 ನಿರುದ್ಯೋಗಿಗಳಾಗಿದ್ದಾರೆ. ಬಾಗಲಕೋಟೆಯಲ್ಲಿ ಮೂರು ಬೃಹತ್ ಕೈಗಾರಿಕೆಗಳಾದ ಪ್ರಜಾ ಸಿಮೆಂಟ್ ಪ್ರೈವೆಟ್ ಲಿ., ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಸಾವರಿನ್ ಇಂಡಸ್ಟ್ರೀಜ್ ಲಿ. ಮುಚ್ಚಿ ಹೋಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ 5 ಕಂಪನಿಗಳು ಕಳೆದ ಮೂರು ವರ್ಷದಿಂದ ಮುಚ್ಚಿವೆ. ಮೆ|ಸ್ವಾನ್ ಸಿಲ್ಕ್ ಲಿ., ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ ಲಿ., ತೇಜಕಮಲ್ ಫಾರ್ಮಸಿಟಿಕಲ್ಸ್ ಪ್ರೈವೇಟ್ ಲಿ., ವೆಲ್ ಫ್ಯಾಬ್ ಟೆಕ್ನಾಲಜಿ ಪ್ರೈ.ಲಿ., ಮೆ|ಕ್ಯಾಡ್ಜೀಸ್ ಇಂಡಿಯಾ ಪ್ರೈ. ಲಿ. ಮುಚ್ಚಲ್ಪಟ್ಟಿವೆ.

ಚಿತ್ರದುರ್ಗದಲ್ಲಿ ಮೆ|ಎಂಟೈರ್ ಸೆರಾಮಿಕ್ಸ್, ದ.ಕನ್ನಡದಲ್ಲಿ ಜೆ.ಬಿ‌.ಎಫ್. ಪೆಟ್ರೋಕೆಮಿಕಲ್ಸ್ ಲಿ., ಗದಗದಲ್ಲಿ ದಿ ಫಾರ್ಮರ್ಸ್ ಸ್ಪಿನ್ನಿಂಗ್ ಮಿ.ಲಿ., ದಿ ಗದಗ ಕೋ-ಆಫ್ ಟೆಕ್ಟ್ಸೈಲ್ಸ್ ಮಿಲ್ ಲಿ., ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ, ಕೋಲಾರದ ಮೆ|ಗ್ಲಾಕ್ಸೋಸ್ಮಿತಿಕ್ಲೈನ್ ಫಾರ್ಮಸಿಟಿಕಲ್ಸ್ ಲಿ., ರಾಮನಗರದ ಟಕೋಯ್ ರಬ್ಬರ್ ಆಟೋಪಾರ್ಟ್ಸ್ ಇಂಡಿಯಾ ಪ್ರೈ.ಲಿ. ಬಾಗಿಲು ಹಾಕಿವೆ.

(ಓದಿ: 10 ಲಕ್ಷ ಕೋಟಿ ಬಂಡವಾಳದಲ್ಲಿ ಬೆಂಗಳೂರು ಹೊರಗಡೆಯೇ ಶೇ.70 ರಷ್ಟು ಹೂಡಿಕೆ: ಮುರುಗೇಶ್ ನಿರಾಣಿ )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.