ETV Bharat / state

ರಾಜ್ಯ ಚುನಾವಣಾ ಅಖಾಡಕ್ಕೆ ಧುಮುಕಿರುವ ಪ್ರಮುಖ ಅಭ್ಯರ್ಥಿಗಳ ಮೇಲಿದೆ ಹತ್ತು ಹಲವು ಪ್ರಕರಣಗಳು

author img

By

Published : Apr 24, 2023, 6:44 PM IST

ನಾಮಪತ್ರ ಸಲ್ಲಿಸುವಾಗ ಪ್ರತಿ ಅಭ್ಯರ್ಥಿಯು ತಮ್ಮ ಮೇಲಿರುವ ಅಪರಾಧ ಪ್ರಕರಣ ಹಾಗೂ ಇತರೆ ಪ್ರಕರಣಗಳನ್ನು ಬಹಿರಂಗಪಡಿಸಬೇಕು.

ಡಿಕೆಶಿ ಸಿದ್ದರಾಮಯ್ಯ ವಿಜಯೇಂದ್ರ
ಡಿಕೆಶಿ ಸಿದ್ದರಾಮಯ್ಯ ವಿಜಯೇಂದ್ರ

ಬೆಂಗಳೂರು : ರಾಜ್ಯದ ಚುನಾವಣಾ ಅಖಾಡದಲ್ಲಿ ಪ್ರಚಾರದ ಕಾವು ಏರುತ್ತಿದೆ. ಅಭ್ಯರ್ಥಿಗಳು ರಣಕಣದಲ್ಲಿ ಬಿರುಸಿನ‌ ಮತಬೇಟೆ ಆರಂಭಿಸಿದ್ದಾರೆ.‌ ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗಳ ಮೇಲಿರುವ ಪ್ರಕರಣಗಳ ಬಗ್ಗೆ ವರದಿ ಇಲ್ಲಿದೆ.

ರಾಜ್ಯದ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ಸರ್ವ ಪ್ರಯತ್ನಗಳನ್ನು ಮಾಡುತ್ತಿವೆ. ಬಿರು ಬಿಸಿಲನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಬಿರುಸಿನ‌ ಪ್ರಚಾರ ಆರಂಭಿಸಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಅಲ್ಲಿಗೆ ಚುನಾವಣೆ ಮತಯುದ್ಧದ ಮೊದಲ ಅಧ್ಯಾಯ ಮುಗಿಯಲಿದ್ದು, ಇನ್ನೇನಿದ್ದರೂ ಅಖಾಡದಲ್ಲಿ ಚುನಾವಣಾ ರಣೋತ್ಸವದ್ದೇ ಅಬ್ಬರ. ಮೇ 10ಕ್ಕೆ ನಡೆಯಲಿರುವ ಮತದಾನಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಸುಮಾರು 3,000 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಬಗ್ಗೆ ಪತ್ರಿಕೆ ಮತ್ತು ದೂರದರ್ಶನದ ಮೂಲಕ ಪ್ರಚಾರ ಸೇರಿದಂತೆ ಮೂರು ಸಂದರ್ಭದಲ್ಲಿ ಪ್ರಕಟಿಸುವ ಅಗತ್ಯವಿದೆ. ರಾಜಕೀಯ ಪಕ್ಷಗಳು ತಮ್ಮ ವೆಬ್‌ಸೈಟ್‌, ಪತ್ರಿಕೆ ಮತ್ತು ದೂರದರ್ಶನದಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಮಾಹಿತಿಯನ್ನು ಪ್ರಕಟಿಸಬೇಕಿದೆ.

ನಿಯಮ‌ ಏನು ಹೇಳುತ್ತದೆ? : ಮತದಾರರಿಗೆ ಅಭ್ಯರ್ಥಿಗಳ ಹಿನ್ನೆಲೆ ಬಗ್ಗೆ ತಿಳಿಯಲು ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ಅದರಂತೆ ನಾಮಪತ್ರ ಹಿಂಪಡೆಯುವ ದಿನಾಂಕದ ಮುಂಚಿತ 4 ದಿನಗಳ ಒಳಗೆ, ಮುಂದಿನ 5 ರಿಂದ 8ನೇ ದಿನಗಳ ನಡುವೆ, 9ನೇ ದಿನದಿಂದ ಪ್ರಚಾರದ ಕೊನೆಯ ದಿನದವರೆಗೆ (ಮತದಾನದ ದಿನಾಂಕದ ಮೊದಲು ಎರಡನೇ ದಿನ) ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿಯನ್ನು ಪ್ರಕಟಿಸಬೇಕು. ಸುಪ್ರೀಂ ಕೋರ್ಟ್ ಆದೇಶದನ್ವಯ ಇದು ಕಡ್ಡಾಯವಾಗಿದೆ.

ಕೇಂದ್ರ ಮತ್ತು ರಾಜ್ಯ ಚುನಾವಣಾ ಮಟ್ಟದಲ್ಲಿ ವಿವರವಾದ ಮಾಹಿತಿಯನ್ನು ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ (ಅಪರಾಧಗಳ ಸ್ವರೂಪ) ತಮ್ಮ ವೆಬ್​ಸೈಟ್‌ನಲ್ಲಿ ಅಪ್​ಲೋಡ್ ಮಾಡಬೇಕು. ಆರೋಪಿಸಲಾದ ವಿವರಗಳು, ಸಂಬಂಧಿತ ನ್ಯಾಯಾಲಯದ ಪ್ರಕರಣ ಸಂಖ್ಯೆ ಇತ್ಯಾದಿ, ಅಭ್ಯರ್ಥಿಯಾಗಿ ಆಯ್ಕೆಯಾಗಲು ಕಾರಣಗಳ ಜತೆಗೆ ಅಪರಾಧ ಹಿನ್ನೆಲೆ ಇಲ್ಲದ ಇತರೆ ಅಭ್ಯರ್ಥಿಗಳನ್ನು ಯಾಕೆ ಆಯ್ಕೆ ಮಾಡಲಾಗಲಿಲ್ಲ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ.

ಪ್ರಮುಖ ಅಭ್ಯರ್ಥಿಗಳ ಮೇಲಿನ ಪ್ರಕರಣಗಳ ಸುತ್ತ : ನಾಮಪತ್ರ ಸಲ್ಲಿಸುವಾಗ ಪ್ರತಿ ಅಭ್ಯರ್ಥಿಯೂ ತಮ್ಮ ಮೇಲಿನ ಅಪರಾಧ ಪ್ರಕರಣಗಳು, ಇತರ ಪ್ರಕರಣಗಳೆಲ್ಲವನ್ನೂ ಬಹಿರಂಗ ಪಡಿಸಬೇಕು. ಪ್ರಕರಣದ ಸ್ವರೂಪ, ಯಾವ ಹಂತದಲ್ಲಿ ಪ್ರಕರಣಗಳಿವೆ, ಶಿಕ್ಷೆ ಪ್ರಮಾಣದ ಬಗ್ಗೆ ಸವಿವರವಾದ ಮಾಹಿತಿ ನೀಡಬೇಕು.‌ ಅದರಂತೆ ಕಣದಲ್ಲಿರುವ ಕೆಲ ಪ್ರಮುಖ ಅಭ್ಯರ್ಥಿಗಳ ಮೇಲೆ ದಾಖಲಾಗಿರುವ ಕೇಸ್​ಗಳ ಬಗ್ಗೆ ನೋಡೋಣ.

ಮಾಜಿ ಸಿಎಂ ಸಿದ್ದರಾಮಯ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪ್ರಮುಖವಾಗಿ ಪ್ರತಿಭಟನೆ, ಕೋವಿಡ್ ನಿಯಮ ಉಲ್ಲಂಘನೆ, ಸಾರ್ವಜನಿಕ ಆಸ್ತಿಗಳ ವಿರೂಪಗೊಳಿಸುವ ಕಾಯ್ದೆ, @ ಜನಪ್ರತಿನಿಧಿ ಕಾಯ್ದೆ, ಲಂಚ ಆರೋಪದ ಪ್ರಕರಣಗಳು ಸೇರಿವೆ. ಈ 13 ವಿವಿಧ ಪ್ರಕರಣಗಳ ಪೈಕಿ 6ರ ಮೇಲೆ ಸಿಐಡಿ ತನಿಖೆ ನಡೆಯುತ್ತಿದೆ. ಇನ್ನೊಂದಿಷ್ಟು ಪ್ರಕರಣಗಳ ವಿಚಾರಣೆ ನ್ಯಾಯಾಲಯಗಳಲ್ಲಿ ಪ್ರಗತಿಯಲ್ಲಿವೆ.

ಹೆಚ್ ಡಿ ಕುಮಾರಸ್ವಾಮಿ : ಹೆಚ್ ಡಿ ಕುಮಾರಸ್ವಾಮಿ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಎರಡು ಕೇಸ್​ ಸಂಬಂಧ ಎಸ್ಐಟಿ/ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ. ಇನ್ನೂ ಎರಡು ಡಿನೋಟಿಫಿಕೇಶನ್ ಸಂಬಂಧ ದಾಖಲಾದ ಪ್ರಕರಣಗಳಾಗಿವೆ. ಈ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.

ಡಿ ಕೆ ಶಿವಕುಮಾರ್ : ಡಿ ಕೆ ಶಿವಕುಮಾರ್ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪ್ರಮುಖವಾಗಿ ಆದಾಯ ಮೀರಿ ಆಸ್ತಿ ಗಳಿಕೆ, ಲಂಚ ಆರೋಪ, ಸಾರ್ವಜನಿಕ ಆಸ್ತಿಗಳ ವಿರೂಪ, ಕೋವಿಡ್ ನಿಯಮ ಉಲ್ಲಂಘನೆ, ಪ್ರತಿಭಟನಾ ಮೆರವಣಿಗೆ, ಸಾಕ್ಷ್ಯ ನಾಶ, ತೆರಿಗೆ ಪಾವತಿಸದೇ ಇರುವುದು, ಮನಿ ಲಾಂಡರಿಂಗ್ ಸೇರಿ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳು ತನಿಖಾ ಹಂತದಲ್ಲಿದ್ದರೆ, ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ.

ಅಶ್ವತ್ಥ್ ನಾರಾಯಣನ್ : ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ನಾರಾಯಣ್ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಖಾಸಗಿ ದೂರಿನ ಮೇರೆಗೆ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದು ವಿಚಾರಣೆ ಹಂತದಲ್ಲಿದೆ.

ಆರ್ ಅಶೋಕ್ : ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಎಸಿಬಿ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣ ಈಗ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ‌. ಅನಧಿಕೃತ ಕೃಷಿ ಭೂಮಿ ಸಕ್ರಮಗೊಳಿಸುವ ವಿಚಾರವಾಗಿ ಅವ್ಯವಹಾರದ ಆರೋಪ ಇದಾಗಿದೆ.

ಎಸ್ ಟಿ ಸೋಮಶೇಖರ್ : ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಅನುಮೋದನೆ‌ಗೊಂಡಿರುವ ಬಿಡಿಎ ಕಾಮಗಾರಿಗೆ ಕಾರ್ಯಾದೇಶ ನೀಡಲು ತಿಳಿಸಿದ್ದಾರೆ ಎಂಬ ಆರೋಪದಡಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಮತ್ತೆ ಒಂದು ಪ್ರಕರಣ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದೆ.

ವಿನಯ್ ಕುಲಕರ್ಣಿ : ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಸೆರೆಮನೆವಾಸ ಅನುಭವಿಸಿದ್ದರು. ಇನ್ನುಳಿದಂತೆ ಸಾಕ್ಷಿ ನಾಶ, ಕೋವಿಡ್ ನಿಯಮ‌ ಉಲ್ಲಂಘನೆ, ಮೇಕೆದಾಟು ಪ್ರತಿಭಟನೆ ಸಂಬಂಧಿಸಿ ಪ್ರಕರಣಗಳು ದಾಖಲಾಗಿವೆ.‌

ಎಂ ಬಿ ಪಾಟೀಲ್: ಬಬಲೇಶ್ವರ ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. ಮೇಕೆದಾಟು ಪ್ರತಿಭಟನೆ ಸಂಬಂಧಿಸಿದಂತೆ 2 ಪ್ರಕರಣ ಹಾಗೂ ಕೋವಿಡ್ ನಿಯಮ ಉಲ್ಲಂಘನೆ ಸಂಬಂಧ 3 ಪ್ರಕರಣಗಳು ದಾಖಲಾಗಿವೆ. ಇವು ವಿಚಾರಣಾ ಹಂತದಲ್ಲಿವೆ.

ಮುನಿರತ್ನ : ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೇಲೆ 8 ಪ್ರಕರಣಗಳು ದಾಖಲಾಗಿವೆ. ಜನಪ್ರತಿನಿಧಿ ಕಾಯ್ದೆಯಡಿ ಹಾಗೂ ಐಪಿಸಿ ಮತ್ತು ಐಟಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಹಲವು ತನಿಖಾ ಹಂತದಲ್ಲಿದ್ದರೆ, ಇನ್ನೂ ಕೆಲವು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ.

ಬಿ ವೈ ವಿಜಯೇಂದ್ರ : ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಮೇಲೆ 2 ಪ್ರಕರಣ ದಾಖಲಾಗಿವೆ. ಆ ಪೈಕಿ ಒಂದು ಪ್ರಕರಣ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ದಾಖಲಾಗಿದೆ. ಸರ್ಕಾರಿ ಅಧಿಕಾರಿಗೆ ಲಂಚ ನೀಡಿರುವ ಆರೋಪದಡಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಮನಿ ಲಾಂಡರಿಂಗ್​ ಪ್ರಕರಣವಾಗಿದೆ. ಇಡಿ ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದೆ.

ಎನ್ ಎ ಹ್ಯಾರೀಸ್ : ಶಾಂತಿನಗರ ಕೈ ಅಭ್ಯರ್ಥಿ ಎನ್ ಎ ಹ್ಯಾರೀಸ್ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಇಡಿ ಕಚೇರಿಗೆ ಮುತ್ತಿಗೆ ಹಾಕಿದ ಸಂಬಂಧ ಪ್ರಕರಣ ದಾಖಲಾಗಿದ್ದರೆ, ಇನ್ನುಳಿದಂತೆ ಮೇಕೆದಾಟು ಪ್ರತಿಭಟನೆ ಸಂಬಂಧ ಎರಡು ಪ್ರಕರಣಗಳು ದಾಖಲಾಗಿವೆ.

ಜಮೀರ್ ಅಹಮ್ಮದ್ ಖಾನ್: ಚಾಮರಾಜಪೇಟೆ ಕೈ ಅಭ್ಯರ್ಥಿ ಜಮೀರ್ ಅಹಮ್ಮದ್ ಖಾನ್ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ. ಐಟಿ ಕಾಯ್ದೆಯಡಿ ಮನಿ ಲಾಂಡರಿಂಗ್​ ಪ್ರಕರಣ, ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ಲೋಕಾಯುಕ್ತದಲ್ಲಿ ಕೇಸ್​ ದಾಖಲಾಗಿದೆ. ಮನಿ ಲಾಂಡರಿಂಗ್​ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣವೂ ತನಿಖೆ ಹಂತದಲ್ಲಿದೆ.

ವಿ ಸೋಮಣ್ಣ : ವರುಣಾ ಹಾಗೂ ಚಾಮರಾಜನಗರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ 1 ಪ್ರಕರಣ ದಾಖಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. 2013ರಲ್ಲಿ ದಾಖಲಾದ ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಬಸನಗೌಡ ಪಾಟೀಲ್ ಯತ್ನಾಳ್: ಬಿಜೆಪಿ ಅಭ್ಯರ್ಥಿ ಬಸನಗೌಡ ಯತ್ನಾಳ್ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. ಮಾನನಷ್ಟ ಮೊಕದ್ದಮೆ, ಅಪರಾಧಿಕ ಸಂಚು, ಅಪರಾಧಕ್ಕೆ ಕುಮ್ಮಕ್ಕು, ಕಾನೂನುಬಾಹಿರ ಗುಂಪು ಸೇರುವಿಕೆ ಸಂಬಂಧ ಪ್ರಕರಣಗಳು ದಾಖಲಾಗಿವೆ. ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದ್ದು, ಎಲ್ಲವೂ ವಿಚಾರಣಾ ಹಂತದಲ್ಲಿವೆ.

ಗೋವಿಂದ ರಾಜ್ : ಚಾಮರಾಜಪೇಟೆ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜ್ ಮೇಲೆ 18 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಗಂಭೀರ ಸ್ವರೂಪದ ಪ್ರಕರಣವೂ ಸೇರಿದೆ‌. ಕೊಲೆ ಪ್ರಕರಣದಲ್ಲಿ ಗೋವಿಂದ ರಾಜ್ ಜೈಲು ಪಾಲಾಗಿದ್ದರು. ಇನ್ನು ಭೂ ವ್ಯಾಜ್ಯ, ಅಕ್ರಮ ಆಸ್ತಿ ಗಳಿಕೆ, ಐಟಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಎಲ್ಲಾ ಪ್ರಕರಣಗಳು ತನಿಖೆ ಹಾಗೂ ವಿಚಾರಣೆ ಹಂತದಲ್ಲಿವೆ.

ಶ್ರೀರಾಮುಲು: ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ 3 ಪ್ರಕರಣಗಳು ದಾಖಲಾಗಿವೆ. ಅಕ್ರಮ ಆಸ್ತಿ ಗಳಿಕೆ, ತೆರಿಗೆ ಪಾವತಿಸದಿರುವುದು, ಭೂ ಕಬಳಿಕೆ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಗಾಲಿ ಜನಾರ್ದನ ರೆಡ್ಡಿ: ಗಂಗಾವತಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜನಾರ್ದನ ರೆಡ್ಡಿ ವಿರುದ್ಧ ಬರೋಬ್ಬರಿ 20 ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳು ಅಕ್ರಮ ಗಣಿಗಾರಿಕೆ, ಲೋಕಾಯುಕ್ತ/ಎಸ್ಐಟಿ ಪ್ರಕರಣ, ತೆರಿಗೆ ವಂಚನೆ, ಅಕ್ರಮ ಆಸ್ತಿ ಗಳಿಕೆ ಸಂಬಂಧ ಪ್ರಕರಣಗಳು ದಾಖಲಾಗಿವೆ. ಎಲ್ಲಾ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ರಮೇಶ್ ಜಾರಕಿಹೊಳಿ: ಗೋಕಾಕ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ 1 ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ‌ನಲ್ಲಿ ಲೈಂಗಿಕ ಕಿರುಕುಳ, ಬೆದರಿಕೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಿ ರಿಪೋರ್ಟ್ ನೀಡಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ಇದನ್ನೂ ಓದಿ : ಮಹಾದೇವಪ್ಪ ಯಾದವಾಡ ಬಂಡಾಯ ಶಮನ: ನಾಮಪತ್ರ ವಾಪಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.