ETV Bharat / state

ಜೆಸ್ಕಾಂನಲ್ಲಿ ವಿದ್ಯುತ್ ಸಲಕರಣೆಗಳ ಅಭಾವ ಸೃಷ್ಟಿ, ಕೆಲಸವಿಲ್ಲದೇ ಸಂಕಟಕ್ಕೆ ಸಿಲುಕಿದ ಗುತ್ತಿಗೆದಾರರು

author img

By

Published : Aug 4, 2023, 5:36 PM IST

Updated : Aug 4, 2023, 9:18 PM IST

Gruha Jyothi Scheme: ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಾಲ್ಕೈದು ತಿಂಗಳಿಂದ ವಿದ್ಯುತ್ ಮಾಪಕ, ಪೋಲ್ ಹಾಗು ವೈರ್ ಅಭಾವ​ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

ಜೆಸ್ಕಾಂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು
ಜೆಸ್ಕಾಂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು

ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಜೆಸ್ಕಾಂನಲ್ಲಿ ವಿದ್ಯುತ್ ಮಾಪಕ, ಪೋಲ್ ಹಾಗು ವೈರ್ ಮತ್ತಿತರ ಸಲಕರಣೆ ದಾಸ್ತಾನು ಅಭಾವದಿಂದ ಗುತ್ತಿಗೆದಾರರು ಕೆಲಸವಿಲ್ಲದೇ ಖಾಲಿ ಉಳಿಯಬೇಕಾಗಿದೆ. ನಾಲ್ಕೈದು ತಿಂಗಳಿಂದ ವಿದ್ಯುತ್ ಮಾಪಕ, ವೈಯರ್ ದಾಸ್ತಾನು ಕೊರತೆಯಿಂದ ಮನೆ, ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೆಸ್ಕಾಂ ನಂಬಿ ಕೆಲಸವಿಲ್ಲದೇ ಆರ್ಥಿಕ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ.

ಜೆಸ್ಕಾಂ ನಿರ್ಲಕ್ಷ್ಯ ವಹಿಸಿದ್ದರಿಂದ ವಿದ್ಯುತ್ ಸಲಕರಣೆ ಪೂರೈಕೆಯಲ್ಲಿ ಅಭಾವ ಉಂಟಾಗಿದೆ. ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿದ್ಯುತ್ ಸಲಕರಣೆಗಳ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಸುಮಾರು ಹತ್ತು ಸಾವಿರ ಕುಟುಂಬಗಳು ಉಚಿತ ಗೃಹ ಜ್ಯೋತಿ ಯೋಜನೆಯಿಂದ ಹೊರಗೆ ಉಳಿಯಬೇಕಾಗಿದೆ ಎಂದು ಜೆಸ್ಕಾಂ ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಸ್ಕಾಂ ವಿರುದ್ಧ ದೂರು: ನೂತನ ಮನೆಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಾರಣ ಗುತ್ತಿಗೆದಾರರನ್ನು ನಂಬಿ ಬದುಕು ಸಾಗಿಸುವ ಅವರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಅಲ್ಲದೇ ಹೊಸ ಗ್ರಾಹಕರು ಹಾಗೂ ಜೆಸ್ಕಾಂ ಕಾಂಟ್ರಾಕ್ಟರ್ಸ್ ನಡುವೆ ಜಗಳ, ಕಿರಿಕಿರಿ ಉಂಟಾಗುತ್ತಿದೆಯಂತೆ. ಹೀಗಾಗಿ ವಿದ್ಯುತ್ ಮಾಪಕಗಳ ಕೊರತೆ ಅಭಾವ ಹಿನ್ನೆಲೆಯಲ್ಲಿ ಗುತ್ತಿಗೆದಾರರು, ಫಲಾನುಭವಿಗಳು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯುತ್ ಮಾಪಕ ಸೇರಿದಂತೆ ವಿವಿಧ ಸಲಕರಣೆಗಳನ್ನು ಸಮರ್ಪಕವಾಗಿ ಒದಗಿಸಬೇಕೆಂದು ಗುತ್ತಿಗೆದಾರರು ಜೆಸ್ಕಾಂ ಅಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೂ ಕಳೆದ ನಾಲ್ಕೈದು ತಿಂಗಳಿಂದ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದಾಗಿ ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜೆಸ್ಕಾಂ ಗುತ್ತಿಗೆದಾರರು ಹಿಂದಿನ ತಿಂಗಳು ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು ಕೇರ್ ಮಾಡುತ್ತಿಲ್ಲ ಎಂದು ದೂರಿದ್ದಾರೆ.

ಸಿಎಂಗೆ ಮುತ್ತಿಗೆ ಹಾಕಲು ನಿರ್ಧಾರ: ವಿದ್ಯುತ್ ಮಾಪಕಗಳ ಪೂರೈಕೆಯಲ್ಲಿ ಜೆಸ್ಕಾಂ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಮತ್ತು ಗ್ರಾಹಕರಿಂದ ಆಗುತ್ತಿರುವ ಕಿರಿಕಿರಿಯಿಂದ ಬೇಸತ್ತಿರುವ ಗುತ್ತಿಗೆದಾರರು ಇದೀಗ ಸಿಎಂ ಸಿದ್ದರಾಮಯ್ಯಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಇದೇ 5ರಂದು ಗೃಹ ಜ್ಯೋತಿ ಯೋಜನೆ ಅಧಿಕೃತ ಜಾರಿಯೊಂದಿಗೆ ಫಲಾನುಭವಿಗಳಿಗೆ ಉಚಿತ ಬಿಲ್ ನೀಡಲು ಮುಖ್ಯಮಂತ್ರಿ ಕಲಬುರಗಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಸುಮಾರು ಐದು ಸಾವಿರ ಗುತ್ತಿಗೆದಾರರು ಸಿಎಂಗೆ ಮತ್ತಿಗೆ ಹಾಕಿ ಈ ಸಮಸ್ಯೆ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.

ಇದನ್ನೂಓದಿ: Gruha Jyothi Scheme: ನಾಳೆ ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ; ಸಕಲ ಸಿದ್ಧತೆ

Last Updated : Aug 4, 2023, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.