ETV Bharat / state

ಸಿದ್ದು ಲೆಕ್ಕ: ಅತ್ತ ಪಂಚ ಗ್ಯಾರಂಟಿ ವ್ಯಾಪ್ತಿಯ ಇಲಾಖೆಗಳಿಗೆ ಹೆಚ್ಚಿನ ಅನುದಾನ, ಇತ್ತ ಕೆಲ ಇಲಾಖೆಗಳ ಅನುದಾನ ಕಟ್

author img

By

Published : Jul 8, 2023, 7:13 AM IST

ಸಿಎಂ ಸಿದ್ದರಾಮಯ್ಯ ಅವರು ಬಜೆಟ್​ ಮಂಡನೆ ಮಾಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಅನುದಾನ ಹೆಚ್ಚಿಸಲಾಗಿದ್ದು, ಇತರ ಕೆಲ ಇಲಾಖೆಗಳಿಗೆ ಅನುದಾನ ಕಡಿತ ಮಾಡಲಾಗಿದೆ.

karnataka-budget-2023-increase-in-grant-to-departments-of-five-guarantee-schemes
ಸಿದ್ದು ಲೆಕ್ಕ: ಅತ್ತ ಪಂಚ ಗ್ಯಾರಂಟಿ ವ್ಯಾಪ್ತಿಯ ಇಲಾಖೆಗಳಿಗೆ ಹೆಚ್ಚಿನ ಅನುದಾನ, ಇತ್ತ ಕೆಲ ಇಲಾಖೆಗಳ ಅನುದಾನ ಕಟ್!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 3,27,747 ಕೋಟಿ ರೂ.‌ಗಾತ್ರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದಾರೆ.‌ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಗ್ಯಾರಂಟಿ ಬಜೆಟ್ ಇದಾಗಿದೆ. ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಹೆಚ್ಚು ಅನುದಾನ ನೀಡಿದ್ದು, ಇನ್ನು ಕೆಲ ಇಲಾಖೆಗಳಿಗೆ ಅನುದಾನ ಕಡಿತ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಗ್ಯಾರಂಟಿ ಸವಾಲಿನೊಂದಿಗೆ ಆದಾಯ ಕೊರತೆಯ ಬಜೆಟ್ ಮಂಡಿಸಿದ್ದಾರೆ.‌ ಪಂಚ ಗ್ಯಾರಂಟಿಗಳಿಗಾಗಿ ಕೆಲ ತೆರಿಗೆಗಳನ್ನು ಏರಿಸಿ, ಸಾಲದ ಮೊರೆ ಹೋಗಿ, ಆದಾಯ ಸಂಗ್ರಹದ ಗುರಿಯನ್ನು ಹೆಚ್ಚಿಸಿ ಹಣ ಹೊಂದಿಸುವ ಕಸರತ್ತು ಮಾಡಿದ್ದಾರೆ.‌ ಈ ಆರ್ಥಿಕ ವರ್ಷದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಬೇಕಾಗಿರುವ ಅಂದಾಜು 34,410 ಕೋಟಿ ರೂ.ನ್ನು ಹೊಂದಿಸಿ ಬಜೆಟ್ ಮಂಡನೆ ಮಾಡಿದ್ದಾರೆ.

ಪಂಚ ಗ್ಯಾರಂಟಿಗಳ ವ್ಯಾಪ್ತಿ ಇಲಾಖೆಗಳಿಗೆ ಹೆಚ್ಚಿನ ಅನುದಾನ: ಸಿಎಂ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿಗಳಾದ ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ವ್ಯಾಪ್ತಿಗೊಳಪಡುವ ಪಂಚ ಇಲಾಖೆಗಳ ಅನುದಾನವನ್ನು ಗಣನೀಯವಾಗಿ ಏರಿಕೆ ಮಾಡಿದ್ದಾರೆ.‌ ಆ ಮೂಲಕ ಪಂಚ ಗ್ಯಾರಂಟಿ ಯೋಜನೆಗಳಿಗೆ ಇಲಾಖಾವಾರು ಹಣ ನೀಡಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯಾಪ್ತಿಗೆ ಬರುವ ಅನ್ನಭಾಗ್ಯ ಯೋಜನೆಗೆ ಉಳಿದಿರುವ ಆರ್ಥಿಕ ವರ್ಷದಲ್ಲಿ ಅಂದಾಜು 10,275 ಕೋಟಿ ರೂ. ವೆಚ್ಚ ಆಗಲಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ಒಟ್ಟು 10,460 ಕೋಟಿ ರೂ. ಅನುದಾನ ನೀಡಿದ್ದಾರೆ. ಇದೇ ಫೆಬ್ರವರಿಯಲ್ಲಿ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ನಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ 4,600 ಕೋಟಿ ರೂ. ಅನುದಾನ ನೀಡಲಾಗಿತ್ತು.

ಇನ್ನು ಗೃಹ ಲಕ್ಷ್ಮಿ ಯೋಜನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಉಳಿದ ಅವಧಿಗೆ ಗೃಹ ಲಕ್ಷ್ಮಿ ಯೋಜನೆಗೆ ಅಂದಾಜು 17,500 ಕೋಟಿ ರೂ. ಆಗಲಿದೆ.‌ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 24,166 ಕೋಟಿ ರೂ.‌ ಅನುದಾನ ಮೀಸಲಿಟ್ಟಿದ್ದಾರೆ. ಇದೇ ಫೆಬ್ರವರಿಯಲ್ಲಿ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ನಲ್ಲಿ ಇಲಾಖೆಗೆ 5,676 ಕೋಟಿ ರೂ. ಅನುದಾನ ನೀಡಿದ್ದರು.

ಇಂಧನ ಇಲಾಖೆ ವ್ಯಾಪ್ತಿಗೆ ಬರುವ ಗೃಹ ಜ್ಯೋತಿ ಯೋಜನೆಗಾಗಿ ಈ ವರ್ಷದ ಉಳಿದ ಅವಧಿಗೆ ಅಂದಾಜು 9,000 ಕೋಟಿ ವೆಚ್ಚ ಆಗಲಿದೆ. ಇದಕ್ಕಾಗಿ ಇಂಧನ ಇಲಾಖೆಗೆ ಒಟ್ಟು 22,773 ಕೋಟಿ ರೂ. ಮೀಸಲಿರಿಸಿದ್ದಾರೆ. ಬೊಮ್ಮಾಯಿ ತಮ್ಮ ಬಜೆಟ್ ನಲ್ಲಿ ಇಂಧನ ಇಲಾಖೆಗೆ 13,803 ಕೋಟಿ ರೂ. ಮೀಸಲಿರಿಸಿದ್ದರು.

ಶಕ್ತಿ ಯೋಜನೆ ಸಾರಿಗೆ ಇಲಾಖೆ ವ್ಯಾಪ್ತಿಗೆ ಬರುತ್ತದೆ.‌ ಶಕ್ತಿ ಯೋಜನೆಗೆ ಜೂನ್ ರಿಂದ‌ ಮಾರ್ಚ್ ವರೆಗೆ 2,800 ಕೋಟಿ ರೂ. ಹಂಚಿಕೆ ಮಾಡಿದ್ದಾರೆ.

ಯಾವೆಲ್ಲಾ ಇಲಾಖೆಗೆ ಅನುದಾನ ಕಡಿತ?: ಫೆಬ್ರವರಿಯಲ್ಲಿ ಬೊಮ್ಮಾಯಿ ಮಂಡಿಸಿದ್ದ ಬಜೆಟ್​ನಲ್ಲಿ ಶಿಕ್ಷಣ ಇಲಾಖೆಗೆ 37,960 ಕೋಟಿ ರೂ. ಅನುದಾನ ನೀಡಿದ್ದರೆ, ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ 37,587 ಕೋಟಿ ರೂ. ಅನುದಾನ ನೀಡಿದ್ದಾರೆ. ಸುಮಾರು 373 ಕೋಟಿ ರೂ. ಅನುದಾನ ಕಡಿತ ಮಾಡಲಾಗಿದೆ.

ಜಲಸಂಪನ್ಮೂಲ ಇಲಾಖೆಗೆ ಬೊಮ್ಮಾಯಿ ಬಜೆಟ್​ನಲ್ಲಿ 22,854 ಕೋಟಿ ರೂ. ಅನುದಾನ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ ಅದನ್ನು 19,044 ಕೋಟಿ ರೂ.ಗೆ ಕಡಿತ ಮಾಡಿದ್ದಾರೆ. ಅಂದರೆ ಈ ಬಾರಿ ಒಟ್ಟು 3,810 ಕೋಟಿ ರೂ.ನಷ್ಟು ಅನುದಾನ ಕಡಿತ ಮಾಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬೊಮ್ಮಾಯಿ ಬಜೆಟ್​ನಲ್ಲಿ 20,494 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದರೆ, ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ ಇಲಾಖೆಗೆ 18,038 ಕೋಟಿ ರೂ‌. ಅನುದಾನ ಮೀಸಲಿರಿಸಿದ್ದಾರೆ. ಅದರಂತೆ ಇಲಾಖೆಗೆ 2,456 ಕೋಟಿ ಅನುದಾನ ಕಡಿತ ಮಾಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬೊಮ್ಮಾಯಿ ಬಜೆಟ್​ನಲ್ಲಿ 15,151 ಕೋಟಿ ರೂ. ಮೀಸಲಿರಿಸಿದ್ದರು. ಸಿದ್ದರಾಮಯ್ಯ ತಮ್ಮ ಬಜೆಟ್​ನಲ್ಲಿ 14,950 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದಾರೆ‌. ಆ ಮೂಲಕ 201 ಕೋಟಿ ಅನುದಾನ ಕಡಿತ ಮಾಡಲಾಗಿದೆ.

ಇತ್ತ ಲೋಕೋಪಯೋಗಿ ಇಲಾಖೆಗೆ ಬೊಮ್ಮಾಯಿ ಬಜೆಟ್​ನಲ್ಲಿ 10,741 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು‌. ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಇಲಾಖೆಗೆ 10,143 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಅದರಂತೆ 598 ಕೋಟಿ ರೂ. ಕಡಿತ ಮಾಡಲಾಗಿದೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಬೊಮ್ಮಾಯಿ ಬಜೆಟ್​ನಲ್ಲಿ 9,456 ಕೋಟಿ ರೂ. ಅನುದಾನ ಹಂಚಿದ್ದರು. ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್​ನಲ್ಲಿ 5,860 ಕೋಟಿ ರೂ. ಅನುದಾನ ಮೀಸಲಿರಿಸಿದ್ದಾರೆ. ಆ ಮೂಲಕ 3,596 ಕೋಟಿ ರೂ. ಅನುದಾನ ಕಡಿತ ಮಾಡಿದ್ದಾರೆ.

ಇದನ್ನೂ ಓದಿ : ಕರ್ನಾಟಕಕ್ಕೆ 50 ವರ್ಷ ಪೂರ್ಣ: 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂಬ ಹೆಸರಿನಲ್ಲಿ ಇಡೀ ವರ್ಷ ಕಾರ್ಯಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.